Published on: November 15, 2023
ಚುಟುಕು ಸಮಾಚಾರ:14 ನವೆಂಬರ್ 2023
ಚುಟುಕು ಸಮಾಚಾರ:14 ನವೆಂಬರ್ 2023
- ಪ್ರಸ್ತುತ ಮೊಬೈಲ್ ಕ್ಯೂಆರ್ ಟಿಕೆಟ್ಗಳನ್ನು ಮೊಬೈಲ್ ಅಪ್ಲಿಕೇಷನ್ಗಳ ಮೂಲಕ ಒಬ್ಬ ಪ್ರಯಾಣಿಕನಿಗೆ ಒಂದು ಟಿಕೆಟ್ ನೀಡಲಾಗುತ್ತಿದೆ. ಗುಂಪು ಟಿಕೆಟ್ಗಳನ್ನೂ ಕ್ಯೂಆರ್ ಕೋಡ್ ಮೂಲಕ ನೀಡಬೇಕು ಎಂದು ಪ್ರಯಾಣಿಕರಿಂದ ಬೇಡಿಕೆ ಬಂದಿದ್ದ ಹಿನ್ನೆಲೆಯಲ್ಲಿ ಮೊಬೈಲ್ ಕ್ಯೂಆರ್ ಗ್ರೂಪ್ ಟಿಕೆಟ್ ಜಾರಿಗೆ ತರಲಾಗಿದೆ. ಈ ಟಿಕೆಟ್ಗಳು ಟೋಕನ್ ದರಕ್ಕಿಂತ ಶೇ 5ರಷ್ಟು ರಿಯಾಯಿತಿಯನ್ನು ಹೊಂದಿರುತ್ತದೆ. ಟಿಕೆಟ್ ಕೌಂಟರ್ಗಳಲ್ಲಿ ಟೋಕನ್ ಖರೀದಿಸಲು ಸರತಿ ನಿಲ್ಲುವುದನ್ನು ತಪ್ಪಿಸಲು, ಪ್ರಯಾಣಿಕರು ಮನೆ, ಕಚೇರಿ ಸಹಿತ ತಾವಿರುವ ಸ್ಥಳದಿಂದಲೇಮುಂಗಡವಾಗಿ ಮೊಬೈಲ್ ಕ್ಯೂಆರ್ ಟಿಕೆಟ್ ಪಡೆಯಬಹುದು.
- ಕೆಎಚ್ಐಆರ್ ಸಿಟಿಯ ಸ್ಥಾಪನೆ: ಬೆಂಗಳೂರು ನಗರದಿಂದ 60–80 ಕಿ.ಮೀ ದೂರದಲ್ಲಿ ವಿಶ್ವ ದರ್ಜೆಯ ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನಾ ನಗರ (ಕೆಎಚ್ಐಆರ್ ಸಿಟಿ) ವನ್ನು ಅಭಿವೃದ್ಧಿಪಡಿಸಲಾಗುವುದು. ಇಲ್ಲಿ ಸುಮಾರು ₹40 ಸಾವಿರ ಕೋಟಿ ಹೂಡಿಕೆ ನಿರೀಕ್ಷೆ ಇದ್ದು, ಸುಮಾರು 80 ಸಾವಿರದಿಂ ದ 1 ಲಕ್ಷ ಕೋಟಿ ಉದ್ಯೋಗ ಸೃಷ್ಟಿ ಆಗಲಿದೆ. ಜಗತ್ತಿನ ಅತ್ಯುತ್ತಮ ಕಂಪನಿಗಳು, ವಿಶ್ವವಿದ್ಯಾಲಯಗಳ ಕ್ಯಾಂಪಸ್, ಆಸ್ಪತ್ರೆ, ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳು, ಆಧುನಿಕ ನವೋದ್ಯಮಗಳು, ಕೆಎಚ್ಐಆರ್ ಸಿಟಿಯಲ್ಲಿ ಸ್ಥಾಪನೆಗೊಳ್ಳಲಿವೆ. ಒಟ್ಟು ಎರಡು ಹಂತಗಳಲ್ಲಿ ಇದನ್ನು ತಲಾ ಒಂದು ಸಾವಿರ ಎಕರೆಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆಯು ಸಾಕಾರಗೊಂಡರೆ ₹ 1 ಲಕ್ಷ ಕೋಟಿಗಳಷ್ಟು ವಾರ್ಷಿಕ ವರಮಾನ ಉತ್ಪತ್ತಿ ಆಗಲಿದ್ದು, ರಾಜ್ಯದ ಜಿಡಿಪಿಗೆ ಶೇ 5 ರಷ್ಟು ಕೊಡುಗೆ ಇದರಿಂದ ಬರಲಿದೆ. ಅಮೆರಿಕ, ಸಿಂಗಪುರ, ಜಪಾನ್, ಯುಎಇ, ಸ್ವೀಡನ್, ಡೆನ್ಮಾರ್ಕ್, ಚೀನಾ ಮುಂತಾದ ದೇಶಗಳಲ್ಲಿ ಇಂತಹ ಸಿಟಿಗಳಿವೆ. ಕೆಎಚ್ಐಆರ್ ಸಿಟಿಯಲ್ಲಿ ಆರೋಗ್ಯ ಕ್ಷೇತ್ರದ ಕಂಪನಿಗಳು, ವೈದ್ಯಕೀಯ ಕೇಂದ್ರಗಳು, ರಿಯಲ್ ಎಸ್ಟೇಟ್, ಹೂಡಿಕೆದಾರರು ಮತ್ತು ವಿಮಾ ಕಂಪನಿಗಳ ನಡುವೆ ಸಹಭಾಗಿತ್ವಕ್ಕೆ ಒತ್ತು ಇರಲಿದೆ. ಇದು ಅಂತಿಮವಾಗಿ ಜಾಗತಿಕ ಮಟ್ಟದಲ್ಲಿ ಉತ್ಕೃಷ್ಟತೆ ಮಾನದಂಡವಾಗಿ ಗುರುತಿಸಿಕೊಳ್ಳುವಂತೆ ಮಾಡುವುದು ಸರ್ಕಾರದ ಗುರಿಯಾಗಿದೆ.
- ಮಕ್ಕಳ ಸ್ನೇಹಿ ಮತ್ತು ಮಕ್ಕಳ ಸುರಕ್ಷಿತ ಪಂಚಾಯಿತಿ ಹಿನ್ನೆಲೆಯಲ್ಲಿ ಒಂದು ದಿನ ಮಕ್ಕಳ ಗ್ರಾಮಸಭೆ ಆಯೋಜಿಸಲಾಗುತ್ತದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ನವೆಂಬರ್ 14 ರಿಂದ ಜನವರಿ 24, 2024 ರವರೆಗೆ ಮಕ್ಕಳ ಸ್ನೇಹಿ ಮತ್ತು ಮಕ್ಕಳ ಸುರಕ್ಷಿತ ಪಂಚಾಯಿತಿ ಹಿನ್ನೆಲೆಯಲ್ಲಿ ಒಂದು ದಿನ ಮಕ್ಕಳ ಗ್ರಾಮಸಭೆ ಆಯೋಜಿಸಲಾಗುತ್ತದೆ.ಮಕ್ಕಳ ಸರ್ವಾಂಗೀಣ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಅಭಿಯಾನ ನಡೆಯಲಿದೆ. ಶಾಲಾ ಮಕ್ಕಳ ಅಭಿವೃದ್ಧಿಯ ಅಂಕಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹಾಗೂ ಮಕ್ಕಳ ಸ್ನೇಹಿ ಮತ್ತು ಮಕ್ಕಳ ಸುರಕ್ಷಿತ ಪಂಚಾಯತ್ ಗಳನ್ನಾಗಿಸಲು ಮಕ್ಕಳ ಪಂಚಾಯತ್ ಅಭಿಯಾನವನ್ನು ಆರಂಭಿಸಲಾಗಿದೆ.
- ವಿಶ್ವದ ಮೊದಲ ಚಿಕೂನ್ಗುನ್ಯಾ ಲಸಿಕೆ ‘ಇಕ್ಸ್ ಚಿಕ್ ‘ಗೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತವು (ಎಫ್ಡಿಎ) ಅನುಮೋದನೆ ನೀಡಿದೆ. 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಹಾಗೂ ಸೊಳ್ಳೆಯಿಂದ ಹರಡುವ ಈ ರೋಗದಿಂದ ಬಳಲುತ್ತಿರುವವರಿಗೆ ಈ ಲಸಿಕೆಯನ್ನು ನೀಡಲು ಅನುಮೋದನೆ ನೀಡಲಾಗಿದೆ. ಈ ಲಸಿಕೆಯ ಒಂದೇ ಡೋಸ್ ನೀಡಲಾಗುವುದು ಎಂದು ಎಫ್ಡಿಎ ಹೇಳಿದೆ. ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ವಾಲ್ನೇವಾ ಕಂಪನಿ ಈ ಲಸಿಕೆಯನ್ನು ತಯಾರಿಸಿದೆ.
- ಕಣಿವೆ, ದುರ್ಗಮ ಹಾದಿ, ಯಾವುದೇ ಸಾರಿಗೆ ಸೌಕರ್ಯಗಳಿಲ್ಲದ ಜನವಸತಿ ಪ್ರದೇಶಗಳಿಗೆ ತ್ವರಿತಗತಿಯಲ್ಲಿ ಅಗತ್ಯ ವಸ್ತುಗಳನ್ನು ಪೂರೈಸಲು ಇಂಡೋ ಟಿಬೆಟಿಯನ್ ಗಡಿ ಭದ್ರತಾ ಪಡೆ (ಐಟಿಬಿಪಿ) ಡ್ರೋನ್ ಆಧಾರಿತ ಲಾಜಿಸ್ಟಿಕ್ಸ್ ಸೇವೆ ಆರಂಭಿಸಿದೆ.
- ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಪಂಚಕುಲ ಜಿಲ್ಲೆಯ ಪಿಂಜೋರ್ನಲ್ಲಿ ಹಾಟ್ ಏರ್ (ಬಿಸಿ ಗಾಳಿ) ಬಲೂನ್ ಸಫಾರಿ ಯೋಜನೆಯನ್ನು ಉದ್ಘಾಟಿಸಿದರು. ಈ ಉಪಕ್ರಮವು ಪ್ರದೇಶಕ್ಕೆ ಹೊಸ ಗುರುತನ್ನು ಒದಗಿಸುವುದಲ್ಲದೆ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಸರ್ಕಾರವು ಹರಿಯಾಣದಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಾಹಸ ಚಟುವಟಿಕೆಗಳನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ. ಪಂಚಕುಲ ಪ್ರದೇಶದ ಪಿಂಜೋರ್-ಕಲ್ಕಾವನ್ನು ಹಿಮಾಚಲ ಪ್ರದೇಶದ ಹೆಬ್ಬಾಗಿಲು ಎಂದು ಪರಿಗಣಿಸಲಾಗಿದೆ ಮತ್ತು ಉತ್ತಮ ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೊಂದಿದೆ. ಜಾಗತಿಕ ಪ್ರವಾಸಿಗರನ್ನು ಹರಿಯಾಣಕ್ಕೆ ಆಕರ್ಷಿಸಲು ಈ ಯೋಜನೆಯ ಭಾಗವಾಗಿ, ಗುರುಗ್ರಾಮ್ ಮತ್ತು ನುಹ್ ಜಿಲ್ಲೆಗಳ ಅರಾವಳಿ ಪರ್ವತ ಶ್ರೇಣಿಯಲ್ಲಿ 10,000 ಎಕರೆ ಭೂಮಿಯನ್ನು ವಿಶ್ವದ ಅತಿದೊಡ್ಡ ಜಂಗಲ್ ಸಫಾರಿ ಪಾರ್ಕ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ.
- ಉತ್ತರ ಪ್ರದೇಶದ ಸರಯೂ ನದಿಯ ದಡದಲ್ಲಿರುವ ರಾಮನಗರಿ ಅಯೋಧ್ಯೆ ಅದ್ಭುತ ದೀಪೋತ್ಸವವನ್ನ ಆಚರಿಸಿದೆ. ೫೧ ಘಾಟ್’ಗಳಲ್ಲಿ 22.23 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ‘ಗಿನ್ನಿಸ್ ವಿಶ್ವ ದಾಖಲೆ’ಯನ್ನು ನಿರ್ಮಿಸಿದೆ. ಈ ಮೂಲಕ ನಗರದ ಹಿಂದಿನ17 ಲಕ್ಷ ದೀಪಗಳ ದಾಖಲೆಯನ್ನು ಮುರಿದಿದೆ. ಡ್ರೋನ್ ಮೂಲಕ ದೀಪಗಳನ್ನು ಎಣಿಕೆ ಮಾಡಲಾಗಿದೆ. ‘ ದೀಪೋತ್ಸವ 2023’ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಿರ್ಮಿಸಿದೆ.