Published on: September 8, 2025
ಚುಟುಕು ಸಮಾಚಾರ: 1-6 ಸೆಪ್ಟೆಂಬರ್ 2025
ಚುಟುಕು ಸಮಾಚಾರ: 1-6 ಸೆಪ್ಟೆಂಬರ್ 2025
ಸುದ್ದಿಯಲ್ಲಿರುವ ಯೋಜನೆಗಳು:
- ಪಿಎಂಎವೈ-ಯು (PMAY-U) 2.0 ಗೆ ‘ಅಂಗಿಕಾರ್ 2025’ ಅಭಿಯಾನ:ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಅವರು ‘ಅಂಗಿಕಾರ್ 2025’ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ – ಅರ್ಬನ್ (PMAY-U) 2.0 ಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸಂಪರ್ಕ ಮತ್ತು ಜಾಗೃತಿ ಅಭಿಯಾನವಾಗಿದೆ. ಇದರ ಮುಖ್ಯ ಉದ್ದೇಶವೆಂದರೆ ಯೋಜನೆಯ ಅಡಿಯಲ್ಲಿ ಉಳಿದಿರುವ ಮನೆಗಳ ನಿರ್ಮಾಣವನ್ನು ವೇಗಗೊಳಿಸುವುದು ಮತ್ತು ಒಂದು ಕೋಟಿ ಹೆಚ್ಚುವರಿ ನಗರ ಕುಟುಂಬಗಳನ್ನು ನೋಂದಾಯಿಸುವುದು. ಈ ಅಭಿಯಾನವು ನಗರ ಬಡವರಿಗೆ ಘನತೆಯ ವಸತಿ ಸೌಲಭ್ಯ ಒದಗಿಸಿ, ‘ಎಲ್ಲರಿಗೂ ಮನೆ’ ಎಂಬ ಸರ್ಕಾರದ ದೃಷ್ಟಿಕೋನವನ್ನು ಬಲಪಡಿಸುತ್ತದೆ.
- ಸಮಿಕಾನ್ ಇಂಡಿಯಾ 2025: ಪ್ರಧಾನಿ ಮೋದಿ ಅವರು ದೆಹಲಿಯ ಯಶೋಭೂಮಿಯಲ್ಲಿ ಸಮಿಕಾನ್ ಇಂಡಿಯಾ 2025 ರ ನಾಲ್ಕನೇ ಆವೃತ್ತಿಯನ್ನು ಉದ್ಘಾಟಿಸಿದರು. ಭಾರತವನ್ನು ಸೆಮಿಕಂಡಕ್ಟರ್ ಮತ್ತು ಮೈಕ್ರೋ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ಗುರಿ ಹೊಂದಿದೆ. 18 ದೇಶಗಳು, 9 ರಾಜ್ಯಗಳಿಂದ 350 ಕಂಪನಿಗಳು ಭಾಗವಹಿಸಿವೆ. ಇಸ್ರೋದ ಸೆಮಿಕಂಡಕ್ಟರ್ ಲ್ಯಾಬ್ ಅಭಿವೃದ್ಧಿಪಡಿಸಿದ ಭಾರತದ ಮೊದಲ ಸಂಪೂರ್ಣ ಸ್ಥಳೀಯ ‘ವಿಕ್ರಮ್‘ 32-ಬಿಟ್ ಪ್ರೊಸೆಸರ್ ಚಿಪ್ ಸಹ ಪ್ರದರ್ಶನಗೊಂಡಿದೆ, ಇದು ಆತ್ಮನಿರ್ಭರ ಭಾರತದ ಸಂಕೇತವಾಗಿ ತೋರಿಸುತ್ತದೆ.
ಅರ್ಥಶಾಸ್ತ್ರ:
- GST ದರ ಪರಿಷ್ಕರಣೆ: ಭಾರತದಲ್ಲಿ ‘ಒಂದು ರಾಷ್ಟ್ರ, ಒಂದು ತೆರಿಗೆ’ ಪರಿಕಲ್ಪನೆಯಡಿಯಲ್ಲಿ GST ಮಂಡಳಿ ಹಲವು ಉತ್ಪನ್ನಗಳ ತೆರಿಗೆ ದರಗಳನ್ನು ಪರಿಷ್ಕರಿಸಿದೆ. ಸೆಪ್ಟೆಂಬರ್ 22 ರಿಂದ ಜಾರಿಗೆ ಬರುವ ಈ ಹೊಸ ದರಗಳು, ಹಣದುಬ್ಬರ ತಗ್ಗಿಸುವ ಮತ್ತು ಗ್ರಾಹಕರಿಗೆ ನೇರ ಲಾಭ ನೀಡುವ ಉದ್ದೇಶ ಹೊಂದಿವೆ. ಎಸ್ಬಿಐ ರಿಸರ್ಚ್ ಪ್ರಕಾರ, ಚಿಲ್ಲರೆ ಹಣದುಬ್ಬರವನ್ನು ಶೇ 65 ರಿಂದ 0.75ರಷ್ಟು ಕಡಿಮೆ ಮಾಡಬಹುದು. ಈ ಕ್ರಮವು ಆರ್ಥಿಕತೆಗೆ ಉತ್ತೇಜನ ನೀಡಿ, ಕೇಂದ್ರ-ರಾಜ್ಯ ಹಣಕಾಸು ಸಂಬಂಧಗಳನ್ನು ಬಲಪಡಿಸುತ್ತದೆ.
- ವಿದೇಶಿ ನೇರ ಹೂಡಿಕೆ (FDI): ಕರ್ನಾಟಕ ಮುಂಚೂಣಿಯಲ್ಲಿ: ಜೂನ್ ತ್ರೈಮಾಸಿಕದ ಸರ್ಕಾರಿ ವರದಿಯ ಪ್ರಕಾರ, ಭಾರತದ ಒಟ್ಟು ವಿದೇಶಿ ನೇರ ಹೂಡಿಕೆ (FDI) ₹1.63 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದರಲ್ಲಿ ಕರ್ನಾಟಕವು ₹50,094 ಕೋಟಿ ಹೂಡಿಕೆಯೊಂದಿಗೆ ದೇಶದಲ್ಲೇ ಅಗ್ರಸ್ಥಾನ ಪಡೆದಿದೆ. ಅಮೆರಿಕವು ₹49,379 ಕೋಟಿಯೊಂದಿಗೆ ಅತಿ ಹೆಚ್ಚು ಹೂಡಿಕೆ ಮಾಡಿದ ದೇಶವಾಗಿದೆ. ಭಾರತದ ಆರ್ಥಿಕ ಬೆಳವಣಿಗೆಗೆ ಮತ್ತು ಉದ್ಯೋಗ ಸೃಷ್ಟಿಗೆ ಪ್ರಮುಖ ಕೊಡುಗೆ ನೀಡುತ್ತದೆ, ಜೊತೆಗೆ ಕರ್ನಾಟಕದ ಸ್ಥಾನವನ್ನು ತಂತ್ರಜ್ಞಾನ ಕೇಂದ್ರವಾಗಿ ಮತ್ತಷ್ಟು ಬಲಪಡಿಸುತ್ತದೆ.
ವಿಜ್ಞಾನ ಮತ್ತು ತಂತ್ರಜ್ಞಾನ:
- ಆರೋಗ್ಯ ಕ್ಷೇತ್ರದಲ್ಲಿ AIಗಾಗಿ ಜಾಗತಿಕ ನಿಯಂತ್ರಣ ಸಂಸ್ಥೆ: ಭಾರತವು ಆರೋಗ್ಯ ಸೇವೆಗಳಲ್ಲಿ ಕೃತಕ ಬುದ್ಧಿಮತ್ತೆ (AI) ಯ ಆಡಳಿತವನ್ನು ಬಲಪಡಿಸಲು HealthAI ಗ್ಲೋಬಲ್ ರೆಗ್ಯುಲೇಟರಿ ನೆಟ್ವರ್ಕ್ಗೆ (GRN) ಸೇರ್ಪಡೆಗೊಂಡಿದೆ. ಈ ಅಂತರರಾಷ್ಟ್ರೀಯ ವೇದಿಕೆಗೆ ಭಾರತವನ್ನು ICMR-NIRDHDS ಮತ್ತು IndiaAI ಪ್ರತಿನಿಧಿಸುತ್ತವೆ. ಈಗಾಗಲೇ ಸದಸ್ಯರಾಗಿರುವ ಯುನೈಟೆಡ್ ಕಿಂಗ್ಡಮ್ ಮತ್ತು ಸಿಂಗಾಪುರದೊಂದಿಗೆ ಭಾರತವು ಜ್ಞಾನ ಮತ್ತು ಉತ್ತಮ ಪದ್ಧತಿಗಳನ್ನು ಹಂಚಿಕೊಳ್ಳಲಿದೆ. ಆರೋಗ್ಯ ಕ್ಷೇತ್ರದಲ್ಲಿ ಸುರಕ್ಷಿತ ಮತ್ತು ನೈತಿಕ AI ಪರಿಕರಗಳ ಏಕೀಕರಣವನ್ನು ಉತ್ತೇಜಿಸುವ ಗುರಿ ಹೊಂದಿದೆ.
- IIT ಮದ್ರಾಸ್ ಸತತ ಏಳನೇ ವರ್ಷವೂ ಅತ್ಯುತ್ತಮ ಶಿಕ್ಷಣ ಸಂಸ್ಥೆ: ಕೇಂದ್ರ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ (NIRF) 2025ರ ಪ್ರಕಾರ, IIT ಮದ್ರಾಸ್ ಒಟ್ಟಾರೆ ವಿಭಾಗದಲ್ಲಿ ಸತತ ಏಳನೇ ವರ್ಷವೂ ಅಗ್ರಸ್ಥಾನದಲ್ಲಿದೆ. ಆದರೆ, ಸಂಶೋಧನಾ ವಿಭಾಗದಲ್ಲಿ ಬೆಂಗಳೂರಿನ IISc ಮೊದಲ ಸ್ಥಾನದಲ್ಲಿದ್ದರೆ, IIT ಮದ್ರಾಸ್ ಎರಡನೇ ಸ್ಥಾನದಲ್ಲಿದೆ. IISc ಸತತ ಹತ್ತನೇ ವರ್ಷವೂ ದೇಶದ ಅತ್ಯುತ್ತಮ ವಿಶ್ವವಿದ್ಯಾಲಯವೆಂದು ಗುರುತಿಸಲ್ಪಟ್ಟಿದೆ. ಇತರ ಪ್ರಮುಖ ಶ್ರೇಯಾಂಕಗಳಲ್ಲಿ, NLSIU ಬೆಂಗಳೂರು ಅತ್ಯುತ್ತಮ ಕಾನೂನು ಕಾಲೇಜು ಎಂದು, IIM ಬೆಂಗಳೂರು ಎರಡನೇ ಅತ್ಯುತ್ತಮ ನಿರ್ವಹಣಾ ಸಂಸ್ಥೆ ಎಂದು ಸ್ಥಾನ ಪಡೆದಿವೆ.
- ಟಿಡಿಕೆ ಲಿಥಿಯಂ-ಐಯಾನ್ ಬ್ಯಾಟರಿ ಘಟಕ:ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಅವರು ಹರಿಯಾಣದ ಸೋಹ್ವಾದಲ್ಲಿ ಜಪಾನ್ನ ಟಿಡಿಕೆ ಕಾರ್ಪೊರೇಷನ್ ನ ₹3,000 ಕೋಟಿ ಹೂಡಿಕೆಯ ಲಿಥಿಯಂ-ಐಯಾನ್ ಬ್ಯಾಟರಿ ಘಟಕವನ್ನು ಉದ್ಘಾಟಿಸಿದರು. ಈ ಘಟಕವು ವರ್ಷಕ್ಕೆ ಸುಮಾರು 20 ಕೋಟಿ ಬ್ಯಾಟರಿ ಪ್ಯಾಕ್ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ, ಭಾರತದ ಬೇಡಿಕೆಯ 40% ರಷ್ಟನ್ನು ಪೂರೈಸಲಿದೆ. ಈ ಯೋಜನೆಯು 5,000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿ, ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ ಯೋಜನೆಗಳಿಗೆ ಬಲ ತುಂಬಲಿದೆ.
ಇತರೆ ಪ್ರಚಲಿತ ಘಟನೆಗಳು:
- ರಾಷ್ಟ್ರಪತಿ ದ್ರೌಪದಿ ಮುರ್ಮು: ಶಿಕ್ಷಣ ಮತ್ತು ಶಿಕ್ಷಕರ ಪಾತ್ರ – ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಿಕ್ಷಣದಲ್ಲಿ ತಂತ್ರಜ್ಞಾನಕ್ಕಿಂತಲೂ ಶಿಕ್ಷಕರ ಪಾತ್ರವೇ ಹೆಚ್ಚು ಮುಖ್ಯ ಎಂದು ಹೇಳಿದರು. ಸ್ಮಾರ್ಟ್ ತರಗತಿಗಳು ಮತ್ತು ಬ್ಲಾಕ್ಬೋರ್ಡ್ಗಳು ಉಪಯುಕ್ತವಾಗಿದ್ದರೂ, ಸಂವೇದನಾಶೀಲ ಮತ್ತು ಸಮರ್ಪಣಾ ಮನೋಭಾವದ ಶಿಕ್ಷಕರು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಅತ್ಯಂತ ಅವಶ್ಯಕ. ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಉದ್ದೇಶಗಳನ್ನು ಸಾಧಿಸಲು ಶಿಕ್ಷಕರ ಗುಣಮಟ್ಟ ಮತ್ತು ತರಬೇತಿಯ ಮಹತ್ವವನ್ನು ಎತ್ತಿ ತೋರಿಸುತ್ತದೆ.
- 11ನೇ ಏಷ್ಯನ್ ಅಕ್ವಾಟಿಕ್ಸ್ ಚಾಂಪಿಯನ್ಶಿಪ್: ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯ ಅವರು ಅಹಮದಾಬಾದ್ನಲ್ಲಿ ನಡೆಯಲಿರುವ 11ನೇ ಏಷ್ಯನ್ ಅಕ್ವಾಟಿಕ್ಸ್ ಚಾಂಪಿಯನ್ಶಿಪ್ಗಾಗಿ ‘ಜಲವೀರ’ ಮಸ್ಕಾಟ್ ಮತ್ತು ಲೋಗೋವನ್ನು ಅನಾವರಣಗೊಳಿಸಿದರು. 2026ರ ಏಷ್ಯನ್ ಕ್ರೀಡಾಕೂಟಕ್ಕೆ ಅರ್ಹತಾ ಪಂದ್ಯವಾಗಿ ಕಾರ್ಯನಿರ್ವಹಿಸಲಿದೆ. ವೀರ ಸಾವರ್ಕರ್ ಕ್ರೀಡಾ ಸಂಕೀರ್ಣದಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ 30ಕ್ಕೂ ಹೆಚ್ಚು ರಾಷ್ಟ್ರಗಳಿಂದ 1000ಕ್ಕೂ ಹೆಚ್ಚು ಆಟಗಾರರು ಭಾಗವಹಿಸುವ ನಿರೀಕ್ಷೆಯಿದ್ದು, ಭಾರತೀಯ ಅಕ್ವಾಟಿಕ್ಸ್ ಇತಿಹಾಸದಲ್ಲಿ ಒಂದು ಪ್ರಮುಖ ಮೈಲುಗಲ್ಲಾಗಿದೆ.
- ಇಂಧನ ದಕ್ಷತಾ ಸೂಚ್ಯಂಕ (SEEI): ಕೇಂದ್ರ ವಿದ್ಯುತ್ ಸಚಿವಾಲಯವು ಪ್ರಕಟಿಸಿದ 2023-24ರ ಇಂಧನ ದಕ್ಷತಾ ಸೂಚ್ಯಂಕದಲ್ಲಿ (SEEI) ಮಹಾರಾಷ್ಟ್ರವು ಮೊದಲ ಸ್ಥಾನ ಗಳಿಸಿದೆ. ಈ ಸೂಚ್ಯಂಕವನ್ನು ಇಂಧನ ದಕ್ಷತಾ ಬ್ಯೂರೋ (BEE) ಮತ್ತು ಇಂಧನ ದಕ್ಷತೆಯ ಆರ್ಥಿಕ ಒಕ್ಕೂಟ (AEEE) ಅಭಿವೃದ್ಧಿಪಡಿಸಿವೆ. 7 ಬೇಡಿಕೆ ವಲಯಗಳಲ್ಲಿ ರಾಜ್ಯಗಳ ಕಾರ್ಯಕ್ಷಮತೆಯನ್ನು 66 ಮಾನದಂಡಗಳ ಮೂಲಕ ಅಳೆಯುತ್ತದೆ. ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ ಮತ್ತು ತಮಿಳುನಾಡು ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿವೆ.
- ಭಾರತದ ಮೊದಲ ಮೊಬೈಲ್ ಟೆಂಪರ್ಡ್ ಗ್ಲಾಸ್ ಕಾರ್ಖಾನೆ, ನೋಯ್ಡಾದಲ್ಲಿ ಉದ್ಘಾಟನೆ : ಭಾರತದ ಮೊದಲ ಮೊಬೈಲ್ ಟೆಂಪರ್ಡ್ ಗ್ಲಾಸ್ ಕಾರ್ಖಾನೆಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ನೋಯ್ಡಾದಲ್ಲಿ ಉದ್ಘಾಟಿಸಿದರು. ಆಪ್ಟಿಮಸ್ ಇನ್ಮಾಕಾಮ್ ಕಂಪನಿಯ ಒಡೆತನದಲ್ಲಿರುವ ಈ ಸ್ಥಾವರವು ₹70 ಕೋಟಿ ಹೂಡಿಕೆಯೊಂದಿಗೆ ಪ್ರಾರಂಭಗೊಂಡಿದೆ. ಇದು ಮೊಬೈಲ್ ಫೋನ್ಗಳಿಗಾಗಿ ಟೆಂಪರ್ಡ್ ಗ್ಲಾಸ್ ತಯಾರಿಸುತ್ತದೆ ಮತ್ತು ಆರಂಭದಲ್ಲಿ ವರ್ಷಕ್ಕೆ 5 ಕೋಟಿ ಯೂನಿಟ್ಗಳ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಈ ಯೋಜನೆಯು 600 ನೇರ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಮತ್ತು ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಭವಿಷ್ಯದಲ್ಲಿ ಭಾರತವು ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಜಾಗತಿಕ ಸ್ಥಾನ ಪಡೆಯಲು ಇದು ಮಹತ್ವದ ಹೆಜ್ಜೆಯಾಗಿದೆ.
- ರಾಷ್ಟ್ರೀಯ ಪೋಷಕಾಂಶ ಸಪ್ತಾಹ 2025: ಆರೋಗ್ಯ ಮತ್ತು ಪೌಷ್ಟಿಕತೆಯ ಅರಿವು: ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 1 ರಿಂದ 7 ರವರೆಗೆ ರಾಷ್ಟ್ರೀಯ ಪೋಷಕಾಂಶ ಸಪ್ತಾಹವನ್ನು ಆಚರಿಸಲಾಗುತ್ತದೆ. ಈ ವರ್ಷದ ಧೈಯವಾಕ್ಯ ‘ಉತ್ತಮ ಜೀವನಕ್ಕಾಗಿ ಪೌಷ್ಟಿಕಯುಕ್ತ ಆಹಾರ’. ಉತ್ತಮ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಮತ್ತು ಪೌಷ್ಟಿಕ ಆಹಾರದ ಮಹತ್ವವನ್ನು ತಿಳಿಸಲು ಈ ಸಪ್ತಾಹವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಅಪೌಷ್ಟಿಕತೆ ಒಂದು ಪ್ರಮುಖ ಸಮಸ್ಯೆಯಾಗಿದ್ದು, ವಿಶೇಷವಾಗಿ ಮಕ್ಕಳು ಇದರಿಂದ ಬಾಧಿತರಾಗಿದ್ದಾರೆ. ವಿಟಮಿನ್ ಎ, ಕಬ್ಬಿಣ ಮತ್ತು ಸತುವಿನಂತಹ ಪೋಷಕಾಂಶಗಳ ಕೊರತೆಯೇ ಇದಕ್ಕೆ ಮುಖ್ಯ ಕಾರಣ. 1982ರಿಂದ ಕೇಂದ್ರ ಸರ್ಕಾರ ಇದನ್ನು ಆಚರಿಸುತ್ತಿದ್ದು, ಆರೋಗ್ಯಕರ ಮತ್ತು ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಕ್ರೀಡೆ ಸುದ್ದಿಗಳು:
- 2026ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ಗೆ ನವದೆಹಲಿ ಅತಿಥೇಯ: ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟ (BWF) ಘೋಷಣೆಯಂತೆ, 2026ರ ಆಗಸ್ಟ್ನಲ್ಲಿ ನವದೆಹಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ಗೆ ಅತಿಥೇಯವಾಗಲಿದೆ. 2009 ಹೈದರಾಬಾದ್ನಲ್ಲಿ ಆಯೋಜನೆಯಾದ ಬಳಿಕ 17 ವರ್ಷಗಳ ನಂತರ ಭಾರತ ಮತ್ತೊಮ್ಮೆ ಈ ಪ್ರತಿಷ್ಠಿತ ಟೂರ್ನಿಯನ್ನು ಆತಿಥ್ಯ ವಹಿಸುತ್ತಿದೆ. 2025 ಪ್ಯಾರಿಸ್ ಸಮಾರೋಪ ಸಮಾರಂಭದಲ್ಲಿ ಸಾಂಕೇತಿಕ ಹಸ್ತಾಂತರ ನಡೆಯಿತು. ದಿಲ್ಲಿಯ ಆತಿಥ್ಯದಿಂದ 8 ವರ್ಷಗಳ ಬಳಿಕ ಈ ಟೂರ್ನಿ ಏಷ್ಯಾಕ್ಕೆ ಮರಳುತ್ತಿದೆ. ಭಾರತವು 2011ರಿಂದ ನಿರಂತರವಾಗಿ ಪದಕಗಳನ್ನು ಗೆಲ್ಲುತ್ತಿದ್ದು, ಪಿ.ವಿ. ಸಿಂಧು (ಚಿನ್ನ–2019), ಸೈನಾ ನೆಹ್ವಾಲ್ (ಬೆಳ್ಳಿ–2015, ಕಂಚು–2017) ಸೇರಿದಂತೆ ಪುರುಷ ಆಟಗಾರರು ಸಹ ಸಾಧನೆ ಮಾಡಿದ್ದಾರೆ.
- ವಿಶ್ವ ಅಥ್ಲೆಟಿಕ್ ಚಾಂಪಿಯನ್ಷಿಪ್ – 19 ಮಂದಿ ಭಾರತೀಯ ತಂಡಕ್ಕೆ ನೀರಜ್ ಸಾರಥ್ಯ: ಟೋಕಿಯೊದಲ್ಲಿ ಸೆಪ್ಟೆಂಬರ್ 13 ರಿಂದ 21 ರವರೆಗೆ ನಡೆಯಲಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್ಷಿಪ್ಗಾಗಿ ನೀರಜ್ ಚೋಪ್ರಾ ಸಾರಥ್ಯದಲ್ಲಿ 19 ಮಂದಿಯ ಭಾರತೀಯ ತಂಡವನ್ನು ಪ್ರಕಟಿಸಲಾಗಿದೆ. ಈ ಚಾಂಪಿಯನ್ಷಿಪ್ನಲ್ಲಿ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ನಾಲ್ವರು ಪುರುಷರು ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾಗವಹಿಸಲಿದ್ದಾರೆ. ತಂಡದಲ್ಲಿ ಮುರಳಿ ಶ್ರೀಶಂಕರ್ (ಲಾಂಗ್ ಜಂಪ್), ಪಾರುಲ್ ಚೌಧರಿ ಮತ್ತು ಅನ್ನು ರಾಣಿ (ಜಾವೆಲಿನ್) ಸೇರಿದ್ದಾರೆ. ಗಾಯದ ಕಾರಣದಿಂದ ಮೂವರು ಅರ್ಹತಾ ಪಡೆದಿದ್ದ ಕ್ರೀಡಾಪಟುಗಳು ಹೊರಗುಳಿದಿದ್ದಾರೆ. ಈ ಬಾರಿಯ ತಂಡ ಕಳೆದ ಬಾರಿಯ ಬುಡಾಪೆಸ್ಟ್ನ 28 ಸದಸ್ಯರ ತಂಡಕ್ಕಿಂತ ಚಿಕ್ಕದಾಗಿದೆ.
