Published on: September 29, 2021

‘ಪ್ರಾದೇಶಿಕ ಸಮತೋಲನ ಯೋಜನೆ’

‘ಪ್ರಾದೇಶಿಕ ಸಮತೋಲನ ಯೋಜನೆ’

ಸುದ್ಧಿಯಲ್ಲಿ ಏಕಿದೆ? ರಾಜ್ಯದ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗಾಗಿ ಡಾ.ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯ ಶಿಫಾರಸ್ಸಿನಂತೆ ಜಾರಿಯಲ್ಲಿರುವ ‘ವಿಶೇಷ ಅಭಿವೃದ್ಧಿ ಯೋಜನೆಯನ್ನು ಬದಲಿಸಿ, ನೀತಿ ಆಯೋಗ ಸೂಚಿಸಿರುವ 49 ಸೂಚಕಗಳನ್ನು ಅಳವಡಿಸಿ ‘ಪ್ರಾದೇಶಿಕ ಸಮತೋಲನ ಯೋಜನೆ ಎಂಬ ಹೆಸರಿನಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

  • ನಂಜುಂಡಪ್ಪ ವರದಿಯಲ್ಲಿ 114 ತಾಲ್ಲೂಕುಗಳು ಹಿಂದುಳಿದ ಪಟ್ಟಿಯಲ್ಲಿದ್ದವು. ತಾಲ್ಲೂಕುಗಳ ಪುನರ್‌ರಚನೆ ವೇಳೆ ಈ ವ್ಯಾಪ್ತಿಯಲ್ಲಿ 39 ಹೊಸ ತಾಲ್ಲೂಕುಗಳು ರಚನೆಯಾದವು. ಹೀಗಾಗಿ ಒಟ್ಟು 153 ತಾಲ್ಲೂಕುಗಳಲ್ಲಿ ನೀತಿ ಆಯೋಗದ ಸೂಚಕಗಳಿಗೆ ಅನುಗುಣವಾಗಿ ಐದು ವಲಯಗಳಿಗೆ ಆದ್ಯತೆ ನೀಡಿ ₹3 ಸಾವಿರ ಕೋಟಿ ಅನುದಾನವನ್ನು ತಾಲ್ಲೂಕು ವಾರು 2022–23ನೇ ಸಾಲಿನಿಂದ ಹಂಚಿಕೆ ಮಾಡಲು ಸರ್ಕಾರ ಉದ್ದೇಶಿಸಿದೆ.
  • ಒಟ್ಟು ಅನುದಾನದಲ್ಲಿ (₹3 ಸಾವಿರ ಕೋಟಿ) ಬೃಹತ್‌ ನೀರಾವರಿಯೂ ಸೇರಿದಂತೆ ಮೂಲ ಸೌಕರ್ಯ ಅಭಿವೃದ್ಧಿಗೆ ಈವರೆಗೆ ಹೆಚ್ಚು ಅನುದಾನ ಮೀಸಲಾಡಲಾಗುತ್ತಿತ್ತು. 2020–21ರಲ್ಲಿ ₹2,559 ಕೋಟಿಯನ್ನು ಈ ಉದ್ದೇಶಕ್ಕೆ ಮೀಸಲಿಡಲಾಗಿತ್ತು. ಆದರೆ, ಪ್ರಸ್ತಾಪಿತ ಯೋಜನೆಯಡಿ ಮೂಲಸೌಕರ್ಯ ಅಭಿವೃದ್ಧಿಗೆ ₹150 ಕೋಟಿ ಮಾತ್ರ ನಿಗದಿಪಡಿಸಲಾಗಿದೆ.
  • ಹೊಸ ಯೋಜನೆಗೆ ಆರ್ಥಿಕ ಇಲಾಖೆ ಸಹಮತಿ ನೀಡಿದೆ. ಸಚಿವ ಸಂಪುಟ ಸಭೆಯ ಅನುಮೋದನೆಯ ಬಳಿಕ ಈ ಯೋಜನೆ ಜಾರಿಗೆ ಬರಲಿದೆ.

ಡಾ.ಡಿ.ಎಂ. ನಂಜುಂಡಪ್ಪ ಸಮಿತಿ ಬಗ್ಗೆ:

  • ಪ್ರಾದೇಶಿಕ ಅಸಮತೋಲನ ನಿವಾರಿಸಲು ಅರ್ಥಶಾಸ್ತ್ರಜ್ಞ ಡಾ.ಡಿ.ಎಂ. ನಂಜುಂಡಪ್ಪ ನೇತೃತ್ವದ ಉನ್ನತಾಧಿಕಾರ ಸಮಿತಿಯನ್ನು ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ 2000ರಲ್ಲಿ ರಚಿಸಿದ್ದರು. ರಾಜ್ಯದ 175 ತಾಲ್ಲೂಕುಗಳಲ್ಲಿ 114 ತಾಲ್ಲೂಕುಗಳು ಹಿಂದುಳಿದಿವೆ (39 ಅತ್ಯಂತ ಹಿಂದುಳಿದ, 40 ಅತಿ ಹಿಂದುಳಿದ, 35 ಹಿಂದುಳಿದ ಹಾಗೂ  61 ಅಭಿವೃದ್ದಿ ಹೊಂದಿದ ತಾಲ್ಲೂಕು) ಎಂದು ಸಮಿತಿ ಗುರುತಿಸಿತ್ತು.
  • 2003 ರಿಂದ 2011ರವರೆಗೆ ಎಂಟು ವರ್ಷಗಳ ಕಾಲ ಸರ್ಕಾರ ಈ 114 ಹಿಂದುಳಿದ ತಾಲ್ಲೂಕುಗಳಿಗೆ ಅಂದಿನ ಬಜೆಟ್ ಪ್ರಮಾಣದಂತೆ ₹16 ಸಾವಿರ ಕೋಟಿ ವಿಶೇಷ ಅನುದಾನ ನೀಡಬೇಕು. ಸಾಮಾನ್ಯ ಬಜೆಟ್ ಮೂಲಕ ₹15 ಸಾವಿರ ಕೋಟಿ ರೂಪಾಯಿ ಅನುದಾನ ಬರುತ್ತದೆ. ಅದನ್ನು ಸಮರ್ಪಕವಾಗಿ ಬಳಿಸಿದಲ್ಲಿ ರಾಜ್ಯದಲ್ಲಿ ಇರುವ ಪ್ರಾದೇಶಿಕ ಅಸಮಾನತೆ ಹೋಗಲಾಡಿಸಬಹುದು ಎಂದು ಸಮಿತಿ ಶಿಫಾರಸು ಮಾಡಿತ್ತು.
  • ಕೃಷಿ (ಎಪಿಎಂಸಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಹೈನುಗಾರಿಕೆ), ಗ್ರಾಮೀಣಾಭಿವೃದ್ಧಿ (ಗ್ರಾಮೀಣ ರಸ್ತೆ, ಜಿ.ಪಂ. ರಸ್ತೆ, ಗ್ರಾಮೀಣ ನೀರು ಸರಬರಾಜು, ಗ್ರಾಮೀಣ ವಸತಿ), ನೀರಾವರಿ, ಸಾಮಾಜಿಕ ಸೇವೆಗಳು (ಶಿಕ್ಷಣ, ಆರೋಗ್ಯ, ಕ್ರೀಡೆ, ಪ್ರವಾಸೋದ್ಯಮ, ನಗರಾಭಿವೃದ್ದಿ, ಮಹಿಳಾಭಿವೃದ್ದಿ ಮತ್ತು ಸಮಾಜ ಕಲ್ಯಾಣ), ಸಾರಿಗೆ (ರೈಲ್ವೆ, ವಿಮಾನ, ಬಂದರು) ವಿಜ್ಞಾನ ಮತ್ತು ತಂತ್ರಜ್ಞಾನ, ವಿದ್ಯುತ್, ಆರ್ಥಿಕ ಸೇವೆ, ಕೈಗಾರಿಕೆ ಮತ್ತು ಖನಿಜ ಎಂದು ಅಭಿವೃದ್ಧಿಯಲ್ಲಿ ಹಿಂದುಳಿದ ವಲಯವನ್ನು ಗುರುತಿಸಿ ಎಂಟು ವರ್ಷಗಳಲ್ಲಿ ಈ ವಲಯವಾರು ಅಭಿವೃದ್ಧಿಗೆ ಎಷ್ಟು ಪ್ರಮಾಣದ ಅನುದಾನ ವಿನಿಯೋಗಿಸಬೇಕು ಎಂಬ ಶಿಫಾರಸನ್ನೂ ಸಹ ಸಮಿತಿ ಮಾಡಿತ್ತು.

ನಂಜುಂಡಪ್ಪ ವರದಿ ಪರಿಷ್ಕರಣೆ ಏಕೆ?

  • ಈ ವರದಿಯ ಮಾನದಂಡದ ಆಧಾರದ ಮೇಲೆಯೇ ರಾಜ್ಯ ಸರ್ಕಾರ ರಾಜ್ಯದ ಹಿಂದುಳಿದ ತಾಲ್ಲೂಕುಗಳಲ್ಲಿ ಇದುವರೆಗೆ ₹35 ಸಾವಿರ ಕೋಟಿಗೂ ಅಧಿಕ ಮೊತ್ತ ವಿನಿಯೋಗಿಸಿದೆ. ಆದರೂ ‘ಅಸಮಾನತೆ ಹಾಗೇ ಇದೆ!
  • ನಂಜುಂಡಪ್ಪ ವರದಿ ಸಿದ್ಧಪಡಿಸಿದಾಗ ಇದ್ದ ಪರಿಸ್ಥಿತಿಗೂ ಈಗಿನ ಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ನೀತಿ ಆಯೋಗ, ವಿಶ್ವಸಂಸ್ಥೆಯ ವರದಿ ಹಾಗೂ ಮಾನವ ಅಭಿವೃದ್ಧಿ ಸೂಚ್ಯಂಕ ಆಧಾರವಾಗಿ ಇಟ್ಟುಕೊಂಡು ನಂಜುಂಡಪ್ಪ ವರದಿ ಪರಿಷ್ಕರಿಸಲಾಗುವುದು

ಹಿನ್ನಲೆ

  • ಕಲಬುರ್ಗಿಯಲ್ಲಿ ಇತ್ತೀಚೆಗೆ (ಸೆ. 17) ನಡೆದ ‘ಕಲ್ಯಾಣ ಕರ್ನಾಟಕ ಉತ್ಸವ’ದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ನೀತಿ ಆಯೋಗ, ವಿಶ್ವಸಂಸ್ಥೆಯ ವರದಿ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಆಧಾರ ವಾಗಿ ಇಟ್ಟುಕೊಂಡು ನಂಜುಂಡಪ್ಪ ವರದಿ ಪರಿಷ್ಕರಿಸಲಾಗುವುದು. ಮುಂದಿನ ಐದು ವರ್ಷಗಳ ಅಭಿವೃದ್ಧಿಗೆ ಹೊಸ ಮಾನದಂಡ ನಿಗದಿ ಪಡಿಸಲಾಗುವುದು’ ಎಂದು ಹೇಳಿದ್ದರು.

ಏನಿದು ಹೊಸ ಯೋಜನೆ?

  • ನಂಜುಂಡಪ್ಪ ಸಮಿತಿ ವರದಿಯಂತೆ ವಿಶೇಷ ಅಭಿವೃದ್ಧಿ ಯೋಜನೆಯಡಿ 2007–08ರಿಂದ 2020–21ರವರೆಗೆ 114 ಹಿಂದುಳಿದ ತಾಲ್ಲೂಕುಗಳಿಗೆ ನೀಡಲಾದ ಒಟ್ಟು ಅನುದಾನದಲ್ಲಿ ಶೇ 60ರಷ್ಟು ಐದು ಇಲಾಖೆಗಳಿಗೆ (ಜಲಸಂಪನ್ಮೂಲ ಶೇ 19,ಗ್ರಾಮೀಣಾಭಿವೃದ್ಧಿ ಶೇ 17, ವಸತಿ ಶೇ 11, ಲೋಕೋಪಯೋಗಿ ಶೇ 7, ಇಂಧನ ಶೇ 6) ಹಂಚಿಕೆ ಆಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಶೇ 12.5, ಶಿಕ್ಷಣಕ್ಕೆ ಶೇ 5.8, ಆರೋಗ್ಯಕ್ಕೆ ಶೇ 5, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಶೇ 1.6, ಕೃಷಿಗೆ ಶೇ 6.5. ಉದ್ದಿಮೆ ಮತ್ತು ವ್ಯಾಪಾರಕ್ಕೆ ಕೇವಲ ಶೇ 0.89 ಅನುದಾನ ನೀಡಲಾಗಿದೆ.
  • ಈಗ ಕೇಂದ್ರ ಸರ್ಕಾರದಿಂದ ನೀತಿ ಆಯೋಗವು 117 ಮಹತ್ವಾಕಾಂಕ್ಷಿ ಜಿಲ್ಲೆಗಳ ಅಭಿವೃದ್ಧಿಗಾಗಿ ರೂಪಿಸಿದ 49 ಸೂಚಕಗಳಂತೆ ಪ್ರಾದೇಶಿಕ ಸಮತೋಲನ ಸಾಧಿಸಲು ಪ್ರಸ್ತಾಪಿಸಲಾಗಿದೆ.
  • ನೀತಿ ಆಯೋಗ ನಿಗದಿಪಡಿಸಿದ 49 ಸೂಚಕಗಳನ್ನು ಐದು ವಲಯಗಳಲ್ಲಿ ಅಂದರೆ, ಆರೋಗ್ಯ ಮತ್ತು ಪೌಷ್ಟಿಕತೆ (ಶೇ 30, ಶಿಕ್ಷಣ (ಶೇ 30), ಕೃಷಿ ಮತ್ತು ಜಲ ಸಂಪನ್ಮೂಲ (ಶೇ 20). ಆರ್ಥಿಕ ಸೇರ್ಪಡೆ (ಶೇ 10), ಕೌಶಲಾಭಿವೃದ್ಧಿ (ಶೇ 5), ಮೂಲಸೌಕರ್ಯಕ್ಕೆ (ಶೇ 5) ಆದ್ಯತೆ ನೀಡಿ ನಿಗದಿಪಡಿಸಲಾಗಿದೆ.

ನಂಜುಂಡಪ್ಪ ವರದಿ ಮತ್ತು ನೀತಿ ಆಯೋಗದ ವರದಿಯಲ್ಲಿನ ವ್ಯತ್ಯಾಸಗಳು

  • ನಂಜುಂಡಪ್ಪ ವರದಿಯಡಿ ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ ಮೂಲಸೌಕರ್ಯ ಮತ್ತು ಬೃಹತ್‌ ನೀರಾವರಿ ವಲಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಆದರೆ, ಹೊಸ ಯೋಜನೆಯಲ್ಲಿ ನೀತಿ ಆಯೋಗದ ಮಾನದಂಡಗಳ ಅನುಸಾರ ಮಾನವ ಸಂಪನ್ಮೂಲಗಳ ಅಭಿವೃದ್ಧಿ , ಕೃಷಿ ಮತ್ತು ಸಣ್ಣ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಂಜುಂಡಪ್ಪ ವರದಿಯಲ್ಲಿ ಅಭಿವೃದ್ಧಿಯ 35 ಸೂಚಕಗಳ ಪೈಕಿ, ಕೇವಲ 19 ಸೂಚಕಗಳು ಮಾತ್ರ ನೀತಿ ಆಯೋಗದಲ್ಲಿದೆ.

ಪ್ರಶಸ್ತಿ:

  • ಹಿಂದುಳಿದ ತಾಲ್ಲೂಕುಗಳ ₹3 ಸಾವಿರ ಕೋಟಿ ಅನುದಾನವನ್ನು ಹಂಚಿಕೆ ಮಾಡಿ, ಮುಂದಿನ 5 ವರ್ಷಗಳಲ್ಲಿ ಮಹತ್ವಾಕಾಂಕ್ಷಿ ತಾಲ್ಲೂಕುಗಳ ಅಭಿವೃದ್ಧಿ ಸೂಚಕಗಳನ್ನು ಸುಧಾರಿಸಿ, ರಾಜ್ಯದ ಸರಾಸರಿ ಮಟ್ಟಕ್ಕೆ ತರಲು ಉದ್ದೇಶಿಸಲಾಗಿದೆ. ಅಲ್ಲದೆ, ನೀತಿ ಆಯೋಗದ ಮಾದರಿಯಲ್ಲಿ ತಾಲ್ಲೂಕುಗಳ ಪ್ರತಿ ತ್ರೈಮಾಸಿಕ ಪ್ರಗತಿ ಪರಿಶೀಲಿಸಿ, ಸಾಧನೆಯಲ್ಲಿ ಸುಧಾರಣೆಗೊಂಡು ಪ್ರಥಮ ಶ್ರೇಣಿ ಗಳಿಸುವ ಮೂರು ತಾಲ್ಲೂಕುಗಳಿಗೆ ಪ್ರಶಸ್ತಿ ಪತ್ರ ನೀಡಿ ಉತ್ತೇಜಿಸಲು ಕೂಡಾ ಸರ್ಕಾರ ನಿರ್ಧರಿಸಿದೆ.