Published on: September 30, 2021

ಸುದ್ಧಿ ಸಮಾಚಾರ 30 ಸೆಪ್ಟೆಂಬರ್ 2021

ಸುದ್ಧಿ ಸಮಾಚಾರ 30 ಸೆಪ್ಟೆಂಬರ್ 2021

  • 2022-23ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ ಉದ್ದೇಶದಿಂದ ಪ್ರತಿ ಮನೆಗೂ ನರೇಗಾ ಯೋಜನೆಯನ್ನು ತಲುಪಿಸುವ ಗುರಿಯೊಂದಿಗೆ ಮನೆ ಮನೆಗೆ ಉದ್ಯೋಗ ಖಾತರಿ ಯೋಜನೆ ಅಭಿಯಾನ ಶುರುವಾಗಲಿದೆ. ಅ. 1ರಿಂದ ಒಂದು ತಿಂಗಳ ಕಾಲ ಗ್ರಾಮದ ಪ್ರತಿ ಮನೆಗೂ ನರೇಗಾ ಯೋಜನೆ ಮಾಹಿತಿ ತಲುಪಲಿದೆ.
  • ಕೊರೊನಾದಿಂದಾಗಿ ಕಳೆದ ಎರಡು ಬಾರಿ ತಡೆ ಹಿಡಿಯಲಾಗಿದ್ದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು ಘೋಷಿಸಲಾಗಿದೆ. 2020ರ ಸಾಲಿಗೆ ಬಾಗಲಕೋಟೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ ‘ಮೀರಾಬಾಯಿ ಕೊಪ್ಪಿಕರ್’ ಮತ್ತು 2021ನೇ ಸಾಲಿಗೆ ‘ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಹಾಗೂ ‘ಸಿದ್ಧಗಂಗಾ ಮಠ’ ವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
  • ತಾಯಿಯು ತಾನು ಹೆತ್ತ ಮಗುವಿಗೆ ಸ್ತನ್ಯಪಾನ ಮಾಡಿಸುವ ಹಕ್ಕನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಇದು ತಾಯಿ ಮತ್ತು ಮಗು ಇಬ್ಬರ ಮೂಲಭೂತ ಹಕ್ಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದು ಏಕಕಾಲಿಕ ಹಕ್ಕುಗಳ ಪ್ರಕರಣವಾಗಿದ್ದು, ಮಾತೃತ್ವದ ಈ ಪ್ರಮುಖ ಲಕ್ಷಣವು ಭಾರತ ಸಂವಿಧಾನದ 21ನೇ ವಿಧಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕಿನಡಿ ರಕ್ಷಿಸಲ್ಪಟ್ಟಿದೆ
  • ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಸ್ಥಾಪಿಸಲಾಗುವ ಗೋಶಾಲೆಗಳನ್ನು ಕರ್ನಾಟಕ ಸಹಕಾರ ಹಾಲು ಉತ್ಪಾದಕ ಮಹಾಮಂಡಳ ನಿಯಮಿತ (ಕೆಎಂಎಫ್) ನಿರ್ವಹಣೆ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
  • ಅಕ್ಟೋಬರ್ 1 ರಿಂದ ಇನ್ನು ಮುಂದೆ ರಾಜ್ಯ ಸರ್ಕಾರ ಹಿರಿಯ ನಾಗರಿಕರ ತಿಂಗಳನ್ನು ಆಚರಿಸಲಿದ್ದು, ಈ ತಿಂಗಳಿನಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
  • ವಿವಾದಿತ ಎತ್ತಿನಹೊಳೆ ಯೋಜನೆಗಾಗಿ ಈವರೆಗೆ 20,185 ಮರಗಳ ಮಾರಣಹೋಮ ನಡೆದಿದೆ. ಯೋಜನೆಗಳ ಹೆಸರಿನಲ್ಲಿ ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟಕ್ಕೆ ಕೊಡಲಿ ಏಟು ಹಾಕುತ್ತಿರುವ ಸರ್ಕಾರದ ನಡೆಯನ್ನು ಪರಿಸರವಾದಿಗಳು ಖಂಡಿಸಿದ್ದಾರೆ. ಬಯಲು ಸೀಮೆಯ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಹಿನ್ನೆಲೆಯಲ್ಲಿ ಎತ್ತಿನಹೊಳೆ ಯೋಜನೆಯನ್ನು ಆರಂಭಿಸಲಾಗಿದೆ.
  • ದೇಶದಾದ್ಯಂತ ಸರ್ಕಾರಿ ಹಾಗೂ ಅನುದಾನಿತ ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಬಿಸಿಯೂಟ ಒದಗಿಸುವ ‘ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್’ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
  • ದೇಶದಲ್ಲಿ ಈಗ ಅಸ್ತಿತ್ವದಲ್ಲಿರುವ ಕಲ್ಲಿದ್ದಲು ವಿದ್ಯುತ್ ಸ್ಥಾವರಗಳು ಮತ್ತು ಮುಂಬರುವ ದಿನಗಳಲ್ಲಿ ಕಲ್ಲಿದ್ದಲು ಘಟಕಗಳನ್ನು ವಿಸ್ತರಿಸುವ ವಿವಿಧ ಯೋಜನೆಗಳನ್ನು ಪರಿಶೀಲನೆಗೆ ಒಳಪಡಿಸಿ, ‘ಸಿ40 ಸಿಟೀಸ್’ ಸಂಸ್ಥೆಯು ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿದೆ.  ಸಿ40 ಸಿಟೀಸ್, ವಿಶ್ವದ 97 ಮಹಾನ್ ನಗರಗಳ ಹವಾಮಾನ, ಆರೋಗ್ಯಕರ ಮತ್ತು ಸುಸ್ಥಿರ ಭವಿಷ್ಯದ ಕುರಿತು ಬೆಳಕು ಚೆಲ್ಲುತ್ತದೆ.
  • ನೊಬೆಲ್ ಗೆ ಸಮನಾದ ಪ್ರಶಸ್ತಿ ಎಂದೇ ಹೆಸರಾದ 2021 ಸಾಲಿನ ರೈಟ್ ಲೈವ್ಲಿಹುಡ್ ಪ್ರಶಸ್ತಿಗೆ ಈ ಬಾರಿ ನಾಲ್ಕು ಮಂದಿ ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು ‘ಅಲ್ಟರ್ನೇಟಿವ್ ನೊಬೆಲ್’ ಎಂದೇ ಕರೆಯಲಾಗುತ್ತದೆ. ಈ ಬಾರಿ ಪ್ರಶಸ್ತಿಗೆ ಭಾಜನರಾದ ನಾಲ್ಕು ಮಂದಿಯಲ್ಲಿ ಭಾರತದ LIFE(Legal Initiative for Forest and Environment) ಎನ್ ಜಿ ಒ ಕೂಡಾ ಸೇರಿದೆ. ಸಮಾಜದ ಕೆಳವರ್ಗದ ಜನರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲರನ್ನಾಗಿಸುವ ಕೆಲಸದಲ್ಲಿ ಈ ಸಂಸ್ಥೆ ನಿರತವಾಗಿದೆ.