Published on: November 16, 2022

ಸುದ್ಧಿ ಸಮಾಚಾರ – 16 ನವೆಂಬರ್ 2022

ಸುದ್ಧಿ ಸಮಾಚಾರ – 16 ನವೆಂಬರ್ 2022

  • ಈ ಬಾರಿಯ ಭಾರತದ ಹುಲಿ ಸಂರಕ್ಷಿತ ಪ್ರದೇಶಗಳ ನಿರ್ವಹಣೆ ಕುರಿತು ನಡೆಸಿರುವ ಮ್ಯಾನೇಜ್ಮೆಂಟ್ ಎಫೆಕ್ಟಿವ್ನೆಸ್ ಎವಲ್ಯೂಷನ್ ನಲ್ಲಿಬಂಡೀಪುರ ಉನ್ನತ ಅಂಕಗಳನ್ನು ಗಳಿಸಿ ಮತ್ತೊಮ್ಮೆ ಅತ್ಯುತ್ತಮ ಹುಲಿ ಸಂರಕ್ಷಿತ ವಲಯ ಎಂಬ ಬಿರುದನ್ನು ತನ್ನದಾಗಿಸಿಕೊಂಡಿದೆ.
  • ಭಾರತ ಸರ್ಕಾರವು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15 ಅನ್ನು ಪ್ರತಿ ವರ್ಷ ಜನಜಾತಿಯ ಗೌರವ್ ದಿವಸ್ ಎಂದು ಆಚರಿಸಲಾಗುವುದು ಎಂದು ಘೋಷಿಸಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಸಮುದಾಯದ ಸಾಧನೆಗೆ ಭಗವಾನ್ ಬಿರ್ಸಾ ಮುಂಡಾ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲು ಈ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ.
  • ಉತ್ತರ ಕನ್ನಡದ ಕುಮಟಾ ತಾಲ್ಲೂಕಿನ ಮಾಣಿಕಟ್ಟಾ ಗಜನಿಯಲ್ಲಿ ಬೆಳೆಯುವ ವಿಶಿಷ್ಟ ಭತ್ತ ಕಗ್ಗ, ಇಡೀ ರಾಜ್ಯದಲ್ಲೇ ಅಪರೂಪದ ತಳಿ. ಪಾರಂಪರಿಕ ಮೌಲ್ಯ ಹೊಂದಿರುವ ಈ ಭತ್ತದ ಸಸಿಗಳು, ಪ್ರವಾಹದಲ್ಲಿಯೂ ಗಟ್ಟಿಯಾಗಿ ನಿಲ್ಲುವ ಸಾಮರ್ಥ್ಯ ಹೊಂದಿವೆ. ಹೇರಳ ಪೌಷ್ಟಿಕಾಂಶ ಹೊಂದಿದ್ದು, ಊಟಕ್ಕೆ ಮತ್ತು ಅವಲಕ್ಕಿಗೆ ರುಚಿಯಾದ ಭತ್ತವಿದು. ಇದಕ್ಕೀಗ ನೀರು ಕಾಗೆಗಳು ಹಾಗೂ ಕಾಂಡ್ಲಾ ಗಿಡದಿಂದ ಸಂಚಕಾರ ಉಂಟಾಗಿದೆ.
  • ಎಎಲ್‌ಎಚ್‌ ಮಾರ್ಕ್‌–3 : ಎಚ್‌ಎಎಲ್‌ ಭಾರತೀಯ ಕಡಲು ರಕ್ಷಣಾ ಪಡೆಗೆ (ಇಂಡಿಯನ್‌ ಕೋಸ್ಟ್‌ ಗಾರ್ಡ್‌) 16 ಎಎಲ್‌ಎಚ್‌ (ಎಂಕೆ3) ಹೆಲಿಕಾಪ್ಟರ್‌ಗಳ ಪೂರೈಕೆ ಸರಣಿಯ ಕೊನೆಯ ಹೆಲಿಕಾಪ್ಟರ್‌ ಅನ್ನು ಹಸ್ತಾಂತರಿಸಿತು.

ಸುಧಾರಿತ ಹಗುರ ಹೆಲಿಕಾಪ್ಟರ್‌ (ಎಎಲ್ಎಚ್) ಎಂಕೆ 3 ಅನ್ನು ಎಚ್‌ಎಎಲ್‌ ದೇಶೀಯವಾಗಿಯೇ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ. ಕಂಪನಿಯು ಈವರೆಗೆ ಒಟ್ಟು 330 ಎಎಲ್‌ಎಚ್‌ ಹೆಲಿಕಾಪ್ಟರ್‌ಗಳನ್ನು ತಯಾರಿಸಿದೆ. ಬಹು ಉದ್ದೇಶದ  ಈ ಹೆಲಿಕಾಪ್ಟರ್‌ ಈವರೆಗೆ 3.74 ಲಕ್ಷ ಗಂಟೆಗಳಷ್ಟು ಹಾರಾಟ ನಡೆಸಿದೆ. 16 ಹೆಲಿಕಾಪ್ಟರ್‌ಗಳ ಪೂರೈಕೆಗೆ 2017 ರಲ್ಲಿಯೇ ಒಪ್ಪಂದ ಆಗಿತ್ತು.ಇನ್ನೂ ಒಂಬತ್ತು ಹೆಲಿಕಾಪ್ಟರ್‌ಗಳ ಖರೀದಿಗೆ ಆಶಯ ಪತ್ರವನ್ನು ನೀಡಲಾಗಿದೆ.

  • ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡುವ ದೇಶಗಳ ಹೆಸರುಗಳಿರುವ ‘ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿ’ಯಿಂದ ಪಾಕಿಸ್ತಾನದ ಹೆಸರನ್ನು ಬ್ರಿಟನ್‌ ಸರ್ಕಾರ ತೆಗೆದು ಹಾಕಿದೆ. ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ಹರಿಯುವುದನ್ನು ತಡೆಗಟ್ಟಲು ಪಾಕಿಸ್ತಾನ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಖಜಾನೆ ಇಲಾಖೆಯ ಸಲಹಾ ಮಂಡಳಿಯು ತನ್ನ ಟಿಪ್ಪಣಿಯಲ್ಲಿ ಈ ಅಂಶವನ್ನು ಉಲ್ಲೇಖಿಸಿದೆ. ಹೀಗಾಗಿ ಪಟ್ಟಿಯಿಂದ ಪಾಕಿಸ್ತಾನದ ಹೆಸರನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ’ ಎಂದು ಮಸೂದೆಯಲ್ಲಿ ಹೇಳಲಾಗಿದೆ.