Published on: September 27, 2022

ರಾಷ್ಟ್ರೀಯ ಇಂಜಿನಿಯರ್ಗಳ ದಿನ (ಅಭಿಯಂತರರ ದಿನ)

ರಾಷ್ಟ್ರೀಯ ಇಂಜಿನಿಯರ್ಗಳ ದಿನ (ಅಭಿಯಂತರರ ದಿನ)

ಸುದ್ದಿಯಲ್ಲಿ ಏಕಿದೆ?

ಸರ್‌ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮದಿನದಂದು (ಸೆಪ್ಟೆಂಬರ್‌ 15) ಭಾರತದಲ್ಲಿ ಪ್ರತಿ ವರ್ಷ ಎಂಜಿನಿಯರ್‌ಗಳ ದಿನ ಆಚರಿಸಲಾಗುತ್ತದೆ.

  • ಈ ದಿನ ವಿಶೇಷವಾಗಿ ಸರ್ ಎಂ.ವಿಶ್ವೇಶ್ವರಯ್ಯ ಅವರನ್ನು ಸ್ಮರಿಸುವುದು ಹಾಗೂ ಇಂಜಿನಿಯರ್‌ಗಳ ಕೊಡುಗೆಯ ಬಗ್ಗೆ ಸಮಾಜಕ್ಕೆ ತಿಳಿಸಿಕೊಡುವ ಕಾರ್ಯಕ್ರಮಗಳು ದೇಶದ ತುಂಬ ನಡೆಯುತ್ತವೆ.

ವಿಶ್ವೇಶ್ವರಯ್ಯನವರ ಜನ್ಮ:

  • ಜಗತ್ತು ಕಂಡ ಶ್ರೇಷ್ಟ ಇಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 1861 ಸೆಪ್ಟೆಂಬರ್‌ 15ರಂದು ಜನಿಸಿದರು.
  • ಶಿಕ್ಷಣ: ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, 1881ರಲ್ಲಿ ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್‌ ಇಂಜಿನಿಯರಿಂಗ್ ಪದವಿ ಪಡೆದರು.
  • ವೃತ್ತಿ ಜೀವನ: 23ನೇ ವಯಸ್ಸಿನಲ್ಲಿ ಬಾಂಬೆ ಪ್ರೆಸಿಡೆನ್ಸಿಯ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್‌ ಆಗಿ ವೃತ್ತಿ ಜೀವನ ಆರಂಭಿಸಿದರು. ಕೆಲ ವರ್ಷ ಹೈದರಾಬಾದ್ ದಿವಾನರಿಗೆ ಹಾಗೂ ಒಡಿಶಾದಲ್ಲಿ ವಿಶ್ವೇಶ್ವರಯ್ಯನವರು ಕೆಲಸ ಮಾಡಿದರು. 1909 ರಲ್ಲಿ ಮೈಸೂರು ರಾಜ್ಯದ ಮುಖ್ಯ ಎಂಜಿನಿಯರ್‌ ಆಗಿ ಕೆಲಸ ಪ್ರಾರಂಭಿಸಿದರು. ನಂತರ 1912 ರಲ್ಲಿ ಮೈಸೂರು ರಾಜ್ಯದ ದಿವಾನರಾದರು.
  • ನಿಧನ : ವಿಶ್ವೇಶ್ವರಯ್ಯನವರು 1962 ಏಪ್ರಿಲ್‌ 12ರಂದು ನಿಧನರಾದರು

ಎಂಜಿನಿರ್ ದಿನ ಆಚರಿಸುವ ಉದ್ದೇಶ

  • ಸಿವಿಲ್‌, ಎಲೆಕ್ಟ್ರಿಕಲ್, ಮೆಕಾನಿಕಲ್, ತಾಂತ್ರಿಕ ಸೇರಿದಂತೆ ಹಲವು ಇಂಜಿನಿಯರಿಂಗ್ ವಿಷಯಗಳಲ್ಲಿ ಪ್ರತಿ ವರ್ಷ ಭಾರತದಲ್ಲಿ ಸುಮಾರು 20 ಲಕ್ಷ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳೆಲ್ಲರೂ ಸಂಶೋಧನೆಗಳನ್ನು ಮಾಡಿ ದೇಶದ ಅಭಿವೃದ್ಧಿಗೆ ನೆರವಾಗಬೇಕು ಎಂಬ ಉದ್ದೇಶದಿಂದ 1968ರಲ್ಲಿ ಇಂಜಿನಿಯರ್‌ಗಳ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು.

ವಿಶ್ವೇಶ್ವರಯ್ಯನವರ ಸಾಧನೆಗಳು

  • ರೈತರಿಗಾಗಿ ಆರಂಭಿಸಿದ ಕೆಆರ್‌ಎಸ್ ಡ್ಯಾಂನಿಂದ (ಕೃಷ್ಣರಾಜ ಸಾಗರ ಜಲಾಶಯ) ಹಿಡಿದು ಹಲವು ಜನೋಪಯೋಗಿ ಯೋಜನೆಗಳನ್ನು ಮೈಸೂರು ರಾಜ್ಯದಲ್ಲಿ ಆರಂಭಿಸಿ ಇಂದಿನ ಆಧುನಿಕ ಕರ್ನಾಟಕದ ಅಭಿವೃದ್ಧಿಗೆ ನಾಂದಿ ಹಾಡಿದರು.ಇಂದಿಗೂ ಅವರು ರೂಪಿಸಿದ ಹಲವು ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ.
  • ಅಣೆಕಟ್ಟುಗಳಲ್ಲಿ ಸ್ವಯಂಚಾಲಿತ ಬಾಗಿಲುಗಳ ನಿರ್ಮಾಣಕ್ಕೆ ಹಕ್ಕುಸ್ವಾಮ್ಯ ಪಡೆದರು. ಕಾವೇರಿ ನದಿಗೆ ಅಡ್ಡಲಾಗಿ ಮಂಡ್ಯ ಜಿಲ್ಲೆಯಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣವನ್ನು 1911 ರಲ್ಲಿ ಆರಂಭಿಸಲಾಯಿತು. ಇದು 1932ರಂದು ಲೋಕಾಪರ್ಣೆಗೊಂಡಿತು.
  • ಸರ್ ಎಂ ವಿಶ್ವೇಶ್ವರಯ್ಯ ಅವರಿ 1903 ರಲ್ಲಿ ಸ್ವಯಂಚಾಲಿತ ತಡೆಗೋಡೆ ನೀರಿನ ಪ್ರವಾಹ ಗೇಟ್‌ಗಳನ್ನು ವಿನ್ಯಾಸಗೊಳಿಸಿ ಪೇಟೆಂಟ್ ಪಡೆದರು. ಇದಕ್ಕೆ ಬ್ಲಾಕ್ ಸಿಸ್ಟಮ್ ಎನ್ನುತ್ತಾರೆ. ಇದು ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿದ್ದು ಅದು ನೀರು ಉಕ್ಕಿ ಹರಿಯುವ ಸಂದರ್ಭದಲ್ಲಿ ಮುಚ್ಚುತ್ತದೆ. ಇದನ್ನು ಮೊದಲು ಪುಣೆಯ ಖಡಕ್ವಾಸ್ಲಾ ಜಲಾಶಯದಲ್ಲಿ ಸ್ಥಾಪಿಸಲಾಯಿತು.
  • 90 ನೇ ವಯಸ್ಸಿನಲ್ಲಿ ಅವರನ್ನು ‘ಆಧುನಿಕ ಮೈಸೂರು ರಾಜ್ಯದ ಪಿತಾಮಹ’ ಎಂದು ಪರಿಗಣಿಸಲಾಯಿತು.
  • ಮೂಸಿ ನದಿಯಿಂದ ಸದಾ ಪ್ರವಾಹ ಎದುರಿಸುತ್ತಿದ್ದ ಹೈದರಾಬಾದ್ ನಗರದಲ್ಲಿ ಪ್ರವಾಹ ಸಮಸ್ಯೆ ಎದುರಾಗದಂತೆ ವಿಶೇಷ ವ್ಯವಸ್ಥೆ ರೂಪಿಸಿದರು.
  • ತಿರುಮಲ ತಿರುಪತಿ ದೇವಸ್ಥಾನಕ್ಕೆ ಉತ್ತಮವಾದ ರಸ್ತೆ ನಿರ್ಮಿಸಿದರು. ಆಂಧ್ರಪ್ರದೇಶದ ವಿಶಾಖಪಟ್ಟಣ ನಗರವನ್ನು ಕಡಲಕೊರೆತ ಸಮಸ್ಯೆ ಎದುರಾಗದಂತೆ ತಡೆಗೋಡೆ ನಿರ್ಮಿಸಿದರು.
  • 1909ರಲ್ಲಿ ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್‌ ಆಗಿ ಸೇವೆ ಸಲ್ಲಿಸಿದರು.
  • 1912ರಿಂದ 1918ರ ವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು.
  • ಮೈಸೂರು ಸಾಬೂನು ಕಾರ್ಖಾನೆ, ಭದ್ರಾವತಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಕಾಲೇಜು, ಮೈಸೂರು ಬ್ಯಾಂಕ್‌ (ಈಗ ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ ವಿಲೀನವಾಗಿದೆ) ಬೆಂಗಳೂರು ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.
  • ಸತತ 50 ವರ್ಷಗಳ ಕಾಲ ಲಂಡನ್‌ನ ಸಿವಿಲ್‌ ಇಂಜಿನಿಯರ್ ಇನ್‌ಸ್ಟಿಟ್ಯೂಟ್‌ನ ಗೌರವ ಸದಸ್ಯರಾಗಿದ್ದರು. 1934ರಲ್ಲಿ ಭಾರತದ ಆರ್ಥಿಕ ವ್ಯವಸ್ಥೆ ರೂಪಿಸಲು ಪ್ರಮುಖ ಪಾತ್ರ ವಹಿಸಿದರು.
  • 1955ರಲ್ಲಿ ಇವರ ಸಾಧನೆಗಳನ್ನು ಪರಿಗಣಿಸಿ ಭಾರತ ಸರ್ಕಾರ ಅತ್ಯುನ್ನತ ‘ಭಾರತರತ್ನ’ ಭಾರತ ಪುರಸ್ಕಾರದೊಂದಿಗೆ ಸತ್ಕರಿಸಿತು.
  • ವಿಶ್ವೇಶ್ವರಯ್ಯ ಅವರ ಸಾರ್ವಜನಿಕ ಸೇವೆಯನ್ನು ಗಮನಿಸಿ ಅವರಿಗೆ ʻKnight Commander of the British Indian Empireʼ ಎಂಬ ಬಿರುದನ್ನು ನೀಡಲಾಗಿತ್ತು.

ಜಾಗತಿಕ ಇಂಜಿನಿಯರ್‌ಗಳ ದಿನ :

ವಿಶ್ವಸಂಸ್ಥೆ ಮೇ 4 ನ್ನು ಜಾಗತಿಕ ಇಂಜಿನಿಯರ್‌ಗಳ ದಿನ ಎಂದು ಗುರುತಿಸಿದೆ.September