Published on: August 30, 2022

ಸುದ್ಧಿ ಸಮಾಚಾರ – 30 ಆಗಸ್ಟ್ 2022

ಸುದ್ಧಿ ಸಮಾಚಾರ – 30 ಆಗಸ್ಟ್ 2022

  • ಭಾರತಮಾಲಾ ಪರಿಯೋಜನಾ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎ) ಬೆಳಗಾವಿ– ಗೋವಾ ನಡುವೆ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌ 748 ಎಎ) ಮೇಲ್ದರ್ಜೆಗೆ ಏರಿಸುವ ಕಾಮಗಾರಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆ ಕಡ್ಡಾಯ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ನಿರ್ದೇಶಿಸಿದೆ.

  • ಎಂಟು ನೂತನ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ‘ಕರ್ನಾಟಕ ವಿವಿಗಳ ಕಾಯ್ದೆ-2000’ಕ್ಕೆ ತಿದ್ದುಪಡಿ ತರಲು ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದರಿಂದಾಗಿ ಚಾಮರಾಜನಗರ, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ, ಬೀದರ್ ಮತ್ತು ಮಂಡ್ಯ ವಿ.ವಿ.ಗಳ ಸ್ಥಾಪನೆ ಸುಗಮವಾಗಿ ನಡೆಯಲಿದೆ.
  • ಕಾವೇರಿ ಜಲಾನಯನ ಪ್ರದೇಶದ ಒಂಬತ್ತು ಜಿಲ್ಲೆಗಳ ವ್ಯಾಪ್ತಿಯಲ್ಲಿ ಈಶಾ ಫೌಂಡೇಷನ್ನ ಕಾವೇರಿ ಕೂಗು ಹಾಗೂ ಸರ್ಕಾರದ ವಿವಿಧ ಕೃಷಿ ಅರಣ್ಯ ಯೋಜನೆಗಳ ಕುರಿತು ಜಂಟಿಯಾಗಿ ಪ್ರಚಾರ ನಡೆಸಲು ರಾಜ್ಯ ಸರ್ಕಾರ ಮತ್ತು ಈಶಾ ಔಟ್ರೀಚ್ ಒಪ್ಪಂದಕ್ಕೆ ಸಹಿ ಹಾಕಿವೆ.
  • ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2022–23ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ‘ಗೌರವ ಪ್ರಶಸ್ತಿ’ಗೆ ಚನ್ನರಾಯಪಟ್ಟಣದ ಗಾಯಕ ಸಿ.ಆರ್. ರಾಮಚಂದ್ರ ಹಾಗೂ ಮಂಗಳೂರಿನ ನೃತ್ಯ ಗುರು ಗೀತಾ ಸರಳಾಯ ಆಯ್ಕೆಯಾಗಿದ್ದಾರೆ.
  • ‘ಕುಲಪತಿಗಳ ನಡೆ ರೈತರ ಕಡೆಗೆ’

ಕೃಷಿ ಸಚಿವರ ‘ರೈತರೊಂದಿಗೊಂದು ದಿನ’ ಹಾಗೂ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’  ಕಾರ್ಯಕ್ರಮಗಳ ಮಾದರಿಯಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಬಸವರಾಜಪ್ಪ ಅವರು ‘ಕುಲಪತಿಗಳ ನಡೆ – ರೈತರ ಕಡೆಗೆ’ ಎಂಬ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಪ್ರಥಮ ಬಾರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಇಂಡಿ ತಾಲ್ಲೂಕಿನ ಅಹಿರಸಂಗ ಗ್ರಾಮದಲ್ಲಿ ಆಗಸ್ಟ್‌ 22 ರಂದು ಕುಲಪತಿಗಳ ನಡಿಗೆ ರೈತರ ಕಡೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

  • ಖ್ಯಾತ ವಿಜ್ಞಾನಿ ಸಮೀರ್ ವಿ.ಕಾಮತ್ ಅವರು ರಕ್ಷಣಾ ಸಚಿವಾಲಯದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಮುಖ್ಯಸ್ಥ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
  • ಬೇನಾಮಿ ವಹಿವಾಟುಗಳ ನಿಷೇಧ ಕಾಯ್ದೆ– 1988ರ 3(2)ನೇ ಸೆಕ್ಷನ್ ಅಸಾಂವಿಧಾನಿಕ. ಜತೆಗೆ ಈ ಕಾಯ್ದೆಗೆ 2016ರಲ್ಲಿ ತರಲಾಗಿ ರುವ ತಿದ್ದುಪಡಿಗಳನ್ನು ಪೂರ್ವಾನ್ವಯ ಮಾಡಲು ಸಾಧ್ಯ ವಿಲ್ಲ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.
  • ಖೋ-ಖೋ, ಕಬಡ್ಡಿಯಂತೆ ದಹಿ ಹಂಡಿಗೂ ಈಗ ಮಹಾರಾಷ್ಟ್ರದಲ್ಲಿ ಆಟದ ಸ್ಥಾನಮಾನ ಸಿಕ್ಕಿದೆ. ಇದನ್ನು ಒಂದು ರೀತಿಯ ಸಾಹಸ ಕ್ರೀಡೆ ಎಂದು ಪರಿಗಣಿಸಲಾಗುವುದು
  • ರಾಷ್ಟ್ರೀಯ ಮಟ್ಟದ ಶಿಕ್ಷಕ ಪ್ರಶಸ್ತಿ: ಕೇಂದ್ರ ಶಿಕ್ಷಣ ಸಚಿವಾಲಯವು ನೀಡುವ ರಾಷ್ಟ್ರೀಯ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಚಿತ್ರದುರ್ಗ ಜಿಲ್ಲೆಯ ಅಮೃತಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಉಮೇಶ್‌ ಟಿ.ಪಿ. ಹಾಗೂ ತುಮಕೂರು ನಗರದ ಹೊರವಲಯದ ಅಮಲಾಪುರದಲ್ಲಿರುವ ಕೇಂದ್ರೀಯ ವಿದ್ಯಾಲಯದ ಜೀವಶಾಸ್ತ್ರ ಶಿಕ್ಷಕಿ ವಿ.ಪೊನಶಂಕರಿ ಅವರು ಆಯ್ಕೆಯಾಗಿದ್ದಾರೆ.
  • ಗ್ಲ್ಯಾಸ್ಗೋ ಜೊತೆ ಒಪ್ಪಂದ; ಕಳವಾಗಿದ್ದ ಐತಿಹಾಸಿಕ ಕಲಾಕೃತಿಗಳು ಭಾರತಕ್ಕೆ ರವಾನೆ

ಇತಿಹಾಸದಲ್ಲಿ ಇದೇ ಮೊದಲು ಎಂಬಂತೆ ಭಾರತದಿಂದ ಕಳವಾಗಿದ್ದ ಐತಿಹಾಸಿಕ ಕಲಾಕೃತಿಗಳನ್ನು ಭಾರತಕ್ಕೆ ಮರಳಿಸುವ ಐತಿಹಾಸಿಕ ಒಪ್ಪಂದಕ್ಕೆ ಭಾರತ ಮತ್ತು ಗ್ಲ್ಯಾಸ್ಗೋ  ಸರ್ಕಾರಗಳು ಸಹಿ ಹಾಕಿವೆ. ಗ್ಲ್ಯಾಸ್ಗೋ ಮೂಲದ ವಸ್ತು ಸಂಗ್ರಹಾಲಯವೊಂದು 14 ನೇ ಶತಮಾನದ ಇಂಡೋ – ಪರ್ಷಿಯನ್ ಖಡ್ಗ ಸೇರಿದಂತೆ ಏಳು ಕಲಾಕೃತಿಗಳನ್ನು ಸ್ವದೇಶಕ್ಕೆ ಹಿಂದಿರುಗಿಸಲು ಭಾರತ ಸರ್ಕಾರದೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ.

  • ಭಾರತ ಮತ್ತು ಅಮೆರಿಕ ಸೇನಾಪಡೆಗಳ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ 18ನೇ ಆವೃತ್ತಿಯ ‘ಯುದ್ಧ ಅಭ್ಯಾಸ’ವನ್ನು ಅಕ್ಟೋಬರ್‌ 14ರಿಂದ 31ರವರೆಗೆ ನಡೆಸಲು ಉದ್ದೇಶಿಸಿದ್ದು, ಇದಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿದೆ.