Published on: January 4, 2023

ಇ–ವಿಧಾನಮಂಡಲ ಯೋಜನೆ

ಇ–ವಿಧಾನಮಂಡಲ ಯೋಜನೆ

ಸುದ್ದಿಯಲ್ಲಿ ಏಕಿದೆ? ಇ-ಆಡಳಿತ ಯೋಜನೆಯನ್ನು ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್ (ನೇವಾ) ಮೂಲಕ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಮಾಜಿ ಎಂಎಲ್‌ಸಿ ಮತ್ತು ವಕೀಲ ರಮೇಶ್ ಬಾಬು ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ಕರ್ನಾಟಕ ಹೈಕೋರ್ಟ್ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದೆ.

ಮುಖ್ಯಾಂಶಗಳು

  • ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಅವರಿದ್ದ ವಿಭಾಗೀಯ ಪೀಠ, ಸರ್ಕಾರದ ಮುಖ್ಯ ಕಾರ್ಯದರ್ಶಿ, ವಿಧಾನಸಭೆ ಮತ್ತು ಪರಿಷತ್ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.

ಹಿನ್ನೆಲೆ

  • ಇ-ವಿಧಾನ ಮಂಡಲ ಯೋಜನೆ ಜಾರಿಗೆ 2016-17ರಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ) ರೂ.60.84 ಕೋಟಿ ಅಂದಾಜಿಸಿತ್ತು. ಆದರೆ, ಕರ್ನಾಟಕ ವಿಧಾನ ಮಂಡಲವು ಈ ಯೋಜನೆ ಜಾರಿಗೆ ಕಿಯೋನಿಕ್ಸ್ ಸಂಸ್ಥೆಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಸೂಚಿಸಿತ್ತು. ಇದರನ್ವಯ ಕಿಯೋನಿಕ್ಸ್‌, ಯೋಜನೆಗೆ ಸುಮಾರು ರೂ.254 ಕೋಟಿ ಮೊತ್ತ ತಗಲುವುದಾಗಿ ವರದಿ ನೀಡಿತ್ತು.
  • ‘ಕಿಯೋನಿಕ್ಸ್ ಮೂಲಕ ಯೋಜನೆ ಜಾರಿ ಮಾಡಿದರೆ ರಾಜ್ಯದ ಬೊಕ್ಕಸಕ್ಕೆ ರೂ.254 ಕೋಟಿ ನಷ್ಟವಾಗಲಿದೆ. ಈ ಕುರಿತಂತೆ ಮಧ್ಯಪ್ರವೇಶಿಸಿ ಎಂದು ವಿಧಾನಸಭಾಧ್ಯಕ್ಷರಿಗೆ ಮನವಿ ಮಾಡಲಾಗಿತ್ತು. ಆದರೆ, ವಿಧಾನಸಭಾಧ್ಯಕ್ಷರು ಈ ಕುರಿತು ಗಮನ ಹರಿಸಿಲ್ಲ‘ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
  • ‘ಕಿಯೋನಿಕ್ಸ್ ಮೂಲಕ ರೂ.254 ಕೋಟಿ ವೆಚ್ಚದಲ್ಲಿ ಇ-ವಿಧಾನ ಮಂಡಲ ಯೋಜನೆ ಜಾರಿ ಮಾಡುವುದಕ್ಕೆ ಬದಲಾಗಿ ‘ನೇವಾ’ ಮೂಲಕ ಜಾರಿಗೊಳಿಸಲು ಆದೇಶಿಸಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಇ-ವಿಧಾನ ಮಂಡಲ ಯೋಜನೆ

  • ಕರ್ನಾಟಕ ವಿಧಾನ ಮಂಡಲವನ್ನು ಕಾಗದ ರಹಿತ ಯೋಜನೆಯ ಅಡಿಯಲ್ಲಿ ತರಲು ಕೇಂದ್ರ ಸರ್ಕಾರದ ಇ – ವಿಧಾನ (ನೇವಾ ಯೋಜನೆ)ಅನ್ನುಅನುಷ್ಟಾನಗೊಳಿಸಿ ಒಂದು ರಾಷ್ಟ್ರ ಒಂದು ವಿಧಾನ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿತ್ತು.

ಉದ್ದೇಶ: ವಿಧಾನ ಮಂಡಲದ ಉಭಯ ಸದನಗಳ ವ್ಯವಹಾರವನ್ನು ಕಾಗದರಹಿತಗೊಳಿಸುವುದು.