Published on: November 19, 2021

ಹೆಲಿ-ಹಬ್

ಹೆಲಿ-ಹಬ್

ಸುದ್ಧಿಯಲ್ಲಿ ಏಕಿದೆ ? ಎಚ್‌ಎಎಲ್‌ನಂತಹ ಸಂಸ್ಥೆ ಹೊಂದಿರುವ ಬೆಂಗಳೂರನ್ನು ಹೆಲಿ-ಹಬ್ ಆಗಿ ಪರಿವರ್ತಿಸುವ ಮಹತ್ವದ ಯೋಜನೆ ಇದೆ. ದೇಶದ ಒಟ್ಟಾರೆ ಅಭಿವೃದ್ಧಿ ದೃಷ್ಟಿಯಿಂದ ಇದು ಬಹಳ ಮಹತ್ವದ್ದಾಗಿದೆ.

  • “ಸಮಯವೇ ಹಣ” ಎಂಬ ಪರಿಕಲ್ಪನೆಯು ಸಮಾಜದ ಎಲ್ಲ ವರ್ಗಗಳಲ್ಲಿ ಪ್ರಾಮುಖ್ಯವನ್ನು ಪಡೆಯುತ್ತಿದೆ. ಜನರು ಸುರಕ್ಷಿತವಾಗಿ ಮತ್ತು ವೇಗವಾಗಿ ಪ್ರಯಾಣಿಸಲು ಬಯಸುತ್ತಾರೆ. ಇದಕ್ಕಾಗಿ ಅವರು ತಮ್ಮ ಖರ್ಚನ್ನು ವಿಸ್ತರಿಸಲೂ ಸಿದ್ಧರಾಗಿದ್ದಾರೆ. ಈ ರೀತಿಯ ವಾತಾವರಣದಲ್ಲಿ ನಾಗರಿಕ ವಿಮಾನಯಾನ ಸಚಿವಾಲಯವು ಬೆಂಗಳೂರನ್ನು ಹೆಲಿ-ಹಬ್ ಆಗಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಿದೆ. ಭಾರತದಲ್ಲಿ ಬರಲಿರುವ ನಾಲ್ಕು ಹೆಲಿಕಾಪ್ಟರ್ ಹಬ್‌ಗಳಲ್ಲಿ ಇದೂ ಒಂದಾಗಲಿದೆ.

ಹಿನ್ನಲೆ

  • ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇತ್ತೀಚೆಗೆ ಡೆಹ್ರಾಡೂನ್ನಲ್ಲಿ ತಮ್ಮ ಸಚಿವಾಲಯವು ಹೆಲಿಕಾಪ್ಟರ್ ಉದ್ಯಮಕ್ಕೆ ಉತ್ತೇಜನ ನೀಡಲಿದೆ ಎಂದು ಒತ್ತಿ ಹೇಳಿದ್ದರು. ಹೊಸ ಹೆಲಿಕಾಪ್ಟರ್ ನೀತಿ ಅಡಿಯಲ್ಲಿ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣವನ್ನು ಹೆಲಿ-ಹಬ್ ಆಗಿ ಅಭಿವೃದ್ಧಿಪಡಿಸಲು ಗುರುತಿಸಲಾಗಿದೆ. ಅದಕ್ಕೆ ಸಚಿವರು ಯಾವುದೇ ಕಾಲಮಿತಿಯನ್ನು ವಿಧಿಸಿಲ್ಲ.
  • ಅವರು ಹೆಲಿಕಾಪ್ಟರ್ಗಳಿಗಾಗಿ ಮೀಸಲಾದ ಮೂರು ಕಾರಿಡಾರ್‌ಗಳನ್ನು ಘೋಷಿಸಿದ್ದಾರೆ, ಆದರೆ ಅವೆಲ್ಲವೂ ಉತ್ತರ ಭಾರತದಲ್ಲಿವೆ. ಮುಖ್ಯವಾಗಿ, ಅಪಘಾತಕ್ಕೀಡಾದವರನ್ನು ಸ್ಥಳಾಂತರಿಸಲು ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ಬರುವ ಮೂರು ಎಕ್ಸ್‌ಪ್ರೆಸ್‌ ವೇ ಹೆಲಿಪೋರ್ಟ್‌ಗಳನ್ನು ಅವರು ಹೆಸರಿಸಿದ್ದಾರೆ. ಈ ಆದ್ಯತೆಯ ಪಟ್ಟಿಯಲ್ಲಿ ಕರ್ನಾಟಕಕ್ಕೆ ಸ್ಥಾನವಿಲ್ಲ. ಆದರೂ, ಮುಂದಿನ ದಿನಗಳಲ್ಲಿ ಬೆಂಗಳೂರು ಭಾರತದ ವಾಯುಯಾನದ ರಾಜಧಾನಿಯಾಗುವ ಎಲ್ಲ ಸಾಮರ್ಥ್ಯವನ್ನು ಹೊಂದಿರುವುದರಿಂದ ಇದು ಪ್ರಾಮುಖ್ಯವನ್ನು ಪಡೆಯಬಹುದು.

ಭಾರತ ಇನ್ನೂ ದೂರದಲ್ಲಿದೆ!

  • ತನ್ನ ಸಾಮರ್ಥ್ಯವನ್ನು ಪೂರೈಸಲು ಸಾಧ್ಯವಾಗದಿದ್ದರೂ, ನಾಗರಿಕ ವಿಮಾನಯಾನ ಮಾರುಕಟ್ಟೆಯು ಬೆಳೆಯುತ್ತಿದೆ. ಅನೇಕ ಮುಂದುವರಿದ ದೇಶಗಳಿಗೆ ಹೋಲಿಸಿದರೆ ದೇಶವು ಇನ್ನೂ ಬಹಳ ದೂರ ಸಾಗಬೇಕಾಗಿದೆ. ಭಾರತೀಯ ಹೆಲಿಕಾಪ್ಟರ್ ಉದ್ಯಮವು ಹೂಡಿಕೆ ಮತ್ತು ವಾಯು ಸಂಚಾರವನ್ನು ಆಕರ್ಷಿಸಬಹುದು. ಶ್ರೀಮಂತ ಭಾರತೀಯ ಉದ್ಯಮಿಗಳು ಖಾಸಗಿ ಜೆಟ್‌ಗಳನ್ನು ಟ್ಯಾಕ್ಸಿಗಳಾಗಿ ಖರೀದಿಸುತ್ತಿದ್ದಾರೆ. ಆದರೂ, ಸರಿಯಾದ ನೀತಿಯ ಕೊರತೆಯಿಂದಾಗಿ, ಪ್ರಮುಖವಾಗಿ ಹೂಡಿಕೆದಾರರಿಗೆ ಆಕರ್ಷಕವಾಗಲು, ಪ್ರವೇಶವನ್ನು ಪಡೆಯಲು ಮತ್ತು ಸ್ಪರ್ಧಿಸಲು ಹೆಲಿಕಾಪ್ಟರ್ ಸೇವೆಗೆ ಸಾಧ್ಯವಾಗಲಿಲ್ಲ.
  • ಸರ್ಕಾರವು 1986ರಷ್ಟು ಹಿಂದೆಯೇ ಹೆಲಿಕಾಪ್ಟರ್ ಕಾರ್ಪೊರೇಶನ್ ಆಫ್ ಇಂಡಿಯಾವನ್ನು (ಈಗಿನ ಪವನ್ ಹನ್ಸ್) ಸ್ಥಾಪಿಸಿತು. ಆದರೆ, ಅದರ ವೆಬ್‌ಸೈಟ್ ಪ್ರಕಾರ, ಅದು ಕೇವಲ 43 ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುತ್ತದೆ ಮತ್ತು ಚಾಲನೆಯಲ್ಲಿರಿಸಿದೆ. 2027ರ ವೇಳೆಗೆ, ಇದು 100-ಕಾಪ್ಟರ್ ಕಂಪನಿಯಾಗುವ ಗುರಿಯನ್ನು ಹೊಂದಿದೆ. ಕಾಪ್ಟರ್ ಸೇವೆಗಳಿಗೆ ಸಂಬಂಧಿಸಿ ಸಾರ್ವಜನಿಕ ವಲಯದ ಘಟಕಗಳ ಅಗತ್ಯಗಳ ಮೇಲೆ ಏಕಸ್ವಾಮ್ಯದ ಹೊರತಾಗಿಯೂ, ಇದು ಅತ್ಯಂತ ನಿಧಾನಗತಿಯ ಬೆಳವಣಿಗೆಯಾಗಿದೆ.
  • 2019ರಲ್ಲಿ ಭಾರತದಲ್ಲಿ ನೋಂದಾಯಿತ ಮತ್ತು ಕಾರ್ಯಾಚರಣೆಯ ನಾಗರಿಕ ಹೆಲಿಕಾಪ್ಟರ್‌ಗಳು ಇದ್ದವು. ಇತ್ತೀಚಿನ ವರ್ಷಗಳಲ್ಲಿ ಈ ಕ್ಷೇತ್ರವು ಋಣಾತ್ಮಕ ಬೆಳವಣಿಗೆಯನ್ನು ಕಂಡಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ 1,280 ಹೆಲಿಕಾಪ್ಟರ್‌ಗಳು ಮತ್ತು 1,141 ಹೆಲಿಪೋರ್ಟ್‌ಗಳಿವೆ. ಕರ್ನಾಟಕದಲ್ಲಿ ಸುಮಾರು 113 ಹೆಲಿಪ್ಯಾಡ್‌ಗಳಿವೆ. ಬೆಂಗಳೂರಿನಲ್ಲಿ ಮೇಲ್ಛಾವಣಿ ಸೇರಿದಂತೆ ಸುಮಾರು 93 ಹೆಲಿಪ್ಯಾಡ್‌ಗಳಿವೆ.
  • ಒಂದೆರಡು ವರ್ಷಗಳ ಹಿಂದೆ, ಇವುಗಳಲ್ಲಿ ಒಂದಕ್ಕೆ ಮಾತ್ರ ಮಾನ್ಯ ಅನುಮತಿ ಇತ್ತು. ಕರ್ನಾಟಕ ಸರ್ಕಾರವು ಹೊಸ ಹೆಲಿಕಾಪ್ಟರ್ ನೀತಿಗೆ ಒಲವು ತೋರಲು ಮತ್ತು HAL ಹೆಲಿ-ಹಬ್ ಯಶಸ್ವಿಯಾಗುವುದನ್ನು ಖಚಿತಪಡಿಸಿಕೊಳ್ಳಲು ಇದು ಸಕಾಲವಾಗಿದೆ.

ಕರ್ನಾಟಕದ ಜವಾಬ್ದಾರಿಗಳು

  • ಉದ್ಯಮವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಗರಿಷ್ಠ ಲಾಭವನ್ನು ಪಡೆಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ನಾಗರಿಕ ವಿಮಾನಯಾನ ಸಚಿವಾಲಯ, ಹೆಲಿಕಾಪ್ಟರ್ ಸೇವಾ ಪೂರೈಕೆದಾರರು ಮತ್ತು ಹೆಲಿಕಾಪ್ಟರ್ ಉದ್ಯಮದಲ್ಲಿ ನಿರೀಕ್ಷಿತ ಹೂಡಿಕೆದಾರರ ನಡುವೆ ಸಮನ್ವಯ ಸಾಧಿಸುವ ವಿಷಯ ತಜ್ಞರ ಸಮಿತಿಯನ್ನು ಅದು ಹೊಂದಿರಬೇಕು.
  • ಹೆಲಿಪೋರ್ಟ್‌ಗಳು ಮತ್ತು ಮೇಲ್ಛಾವಣಿ ಹೆಲಿಪ್ಯಾಡ್‌ಗಳನ್ನು ಸ್ಥಾಪಿಸುವುದಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಆದ್ಯತೆ ನೀಡಬೇಕು. ವಾಣಿಜ್ಯೋದ್ಯಮಿಗಳನ್ನು ಆಕರ್ಷಿಸಲು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವ ಪೂರ್ವಭಾವಿ ವಿಧಾನವು ಸದ್ಯದ ಅಗತ್ಯವಾಗಿದೆ.

ಕರ್ನಾಟಕದ ಮುಂದಿರುವ ಸವಾಲುಗಳು

  • ವಾಹನ ದಟ್ಟಣೆ ಸಮಸ್ಯೆ: ಇತ್ತೀಚಿನ ವರ್ಷಗಳಲ್ಲಿ ಹಳೆಯ HAL ವಿಮಾನ ನಿಲ್ದಾಣ ರಸ್ತೆ ಹಾಗೂ ಸುತ್ತಮುತ್ತ ವಾಹನಗಳ ದಟ್ಟಣೆ ಹೆಚ್ಚಿದೆ. ವಿಮಾನ ಪ್ರಯಾಣಿಕರನ್ನು ಆಕರ್ಷಿಸಲು ವಿಮಾನ ನಿಲ್ದಾಣವನ್ನು ತಲುಪಲು ತ್ವರಿತ ಮಾರ್ಗವನ್ನು ಒದಗಿಸುವುದು ಅತ್ಯಗತ್ಯ.
  • ಉದ್ಯಮಕ್ಕೆ ಪೂರಕ ವಾತಾವರಣ ನಿರ್ಮಾಣ: ವಿಮಾನ ನಿಲ್ದಾಣಗಳಿಂದ ಹೆಲಿಕಾಪ್ಟರ್‌ಗಳು ಕಾರ್ಯಾಚರಣೆ ನಡೆಸುವಾಗ ಲ್ಯಾಂಡಿಂಗ್ ಶುಲ್ಕಗಳು, ನ್ಯಾವಿಗೇಷನ್ ಶುಲ್ಕಗಳು ಮುಂತಾದವುಗಳನ್ನು ಹೊಂದಿರುತ್ತವೆ. ಇದು ಕಾರ್ಯಾಚರಣೆಯ ವೆಚ್ಚವನ್ನು ಸ್ವಾಭಾವಿಕವಾಗಿಯೇ ಹೆಚ್ಚಿಸುತ್ತದೆ. HAL ವಿಮಾನ ನಿಲ್ದಾಣವು ಕಾಪ್ಟರ್‌ಗಳಿಗೆ ವಿಶೇಷ ವಿಮಾನ ನಿಲ್ದಾಣವಾದಾಗ, ಹೆಚ್ಚಿನ ಜನರು ಪ್ರಯಾಣಿಸಲು ವೆಚ್ಚದ ಅಂಶವು ನಾಮಮಾತ್ರವಾಗಿರಬೇಕು.
  • ಸಹಜವಾಗಿ, ಹೆಲಿಪೋರ್ಟ್‌ಗಳು ಸುರಕ್ಷಿತವಾಗಿ ಕಾರ್ಯನಿರ್ವಹಿಸಲು ಮತ್ತು ಜನರ ನಂಬಿಕೆಯನ್ನು ಗೆಲ್ಲಲು ಸೌಲಭ್ಯಗಳ ವಿಷಯದಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ. ಕರ್ನಾಟಕದಲ್ಲಿ ಎಲ್ಲಿಯಾದರೂ ಒಬ್ಬರು ಅಪಘಾತಕ್ಕೀಡಾದರೂ ಜನರು ಸೌಲಭ್ಯವನ್ನು ಬಳಸುವ ಬಗ್ಗೆ ಎಚ್ಚರ ವಹಿಸಬಹುದು.
  • ರಾಜ್ಯದಲ್ಲಿ ಅನೇಕ ಸುಂದರ ಪ್ರವಾಸಿ ತಾಣಗಳಿವೆ. ಬೆಂಗಳೂರಿನಲ್ಲಿ ಹೈಟೆಕ್ ಆಸ್ಪತ್ರೆಗಳಿವೆ. ಶ್ರೇಣಿ II ಮತ್ತು ಶ್ರೇಣಿ III ನಗರಗಳು ಕೈಗಾರಿಕಾ ಹೂಡಿಕೆಗಾಗಿ ಉತ್ಸುಕತೆಯಿಂದ ಕಾಯುತ್ತಿವೆ. ಈ ಹಂತದಲ್ಲಿ, ರಾಜ್ಯಕ್ಕೆ ಕೈಗೆಟುಕುವ ವಿಮಾನ ಸಂಪರ್ಕದ ಅಗತ್ಯವಿದೆ ಮತ್ತು ಹೆಲಿಕಾಪ್ಟರ್ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಉದ್ಯಮವು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ರಾಜ್ಯವು ವೇಗವರ್ಧಕವಾಗಿರಬೇಕು.
  • ವಿಶ್ವದರ್ಜೆಯ ತರಬೇತಿ ಸಂಸ್ಥೆ ಅಗತ್ಯ: ಎಲ್ಲಕ್ಕಿಂತ ಹೆಚ್ಚಾಗಿ, ಹೆಲಿಕಾಪ್ಟರ್ ಕ್ಷೇತ್ರ ಸೇರಿದಂತೆ ವಿಮಾನಯಾನದಲ್ಲಿ ಉದ್ಯೋಗಗಳನ್ನು ತೆಗೆದುಕೊಳ್ಳಲು ಯುವಕರನ್ನು ಸಿದ್ಧಗೊಳಿಸಲು ಕರ್ನಾಟಕಕ್ಕೆ ವಿಶ್ವ ದರ್ಜೆಯ ತರಬೇತಿ ಸಂಸ್ಥೆಯ ಅಗತ್ಯವಿದೆ. ವಿಮಾನ ಮತ್ತು ಕಾಪ್ಟರ್‌ಗಳ ದುರಸ್ತಿ ಮತ್ತು ನಿರ್ವಹಣೆ ಕೂಡ ವಿಶೇಷ ವಿಷಯಗಳಾಗಿವೆ.
  • HAL, NAL, ಅಥವಾ ವಿಮಾನ ನಿಲ್ದಾಣಗಳು ಇದ್ದ ಮಾತ್ರಕ್ಕೆ ಹೂಡಿಕೆದಾರರಿಗೆ ನಗರ ಅಥವಾ ರಾಜ್ಯವನ್ನು ಆಕರ್ಷಕವಾಗಿ ಮಾಡುವುದಿಲ್ಲ. ಸ್ಥಳೀಯರಲ್ಲಿ ನುರಿತ ಮಾನವಶಕ್ತಿಯೂ ಅತ್ಯಗತ್ಯ. ಹೆಲಿಕಾಪ್ಟರ್‌ಗಳನ್ನು ಸಾಮಾನ್ಯ ಜನರ ವಾಹನವನ್ನಾಗಿಸುವುದು ಸಚಿವ ಸಿಂಧಿಯಾ ಅವರ ಗುರಿಯಾಗಿದೆ. ಇದು ನಿಜವಾಗಬೇಕಾದರೆ, ಸಾಕಷ್ಟು ತಯಾರಿ ಅಗತ್ಯವಿದೆ.