Published on: September 15, 2021

ಇಂಜಿನಿಯರ್ಗಳ ದಿನ

ಇಂಜಿನಿಯರ್ಗಳ ದಿನ

ಸುದ್ಧಿಯಲ್ಲಿ ಏಕಿದೆ? ಭಾರತದಲ್ಲಿ ಸೆಪ್ಟೆಂಬರ್ 15 ರಂದು ಇಂಜಿನಿಯರ್‌ಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನದಂದು ಇಂಜಿನಿಯರ್‌ಗಳ ದಿನವನ್ನು ಆಚರಿಸಲಾಗುತ್ತದೆ. ಕರುನಾಡಿನ ಹೆಮ್ಮೆಯ ಪುತ್ರ, ಭಾರತ ರತ್ನ ವಿಶ್ವೇಶ್ವರಯ್ಯನವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ದಿನವನ್ನು ಇಂಜಿನಿಯರ್‌ಗಳ ದಿನವನ್ನಾಗಿ ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿದೆ.

  • ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ಇಂಜಿನಿಯರ್‌ಗಳು ಮಾಡಿರುವ ಸಾಧನೆಯನ್ನು ಸ್ಮರಿಸಲು ಮತ್ತು ಗೌರವಿಸುವ ಸಲುವಾಗಿ ಈ ದಿನವನ್ನು ಮೀಸಲಿಡಲಾಗಿದೆ.
  • 20 ನೇ ಶತಮಾನದ ಶ್ರೇಷ್ಟ ಎಂಜಿನಿಯರ್, ಶಿಕ್ಷಣ ತಜ್ಞ, ಅರ್ಥಶಾಸ್ತ್ರಜ್ಞ, ವಿದ್ವಾಂಸರಾದ ವಿಶ್ವೇಶ್ವರಯ್ಯ ಅವರು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಆದಾಗ್ಯೂ, ಯುನೆಸ್ಕೋ ವಾರ್ಷಿಕವಾಗಿ ಮಾರ್ಚ್ 4 ರಂದು ವಿಶ್ವ ಎಂಜಿನಿಯರ್‌ಗಳ ದಿನವನ್ನು ಆಚರಿಸುತ್ತದೆ. ಆಧುನಿಕ ಯುಗದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಕೊಡುಗೆ ನೀಡಿದ ವಿವಿಧ ಎಂಜಿನಿಯರ್‌ಗಳ ಪ್ರಯತ್ನಗಳನ್ನು ಅಂಗೀಕರಿಸಲು ಎಂಜಿನಿಯರ್‌ಗಳ ದಿನವನ್ನು ಆಚರಿಸಲಾಗುತ್ತದೆ.

ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಬಗ್ಗೆ

  • ಸೆಪ್ಟೆಂಬರ್ 15, 1860ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಸಾಧನೆ ಈ ಭೂಮಿ ಇರುವ ತನಕ ಶಾಶ್ವತ. ಇವರ ದೂರದರ್ಶಿತ್ವವುಳ್ಳ ಯೋಜನೆಗಳು ಇಂದಿಗೂ ವಿಶ್ವೇಶ್ವರಯ್ಯನವರ ಸಾಧನೆ, ಬುದ್ಧಿವಂತಿಕೆಗೆ ಸಾಕ್ಷಿಯಾಗಿ ನಿಂತಿವೆ.
  • ಈ ದೇಶಕ್ಕೆ ಸರ್ ಎಂ ವಿ ನೀಡಿದ ಕೊಡುಗೆ ಅಪೂರ್ವ. ಕಾವೇರಿಗೆ ಅಡ್ಡಲಾಗಿ ಮಂಡ್ಯ ಜಿಲ್ಲೆಯಲ್ಲಿ ಕಟ್ಟಲಾದ ಕೃಷ್ಣರಾಜ ಸಾಗರ ಅಣೆಕಟ್ಟು ಸರ್ ಎಂ ವಿಶ್ವೇಶ್ವರಯ್ಯನವರ ಶ್ರಮದ ಫಲ. ಮೈಸೂರಿನ ನಾಲ್ಕನೇ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಕಾಲದಲ್ಲಿ ದಿವಾನರಾಗಿದ್ದ ವಿಶ್ವೇಶ್ವಯ್ಯನವರು ದೂರದೃಷ್ಟಿಯುಳ್ಳ ಅನೇಕ ಕೆಲಸ ಕಾರ್ಯಗಳನ್ನು ಮಾಡಿದ್ದರು.
  • ವಿಶ್ವೇಶ್ವರಯ್ಯ ಅವರು ಬ್ಯಾಂಕಿಂಗ್, ಶಿಕ್ಷಣ, ವಾಣಿಜ್ಯ, ಕೃಷಿ, ನೀರಾವರಿ ಮತ್ತು ಕೈಗಾರಿಕೀಕರಣ ಕ್ಷೇತ್ರದಲ್ಲಿ ಪ್ರಮುಖ ಸುಧಾರಣೆಗಳನ್ನು ತಂದರು ಮತ್ತು ಭಾರತದಲ್ಲಿ ಆರ್ಥಿಕ ಯೋಜನೆಗೆ ಮುಂಚೂಣಿಯಲ್ಲಿದ್ದರು. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಮಹತ್ವದ ಕೊಡುಗೆಗಳು 1899 ರಲ್ಲಿ ಡೆಕ್ಕನ್ ಕಾಲುವೆಗಳಲ್ಲಿನ ನೀರಾವರಿಯ ಬ್ಲಾಕ್ ವ್ಯವಸ್ಥೆ ಮತ್ತು ಹೈದರಾಬಾದಿನಲ್ಲಿ ಪ್ರವಾಹ ರಕ್ಷಣೆ ವ್ಯವಸ್ಥೆಗಳು ವಿಶ್ವೇಶ್ವರಯ್ಯ ಅವರ ಪ್ರಮುಖ ಕೊಡುಗೆಗಳಲ್ಲೊಂದು.
  • ಸರ್ ಎಂ ವಿಶ್ವೇಶ್ವರಯ್ಯನವರ ಸಾಧನೆಗೆ `ಭಾರತರತ್ನ’ ಎಂಬ ಶ್ರೇಷ್ಠ ಗೌರವದೊಂದಿಗೆ ಅನೇಕ ಪ್ರಶಸ್ತಿ, ಗೌರವಗಳು ಮುಕುಟಕ್ಕೇರಿದೆ. ಈ ಗೌರವಕ್ಕೆ ಪಾತ್ರರಾದ ಮೊದಲ ಕನ್ನಡಿಗ ಸರ್‌ ಎಂ ವಿ.