Published on: October 15, 2022

ಯಶಸ್ವಿನಿ ಯೋಜನೆ

ಯಶಸ್ವಿನಿ ಯೋಜನೆ

ಸುದ್ದಿಯಲ್ಲಿ ಏಕಿದೆ?

ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಿದೆ. ತಾತ್ವಿಕ ಅನುಮೋದನೆ ನೀಡಿ ಸರ್ಕಾರ ಆದೇಶ ನೀಡಿದೆ. 

ಹಿನ್ನೆಲೆ

  • 2018ರಲ್ಲಿ ಈ ಯೋಜನೆ ರದ್ದುಗೊಳಿಸಲಾಗಿತ್ತು. ಯಶಸ್ವಿನಿ ಯೋಜನೆಗಾಗಿ ರೈತರು ಹಾಗೂ  ಸಹಕಾರಿ ಸಂಘಗಳು ಬೇಡಿಕೆ ಮುಂದಿಟ್ಟಿದ್ದರು. ಈ ಹಿನ್ನೆಲೆ ಸರ್ಕಾರ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಿ ಆದೇಶ ಹೊರಡಿಸಿದೆ. 2022-23ನೇ ಬಜೆಟ್ ನಲ್ಲಿ 300 ಕೋಟಿ ಘೋಷಣೆ ಮಾಡಲಾಗಿದೆ.

ಮುಖ್ಯಾಂಶಗಳು

  • ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳ ಸದಸ್ಯರಿಗೆ ನಾಲ್ಕು ಜನರ ಕುಟುಂಬಕ್ಕೆ ತಲಾ 500 ರೂ. ಹಾಗೂ ನಗರ ಪ್ರದೇಶದ ಸಹಕಾರಿಗಳಿಗೆ 1000 ರೂ. ವಂತಿಗೆ ನಿಗದಿ ಪಡಿಸಲಾಗಿದೆ.
  • ನಾಲ್ಕು ಮಂದಿಗಿಂತ ಹೆಚ್ಚಿನ ಸದಸ್ಯರು ಇರುವ ಕುಟುಂಬ ಗಳಿಗೆ ಹೆಚ್ಚುವರಿ ಸದಸ್ಯರಿಗೆ ತಲಾ 200 ರೂ. ವಂತಿಗೆ ಪಾವತಿಸಿ, ನೊಂದಾಯಿಸಬಹುದು.
  • ಈ ಯೋಜನೆಯಡಿ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಒಂದು ಕುಟುಂಬಕ್ಕೆ 5 ಲಕ್ಷ ರೂ. ವರೆಗಿನ ವೆಚ್ಚದಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದು. ರಾಜ್ಯ ಸರ್ಕಾರವು ಇದಕ್ಕಾಗಿ ಪ್ರಸಕ್ತ ಆಯವ್ಯಯದಲ್ಲಿ 300 ಕೋಟಿ ರೂ. ಅನುದಾನ ನಿಗದಿ ಪಡಿಸಿದೆ.
  • ಯಶಸ್ವಿ ಯೋಜನೆ ಅವಧಿ 01-01-2023 ರಿಂದ 30-12-2023 ರವರೆಗೂ ಜಾರಿಯಲ್ಲಿರುತ್ತದೆ. 1650 ಖಾಯಿಲೆಗಳಿಗೆ ಈ ಯೋಜನೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಏನಿದು ಯಶಸ್ವಿನಿ ಯೋಜನೆ?

  • ಯಶಸ್ವಿನಿ ಗ್ರಾಮೀಣ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆ. ಕರ್ನಾಟಕದ ರಾಜ್ಯದ ಗ್ರಾಮೀಣ ಸಹಕಾರಿಗಳಿಗಾಗಿಯೇ ರೂಪಗೊಂಡಿರುವಒಂದು ಸ್ವಯಂ-ನಿಧಿ ಶಸ್ತ್ರಚಿಕಿತ್ಸಾ ಯೋಜನೆ.
  • ಈ ಯೋಜನೆಯಡಿ ಗ್ರಾಮೀಣ ಸಹಕಾರಿಯೊಬ್ಬರು ತಿಂಗಳಿಗೆ ಇಂತಿಷ್ಟರಂತೆ ನಿಗದಿತ ಪ್ರಮಾಣದಲ್ಲಿ ಒಂದು ವರ್ಷದ ಅವಧಿಯಲ್ಲಿ ಯೋಜನೆಯಲ್ಲಿ ಒಳಗೊಂಡ ಯಾವುದೇ ಶಸ್ತ್ರ ಚಿಕಿತ್ಸೆಯನ್ನು ನಿಗದಿತ ಮಿತಿಯೊಳಗೆ, ಷರತ್ತು ಮತ್ತು ನಿಯಮಗಳಿಗೆ ಒಳಪಟ್ಟು ಟ್ರಸ್ಟ್​​ನಿಂದ ಅಂಗೀಕೃತ ಯಾವುದೇ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಪಡೆಯಬಹುದು.

 ಫಲಾಭವಿಯಾಗಲು ಇರಬೇಕಾದ ಅರ್ಹತೆಗಳೇನು?

  • ಈ ಯೋಜನೆಯ ಫಲಾನುಭವಿಯಾಗಲು ಕನಿಷ್ಟ 3 ತಿಂಗಳು ಮುಂಚಿತ ಅರ್ಹ ಗ್ರಾಮೀಣ ಸಹಕಾರ ಸಂಘವೊಂದರ ಸದಸ್ಯರಾಗಿರಬೇಕು. ಅಲ್ಲದೇ ಗ್ರಾಮೀಣ ಸಹಕಾರ ಸಂಘ/ಬ್ಯಾಂಕುಗಳೊಡನೆ ವ್ಯವಹರಿಸುತ್ತಿರುವ ಗ್ರಾಮೀಣ ಸ್ತ್ರೀ ಶಕ್ತಿ ಗುಂಪು, ಸ್ವ-ಸಹಾಯ ಗುಂಪಿನ ಸದಸ್ಯರು ಮತ್ತು ಅವರ ಕುಟುಂಬದ ಎಲ್ಲ ಸದಸ್ಯರು ಯೋಜನೆಯ ಫಲಾನುಭವಿಯಾಗಬಹುದು.
  • ಗ್ರಾಮೀಣ ಪ್ರದೇಶದಲ್ಲಿರುವ ಸಹಕಾರಿ ಸಂಘ/ಸಹಕಾರಿ ಬ್ಯಾಂಕುಗಳಲ್ಲಿ ಹಣಕಾಸಿನ ವಹಿವಾಟು ಹೊಂದಿರುವ ಸ್ವ-ಸಹಾಯ ಗುಂಪಿನ ಸದಸ್ಯರು ಕೂಡ ಯೋಜನೆಯ ಸೌಲಭ್ಯ ಪಡೆಯಬಹುದು.
  • ನಗರ/ಪಟ್ಟಣ ಪ್ರದೇಶದಲ್ಲಿ ಸಹಕಾರಿ ಮೀನುಗಾರರು, ಸಹಕಾರಿ ಬೀಡಿ ಕಾರ್ಮಿಕರು ಮತ್ತು ಸಹಕಾರಿ ನೇಕಾರರು ಕೂಡ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.

ಫಲಾನುಭವಿಗಳಿಗೆ ದೊರೆಯುವ ಸೌಲಭ್ಯಗಳು 

  • ಟ್ರಸ್ಟನಿಂದ ಅಂಗೀಕೃತವಾದ ಆಸ್ಪತ್ರೆಗಳಲ್ಲಿ ಯಶಸ್ವಿನಿ ಫಲಾನುಭವಿಗಳು ಹೊರರೋಗಿ ಸಲಹೆಯನ್ನು ರೂ 100ಗಳನ್ನು ಸಾಮಾನ್ಯ ಪರೀಕ್ಷೆಗೆ ಮತ್ತು ವಿಶೇಷ ತಜ್ಙರಿಂದ ಪರೀಕ್ಷೆ ಮಾಡಿಸಿಕೊಳ್ಳಲು ರೂ.200ಗಳನ್ನು ಪಾವತಿಸಿ ಮೂರು ತಿಂಗಳವರೆಗೆ ಅದೇ ಕಾರ್ಡ್​​​​​ನಲ್ಲಿ ತಪಾಸಣೆ ಮಾಡಿಸಿಕೊಳ್ಳಬಹುದು.
  • ಯಶಸ್ವಿನಿ ಕಾರ್ಡ್​ದಾರರು ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಕ್ಲಿನಿಕ್ ಅಥವಾ ಇನ್ನಾವುದೇ ಇನ್ವೆಸ್ಟಿಗೇಷನ್ ಗಳನ್ನು ಶೇ 25 ರಿಯಾಯಿತಿ ದರದಲ್ಲಿ ಪಡೆಯಬಹುದು.

ಯಶಸ್ವಿನಿ ಯೋಜನೆಯಡಿಯಲ್ಲಿ ಒಳಪಡದ ಶಸ್ತ್ರಚಿಕಿತ್ಸೆಗಳು 

  • ಶಸ್ತ್ರಚಿಕಿತ್ಸೆ ಅವಶ್ಯವಿಲ್ಲದ ಯಾವುದೇ ವೈದ್ಯಕೀಯ ಚಿಕಿತ್ಸೆ ಯೋಜನೆಯಲ್ಲಿ ಲಭ್ಯವಿರುವುದಿಲ್ಲ. ಇದಲ್ಲದೇ ಚಿಕಿತ್ಸೆಗಳಾದ ಕೀಮೊಥೆರಪಿ, ರೇಡಿಯೋ ಥೆರಪಿ, ಜಾಯಿಂಟ್ ಬದಲಾವಣೆ, ಸುಟ್ಟು ಗಾಯಗಳು, ರಸ್ತೆ ಅಪಘಾತಗಳು, ಹಲ್ಲಿನ ಶಸ್ತ್ರಚಿಕಿತ್ಸೆ, ಚರ್ಮದ ಗ್ರಾಫ್ಟಿಂಗ್,ಸ್ಟಂಟ್, ಇಂಪ್ಲಾಂಟ್ಸ್ ಇತ್ಯಾದಿ ಸೌಲಭ್ಯಗಳು ಯೋಜನೆಯಲ್ಲಿ ಸೇರಿರುವುದಿಲ್ಲ. ಇಂತಹ ಅನಾರೋಗ್ಯಗಳಿಗೆ ಫಲಾನುಭವಿ ಪಡೆಯುವ ವೈದ್ಯಕೀಯ ಚಿಕಿತ್ಸೆ, ಔಷಧೋಪಚಾರಗಳ ಹಾಗೂ ಶಸ್ತ್ರಚಿಕಿತ್ಸಾ ವೆಚ್ಚವನ್ನು ಫಲಾನುಭವಿಗಳೇ ಭರಿಸಬೇಕು.

ರೈತರಿಗೆ ಹೇಗೆ ಅನುಕೂಲ?

  • ಯಶಸ್ವಿನಿ ಯೋಜನೆಯಡಿಯಲ್ಲಿ ಫಲಾನುಭವಿಯಾಗಿರುವ ರೈತರು ಖಾಸಗಿ ಆಸ್ಪತ್ರೆಗೆ ದಾಖಲಾಗಲು ಸರ್ಕಾರಿ ಆಸ್ಪತ್ರೆಯ ಅನುಮತಿಯ ಅಗತ್ಯವಿಲ್ಲ. ರಾಜ್ಯದ ಬೃಹತ್ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಸಿಗಲಿದೆ.