Published on: November 10, 2021

ಹೊಸ ಮರಳು ನೀತಿ

ಹೊಸ ಮರಳು ನೀತಿ

ಸುದ್ಧಿಯಲ್ಲಿ ಏಕಿದೆ ? ಹೊಸ ಮರಳು ನೀತಿ ಜಾರಿಗಾಗಿ ಮಾಡಿರುವ ತಿದ್ದುಪಡಿ ನಿಯಮಾವಳಿಗಳಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

  • ಸರಕಾರದ ಅಧೀನ ಸಂಸ್ಥೆಗಳಾದ ಹಟ್ಟಿ ಚಿನ್ನದ ಗಣಿ ಸಂಸ್ಥೆ (ಎಚ್‌ಜಿಎಂಎಲ್‌) ಹಾಗೂ ಕರ್ನಾಟಕ ರಾಜ್ಯ ಖನಿಜಗಳ ನಿಗಮದಿಂದ (ಕೆಎಸ್‌ಎಂಸಿ- ಹಿಂದಿನ ಎಂಎಂಎಲ್‌) ಮರಳು ನಿಕ್ಷೇಪ ತೆಗೆದು ಪಾರದರ್ಶಕವಾಗಿ ಸಾಗಿಸಿ ಗ್ರಾಹಕರಿಗೆ ಪೂರೈಸಲು ಪೂರಕವಾದ ನಿಯಮಾವಳಿಗಳಿಗೆ ಸಂಪುಟ ಅಸ್ತು ಎಂದಿದೆ.
  • ಸದ್ಯ ಹರಾಜಿನಲ್ಲಿ ಮರಳು ಗಣಿಗಾರಿಕೆಗೆ ಗುತ್ತಿಗೆ ಪಡೆದ ಸಂಸ್ಥೆಗಳ ಅವಧಿ ಮುಗಿದ ಬಳಿಕ ಸರಕಾರದ ಉಭಯ ಸಂಸ್ಥೆಗಳು ಮರಳು ಗಣಿಗಾರಿಕೆ ಹಾಗೂ ಸಾಗಣೆಯ ಜವಾಬ್ದಾರಿ ವಹಿಸಿಕೊಳ್ಳಲಿವೆ.
  • ಇದಕ್ಕಾಗಿ ‘ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮ 2021’ ಕ್ಕೆ ಸಂಪುಟ ಅನುಮೋದನೆ ನೀಡಿದೆ.
  • ಮರಳು ಗಣಿಗಾರಿಕೆ ಮಾಡಿ ಅದರ ಸಾಗಣೆಗಾಗಿ ಮೂರು ಹಂತಗಳನ್ನು ರೂಪಿಸಲಾಗಿದೆ. ಗ್ರಾಮ ಮಟ್ಟ, ನದಿ ಪಾತ್ರ ಮತ್ತು ಸಮುದ್ರ ತೀರ ಎಂದು ಮೂರು ಹಂತಗಳನ್ನು ನಿಗದಿಪಡಿಸಲಾಗಿದೆ.
  • ಗ್ರಾಮ ಮಟ್ಟದಲ್ಲಿ ಮಾರಲು ಪ್ರತಿ ಟನ್‌ಗೆ ₹300, ನದಿ ಸೇರುವ ಪಾತ್ರಗಳು ಮತ್ತು ಪಟ್ಟಣಗಳಿಗೆ ಟನ್‌ಗೆ ₹700 ನಿಗದಿ ಮಾಡಲಾಗಿದೆ ಎಂದರು.

ಏಕೆ ಈ ಹೊಸ ನೀತಿ ?

  • ಮರಳು ಮಾಫಿಯಾ ಭೀತಿ ಮತ್ತು ನಿರಂತರ ‘ಅರಳು ಮರಳು’ ನೀತಿಯ ಗೊಂದಲದಿಂದಾಗಿ ಜನಸಾಮಾನ್ಯರು ಬವಣೆ ಪಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕಡಿಮೆ ದರದಲ್ಲಿ ಮರಳು ಸಿಗುವ ಹೊಸ ಯೋಜನೆ ರೂಪಿಸಿದೆ.

ಹೊಸ ನೀತಿಯಲ್ಲಿ ಏನಿದೆ ?

  • ಒಮ್ಮೆಗೆ ಗರಿಷ್ಠ 3 ಟನ್‌ ಮರಳು ಸಾಗಣೆಗಷ್ಟೇ ಅವಕಾಶವಿರಲಿದೆ. ತಾಲೂಕನ್ನು ಒಂದು ಘಟಕವೆಂದು ಗುರುತಿಸಲಾಗಿದೆ. ತಾಲೂಕಿನ ಗ್ರಾ.ಪಂ ವ್ಯಾಪ್ತಿಯಲ್ಲಷ್ಟೇ ಈ ಮರಳು ಬಳಸಬೇಕು. ಇತರೆ ತಾಲೂಕು, ಜಿಲ್ಲೆಗೆ ಸಾಗಿಸಲು ಅವಕಾಶವಿರುವುದಿಲ್ಲ. ಇದರಿಂದ ಸ್ಥಳೀಯ ಬಳಕೆಗೆ ಕಡಿಮೆ ದರದಲ್ಲಿ ಸುಲಭವಾಗಿ ಮರಳು ಸಿಗಲಿದೆ
  • ನದಿ ಪಾತ್ರ, ಹೊಳೆ, ನದಿ ಸಮುದ್ರ ಸೇರುವ ಪ್ರದೇಶ, ಜಲಾಶಯ, ಅಣೆಕಟ್ಟಿನ ಹಿನ್ನೀರು ಪ್ರದೇಶದಲ್ಲಿ ಮರಳು ನಿಕ್ಷೇಪವನ್ನು ಸರಕಾರಿ ಸಂಸ್ಥೆಗಳೇ ಗಣಿಗಾರಿಕೆ ನಡೆಸಿ ಹಂಚಿಕೆ ಮಾಡಲಿವೆ.
  • ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯ ತಾಲೂಕು ಸಮಿತಿ ಮರಳು ನಿಕ್ಷೇಪ ಸ್ಥಳಗಳನ್ನು ಗುರುತಿಸಲಿದ್ದು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ ಅಂತಿಮವಾಗಿ ನೋಟಿಫೈ ಮಾಡಲಿದೆ
  • ಈ ಎರಡು ಸಂಸ್ಥೆಗಳನ್ನು ಹೊರತುಪಡಿಸಿ ಯಾರೊಬ್ಬರೂ ಮರಳು ಗಣಿಗಾರಿಕೆ ನಡೆಸಲು ಅವಕಾಶವಿರುವುದಿಲ್ಲ. ಒಂದೊಮ್ಮೆ ಸರಕಾರದ ಯಾವುದೇ ಇಲಾಖೆ ಸ್ವಂತ ಬಳಕೆಗೆ ಮರಳು ಬಳಸಲು ಬಯಸಿದರೆ ಪ್ರತ್ಯೇಕವಾಗಿ ಮರಳು ಬ್ಲಾಕ್‌ ಹಂಚಿಕೆಗೂ ನಿಯಮಾವಳಿಯಲ್ಲಿ ಅವಕಾಶವಿದೆ. ಹಾಗೆಯೇ ಸರಕಾರ ಬಯಸಿದರೆ ಯಾವುದೇ ನಿಗಮ, ಮಂಡಳಿ, ಇಲಾಖೆಗೂ ಮರಳು ಗಣಿಗಾರಿಕೆ ನಡೆಸಲು, ಮಾರಾಟ ಮಾಡಲು ಅನುಮತಿ ನೀಡಲು ನಿಯಮಾವಳಿಯಲ್ಲಿ ಅವಕಾಶ ನೀಡಲಾಗಿದೆ.
  • ಗ್ರಾಮೀಣ ಪ್ರದೇಶದಲ್ಲಿ ಮರಳು ದಾಸ್ತಾನು ಮಾಡಿ ಮಾರಲು ಜಿಲ್ಲಾ ಖನಿಜ ನಿಧಿ(ಡಿಎಂಎಫ್‌)ಯಡಿ ಶೇ.2ರಷ್ಟು ಸಂಗ್ರಹಕ್ಕೆ ಅವಕಾಶ ನೀಡಲಾಗಿದೆ. ಅದನ್ನು ಗ್ರಾ.ಪಂಗೆ ನೀಡಲಾಗುವುದು. ರಾಯಧನದಲ್ಲಿ ಶೇ.50 ಮೊತ್ತದಲ್ಲಿ ಶೇ.25ರಷ್ಟನ್ನು ಸಂಬಂಧಪಟ್ಟ ಗ್ರಾ.ಪಂ ಹಾಗೂ ಉಳಿದ ಶೇ. 25ರಷ್ಟನ್ನು ಇತರೆ ಗ್ರಾ.ಪಂ ವ್ಯಾಪ್ತಿಯಲ್ಲಿನ ರಸ್ತೆ ದುರಸ್ತಿ ಇತ್ಯಾದಿಗೆ ಬಳಸಬಹುದು.
  • ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತು ತಾಲ್ಲೂಕು ಮಟ್ಟದಲ್ಲಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ‘ಮರಳು ಸಮಿತಿ’ಗಳ ರಚನೆ.
  • ಮರಳು ಗಣಿಗಾರಿಕೆ ಮತ್ತು ಸಾಗಣೆಯ ಉಸ್ತುವಾರಿಯನ್ನು ಈ ಸಮಿತಿಗಳು ಮೇಲುಸ್ತುವಾರಿ ವಹಿಸಲಿವೆ. ಯಾವುದೇ ನಿಯಮಗಳ ಉಲ್ಲಂಘನೆ ಮಾಡಿದಲ್ಲಿ ದಂಡಿಸುವ ಅಧಿಕಾರ ನೀಡಲಾಗಿದೆ.
  • ಸ್ವಂತ ಬಳಕೆಗಾಗಿ ಟ್ರ್ಯಾಕ್ಟರ್‌, ಎತ್ತಿನ ಬಂಡಿ, ದ್ವಿಚಕ್ರವಾಹನಗಳಲ್ಲಿ ಮರಳು ಸಾಗಣೆ ಮಾಡಿದರೆ ಪ್ರಕರಣ ದಾಖಲಿಸುವುದಿಲ್ಲ. ಆದರೆ, ಬೇರೆ ಜಿಲ್ಲೆಗಳಿಗೆ ಸಾಗಣೆ ಮಾಡುವಂತಿಲ್ಲ. ಒಂದು ವೇಳೆ ಸಾಗಣಿಕೆ ಮಾಡಿದರೆ ಪ್ರಕರಣ ದಾಖಲಿಸಲಾಗುವುದು.
  • ದ್ವಿಚಕ್ರ ವಾಹನ, ಎತ್ತಿನಗಾಡಿ, ಟ್ರ್ಯಾಕ್ಟರ್‌, ಕತ್ತೆ ಮೇಲೆ ಮರಳು ಕೊಂಡೊಯ್ಯವ ರೈತರು ಮತ್ತು ಬಡವರಿಗೆ ರಾಯಧನದ ವಿನಾಯಿತಿ ನೀಡಲಾಗುವುದು.
  • ಪಟ್ಟಾ ಭೂಮಿಯಲ್ಲಿ ಮರಳು ಗಣಿಗಾರಿಕೆ ನಿಷೇಧಿಸಲಾಗಿದ್ದರೂ, ಜಿಲ್ಲಾ ಮತ್ತು ತಾಲ್ಲೂಕು ಮರಳು ಸಮಿತಿಗಳಿಂದ ಅನಮತಿ ಪಡೆಯುವುದು ಕಡ್ಡಾಯ. ಇದಕ್ಕೆ ಸಮಿತಿಗಳು ಸಮಜಾಯಿಷಿ ನೀಡಬೇಕು.
  • ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು ಗಣಿಗಾರಿಕೆ ಸಂಬಂಧ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
  • ಪಾರದರ್ಶಕ ಟೆಂಡರ್‌ಗೆ ನ್ಯಾಯಮೂರ್ತಿ ಅಧ್ಯಕ್ಷತೆಯ ಸಮಿತಿ

ಗ್ರಾಮೀಣರು ಪಡೆಯೋದು ಹೇಗೆ?

  • ಗ್ರಾ. ಪಂ ವ್ಯಾಪ್ತಿಯ ಕೆರೆ, ಕುಂಟೆ, ಹಳ್ಳ, ತೊರೆಯಲ್ಲಿನ ಮರಳು ನಿಕ್ಷೇಪವನ್ನು ತೆಗೆದು ಸ್ಥಳೀಯವಾಗಿಯೇ ಬಳಸಲು ಅವಕಾಶ ಕಲ್ಪಿಸಲಾಗಿದೆ.
  • ವಾರದಲ್ಲಿ ನಿರ್ದಿಷ್ಟ ದಿನದಂದು ಗ್ರಾಮ ಪಂಚಾಯಿತಿ ಸಿಬ್ಬಂದಿ ಸಮ್ಮುಖದಲ್ಲಿ ಅಗತ್ಯವಿರುವಷ್ಟು ಮರಳು ಪಡೆಯಬಹುದು.
  • ಕರಾವಳಿ ಭಾಗದಲ್ಲಿ ನಾನ್‌ ಸಿಆರ್‌ಜಡ್‌ ಪ್ರದೇಶದಲ್ಲಿ ನೀರಿನಲ್ಲಿ ಮುಳುಗಿ ಮರಳು ತೆಗೆಯುವ ಸಾಂಪ್ರದಾಯಿಕ ವೃತ್ತಿ ಮುಂದುವರಿಸಲು ಅವಕಾಶ.
  • ಗ್ರಾಮೀಣ ವಸತಿ, ಸರಕಾರಿ ಪ್ರಾಯೋಜಿತ ಯೋಜನೆಗಳಿಗೆ ರಿಯಾಯಿತಿ ದರದಲ್ಲಿ ಮರಳು ಕೊಡಲು ಗ್ರಾ.ಪಂಗೆ ಅವಕಾಶ