Published on: November 15, 2021

ಹಾಟ್ಸ್ಪಾಟ್ ಸನ್ಸಿಟಿ

ಹಾಟ್ಸ್ಪಾಟ್ ಸನ್ಸಿಟಿ

ಸುದ್ಧಿಯಲ್ಲಿ ಏಕಿದೆ ? ದೆಹಲಿಯಲ್ಲಿ ಶುದ್ಧಗಾಳಿಗೆ ಪರದಾಡುತ್ತಿರುವ ಮಧ್ಯೆ, ದೇಶದಲ್ಲಿ ಅತೀ ಹೆಚ್ಚು ಬಿಸಿಲಿನ ತಾಪ ಇರುವ 50 ಜಿಲ್ಲೆಗಳ ಪಟ್ಟಿಯಲ್ಲಿ ಕಲಬುರಗಿ ಮತ್ತು ವಿಜಯಪುರ ಸ್ಥಾನ ಪಡೆದಿವೆ. ಮುಂಬರುವ ದಿನಗಳಲ್ಲಿ ಬಿಸಿಲ ಪ್ರಖರತೆ ಹೆಚ್ಚಾಗುವ ಆತಂಕವನ್ನು ಪರಿಸರ ಸಂಬಂಧಿತ ವರದಿಗಳು ವ್ಯಕ್ತಪಡಿಸಿವೆ.

ವರದಿಯಲ್ಲಿ ಏನಿದೆ ?

  • ಸನ್‌ಸಿಟಿಗಳನ್ನು ಗ್ರೀನ್‌ ಸಿಟಿಯಾಗಿ ಮಾಡುವ ಅನಿವಾರ್ಯತೆಯನ್ನು ವರದಿಗಳಲ್ಲಿ ಎತ್ತಿ ತೋರಿಸಲಾಗಿದೆ. ದೇಶದಲ್ಲಿ ಅತೀ ಹೆಚ್ಚು ಉಷ್ಣಾಂಶ ಇರುವ 50 ಜಿಲ್ಲೆಗಳ ಪೈಕಿ ಕಲಬುರಗಿ 38 ಮತ್ತು ವಿಜಯಪುರ 40ನೇ ಸ್ಥಾನದಲ್ಲಿದೆ.
  • ರಾಜ್ಯದಲ್ಲಿ ಗರಿಷ್ಠ ತಾಪಮಾನ ಹೊಂದಿರುವ ಜಿಲ್ಲೆಗಳ ಪಟ್ಟಿಯಲ್ಲಿ ಕಲಬುರಗಿ ಮೊದಲ ಸ್ಥಾನ ಪಡೆದಿರುವುದು ಬಿಸಿ ಹೆಚ್ಚಿಸುವಂತೆ ಮಾಡಿದೆ. ಪರಿಸರ ಸಂಬಂಧಿತ ಕೆಲಸಗಳಲ್ಲಿ ತೊಡಗಿಸಿ ಕೊಂಡಿರುವ ‘ಕೌನ್ಸಿಲ್‌ ಆನ್‌ ಎನರ್ಜಿ ಎನ್ವಿರಾನ್‌ಮೆಂಟ್‌ ಆ್ಯಂಡ್‌ ವಾಟರ್‌’ ಎಂಬ ಸ್ವಯಂ ಸೇವಾ ಸಂಸ್ಥೆ ತಯಾರಿಸಿರುವ ವಾರ್ಷಿಕ ವರದಿಯಲ್ಲಿ ಕಲಬುರಗಿ ಹಾಟ್‌ಸ್ಪಾಟ್‌ ಹೆಚ್ಚಾಗುತ್ತಿರುವ ಬಗ್ಗೆಯೂ ಬೆಳಕು ಚೆಲ್ಲಿದೆ.
  • ಬಿಸಿಲು ಹೆಚ್ಚಿರುವ ಜಿಲ್ಲೆಗಳಲ್ಲಿ ಯೋಜನೆ ರೂಪಿಸುವಂತೆ ರಾಜ್ಯ ಸರಕಾರಕ್ಕೆ ಸಲಹೆ ನೀಡಿದೆ. ಬಿಸಿಲು ನಿಯಂತ್ರಣ ಮತ್ತು ಬರ ನಿಯಂತ್ರಣಕ್ಕೆ ಯೋಜನೆ ರೂಪಿಸುವಂತೆಯೂ ಶಿಫಾರಸು ಮಾಡಲಾಗಿದೆ. ಯೋಜನೆ ತಯಾರಿಸುವವರಿಗೆ, ಆಡಳಿತಗಾರರಿಗೆ, ಅಧಿಕಾರಿಗಳಿಗೆ, ನಾಗರಿಕ ಸಮಾಜಕ್ಕೆ ಇದು ಮಾರ್ಗದರ್ಶನವೂ ಆಗಿದೆ
  • ದೇಶದ ದುರ್ಬಲ ಹವಾಮಾನ ಇರುವ ರಾಜ್ಯಗಳ ಪೈಕಿ ಕರ್ನಾಟಕ 4ನೇ ಸ್ಥಾನದಲ್ಲಿದೆ. ಇದು ರಾಜ್ಯ ಸರಕಾರಕ್ಕೂ ಎಚ್ಚರಿಕೆ ಗಂಟೆಯಾಗಿದ್ದು, ಮುಂಬರುವ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಬರಗಾಲ ಬೀಳುವ ಮತ್ತು ಉಷ್ಣಾಂಶ ಹೆಚ್ಚಾಗುವ ಮುನ್ನೆಚ್ಚರಿಕೆಯೂ ನೀಡಿದೆ. ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾದರೆ ಜನರ ಆರೋಗ್ಯ ಮತ್ತು ಬರದ ಭೀತಿ ಎದುರಾಗಲಿದೆ ಎಂಬ ಆತಂಕವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
  • ಹೆಚ್ಚು ಬಿಸಿಲಿನ ರಿಸ್ಕ್‌ನಲ್ಲಿ ಕಲಬುರಗಿ, ವಿಜಯಪುರ ಇದ್ದರೆ, ರಿಸ್ಕ್‌ನಲ್ಲಿ ಬೀದರ್‌,ಬಾಗಲಕೋಟೆ, ಮೈಸೂರು, ಗದಗ, ಚಾಮರಾಜಪೇಟೆ, ಧಾರವಾಡ, ಚಿತ್ರದುರ್ಗ, ಹಾಸನ ಮತ್ತು ರಾಯಚೂರು ಸ್ಥಾನ ಪಡೆದಿವೆ. ಹೆಚ್ಚು ಉಷ್ಣಾಂಶ ದಾಖಲಾಗುವ ಜಿಲ್ಲೆಗಳು ಉತ್ತರ ಕರ್ನಾಟಕದಲ್ಲಿಯೇ ಹೆಚ್ಚಿರುವುದು ಗಮನಾರ್ಹ.

ಏನು ಮಾಡಬೇಕು?

  • ಈ ವರದಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಯೋಜನೆ ರೂಪಿಸಲು ಸರಕಾಗಳಿಗೆ ಮಾರ್ಗ ಸೂಚಿಯಾಗಿದ್ದು, ಜಿಲ್ಲಾಮಟ್ಟದಲ್ಲಿ ವಿಪತ್ತು ನಿರ್ವಹಣಾ ಯೋಜನೆ ರೂಪಿಸಬೇಕು.
  • ಮಳೆ ಬರದೇ ಇದ್ದರೆ ರೈತರ ಬದುಕು ದುಸ್ತರವಾಗುತ್ತದೆ. ಬಿಸಿಲು ಜಾಸ್ತಿಯಾದರೆ, ಮಾನವ ಸಂಪನ್ಮೂಲ ಸದ್ಬಳಕೆ ಆಗುವುದಿಲ್ಲ. ದುಡಿಮೆಯ ಅವಧಿ ಕಡಿಮೆಯಾಗಿ ಆರ್ಥಿಕತೆಗೆ ಬಲವಾದ ಪೆಟ್ಟು ಬೀಳುತ್ತದೆ. ಅದಕ್ಕಾಗಿ ಹಾಟ್‌ಸ್ಪಾಟ್‌ಗಳನ್ನು ಕೂಲ್‌ ಮಾಡುವುದು ಇಂದಿನ ಅನಿವಾರ್ಯತೆ ಇದೆ.
  • ಜಿಲ್ಲಾವಿಪತ್ತು ನಿರ್ವಹಣೆ ಯೋಜನೆ ರೂಪಿಸಬೇಕು. ಹಸಿರು ಕಲಬುರಗಿ ಮಾಡಲು ಯೋಜನೆ ರೂಪಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ 1.75 ಲಕ್ಷ ಹೆಕ್ಟೇರ್‌ ಬಂಜರು ಭೂಮಿ ಇದೆ. ಇಲ್ಲಿ ಅರಣ್ಯೀಕರಣ ಮಾಡಬಹುದು. ಮಳೆಯೂ ಬರುತ್ತದೆ, ಬಿಸಿಲೂ ನಿಯಂತ್ರಿಸಬಹುದು