Published on: October 7, 2021

ಕೆಎಎಸ್ ಪರೀಕ್ಷೆ ಸಿದ್ಧತೆ ಏನು? ಹೇಗೆ?

ಕೆಎಎಸ್ ಪರೀಕ್ಷೆ ಸಿದ್ಧತೆ ಏನು? ಹೇಗೆ?

ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ಕಾರಿ ನೌಕರಿಗಾಗಿ ಹಾತೊರೆಯುತ್ತಿರುವ ಅದೆಷ್ಟೋ ಯುವ ಮನಸ್ಸುಗಳಿವೆ. ಮನೆ. ಗ್ರಂಥಾಲಯ, ಸ್ಟಡಿ ಸೆಂಟರ್‌ಗಳು, ಕಾಲೇಜು ಶಿಕ್ಷಣ ಒದುತ್ತಲೇ ಅದೆಷ್ಟೋ ಅಭ್ಯರ್ಥಿಗಳು ಕೆಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರಿಯಲ್ಲಿ ಕೆಎಎಸ್ ಅಧಿಕಾರಿ ಹುದ್ದೆಯೂ ಉನ್ನತ ದರ್ಜೆಯ   ಹುದ್ದೆ ಆಗಿದೆ. ಈ ಹುದ್ದೆ ಪಡೆಯಬೇಕಾದರೆ ಕರ್ನಾಟಕ ರಾಜ್ಯ ಲೋಕಸೇವಾ ಆಯೋಗವು ನಡೆಸುವ ಕೆಎಎಸ್‌ ಪರೀಕ್ಷೆ ಬರೆಯಬೇಕು. ಹಲವಾರು ಉನ್ನತ ಸರ್ಕಾರಿ ಹುದ್ದೆಗಳಿಗೆ  ಏಕ-ರೂಪದ ಪರೀಕ್ಷೆ ಇದಾಗಿದೆ.

ಕೆಎಎಸ್ ಹಲವು ಉನ್ನತ ಹುದ್ದೆಗೆ ಏಕರೂಪದ ಪರೀಕ್ಷೆ

  • ಕರ್ನಾಟಕ ಆಡಳಿತ ಸೇವೆ(ಕಿರಿಯ ವಿಭಾಗ) ಸಹಾಯಕ ಆಯುಕ್ತರು, ಕರ್ನಾಟಕ ಪೊಲೀಸ್ ಸೇವೆ, ಆರಕ್ಷಕ ಉಪಾಧೀಕ್ಷಕರು (DYSP), ಕರ್ನಾಟಕ ಖಜಾನೆ ಸೇವೆ, ಕರ್ನಾಟಕ ಹಿಂದುಳಿದ ವರ್ಗಗಳ ಸೇವೆ, ಹೀಗೆ ಹಲವು ‘ಎ’ ಗ್ರೂಪ್ ಹುದ್ದೆಗಳು, ಹಾಗೂ ತಹಶೀಲ್ದಾರ್, ಕಂದಾಯ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ (CTO) ‘ಬಿ’ ಗ್ರೂಪ್‌ ಹುದ್ದೆಗಳಿಗೂ ಕೆಎಎಸ್‌ ಏಕ-ರೂಪದ ಪರೀಕ್ಷೆ ಆಗಿರುತ್ತದೆ.

ಕೆಎಎಸ್ ಪರೀಕ್ಷೆಗೆ ಯಾರು ಅರ್ಜಿ ಸಲ್ಲಿಸಬಹುದು?

  • ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಅಂಗೀಕೃತಗೊಂಡ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಿಂದ ಯಾವುದೇ ಪದವಿ ಪಡೆದವರು ಅಥವಾ ಪದವಿಯ ಅಂತಿಮ ಸೆಮಿಸ್ಟರ್ ಪರೀಕ್ಷೆ ಬರೆದು ಫಲಿತಾಂಶ ನೀರಿಕ್ಷಿಸುತ್ತಿರುವವರು ಪರೀಕ್ಷೆ ತೆಗೆದುಕೊಳ್ಳಬಹುದು.

ಯಾರು ಎಷ್ಟು ಬಾರಿ ಪರೀಕ್ಷೆ ತೆಗೆದುಕೊಳ್ಳಬಹುದು?

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 5 ಬಾರಿ ಅವಕಾಶಗಳು, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 7 ಬಾರಿ ಅವಕಾಶಗಳು ಹಾಗೂ ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆ ಅನಿಯಮಿತ ಅವಕಾಶಗಳು ಇರುತ್ತವೆ.

ವಯೋಮಿತಿ ಅರ್ಹತೆಗಳೇನು?

  • ಕನಿಷ್ಠ 21 ವರ್ಷ ಪೂರೈಸಿದ ಯಾರು ಬೇಕಾದರೂ ಕೆಎಎಸ್ ಪರೀಕ್ಷೆ ತೆಗೆದುಕೊಳ್ಳಬಹುದು.
  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ, ಎಸ್‌ಸಿ / ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಿಕಲಚೇತನರು ಮತ್ತು ವಿಧವೆಯರಿಗೆ ವಯೋಮಿತಿ 10 ವರ್ಷ ಸಡಿಲಿಕೆ ಇರುತ್ತದೆ.

ಕೆಎಎಸ್ ಪರೀಕ್ಷಾ ಹಂತಗಳು / ಮಾದರಿ

ಕೆಎಎಸ್ ಪರೀಕ್ಷೆಯಲ್ಲಿ ಪ್ರಮುಖವಾಗಿ ಮೂರು ಪರೀಕ್ಷಾ ಹಂತಗಳಿರುತ್ತದೆ.

  1. ಪೂರ್ವಭಾವಿ ಪರೀಕ್ಷೆ
  2. ಮುಖ್ಯ ಪರೀಕ್ಷೆ
  3. ವ್ಯಕ್ತಿತ್ವ ಪರೀಕ್ಷೆ

ಪೂರ್ವಭಾವಿ ಪರೀಕ್ಷೆ

  • ಪೂರ್ವಭಾವಿ ಪರೀಕ್ಷೆ 2 ಕಡ್ಡಾಯ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪತ್ರಿಕೆ -1: 200 ಅಂಕಗಳ ಸಾಮಾನ್ಯ ಅಧ್ಯಯನ ಪತ್ರಿಕೆ. ಪತ್ರಿಕೆ -2: ಸಾಮಾನ್ಯ ಅಧ್ಯಯನ ಪತ್ರಿಕೆ 200 ಅಂಕಗಳನ್ನು ಒಳಗೊಂಡಿರುತ್ತದೆ. 100 ಪ್ರಶ್ನೆಗಳು ಇರಲಿದ್ದು, ಪ್ರತಿ ಪ್ರಶ್ನೆಗೆ 2 ಅಂಕಗಳನ್ನು ನೀಡಲಾಗುತ್ತದೆ. ಪ್ರತಿಯೊಂದು ಪತ್ರಿಕೆಗೂ 2 ಗಂಟೆಗಳ ಕಾಲಾವಕಾಶ ಇರುತ್ತದೆ. ಸಾಮಾನ್ಯವಾಗಿ ಎರಡೂ ಪರೀಕ್ಷೆಗಳು ಒಂದೇ ದಿನ ನಡೆಯುತ್ತವೆ. ಪೂರ್ವಭಾವಿ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ. ಈ ಪರೀಕ್ಷೆಯು ವಸ್ತು ನಿಷ್ಠ ಮಾದರಿಯದ್ದಾಗಿರುತ್ತದೆ

ಪಠ್ಯಕ್ರಮ ಏನು?

  • ಪೂರ್ವಭಾವಿ ಪರೀಕ್ಷೆಯ ಪತ್ರಿಕೆ-1 ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಾಮುಖ್ಯತೆಯುಳ್ಳ ಪ್ರಚಲಿತ ವಿದ್ಯಮಾನಗಳು, ಭಾರತದ ಇತಿಹಾಸ, ರಾಜ್ಯಶಾಸ್ತ್ರ, ಭೂಗೋಳ, ಆರ್ಥಿಕತೆ, ಭಾರತದ, ರಾಷ್ಟ್ರೀಯ ಚಳುವಳಿ ಒಳಗೊಂಡಿರುತ್ತದೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರಶ್ನೆ ಪತ್ರಿಕೆ ಇರುತ್ತದೆ.
  • ಪತ್ರಿಕೆ-2, ರಾಜ್ಯದ ಪ್ರಚಲಿತ ವಿದ್ಯಮಾನ, ಸಾಮಾನ್ಯ ವಿಜ್ಞಾನ, ಮತ್ತು ತಂತ್ರಜ್ಞಾನ, ಮಾನಸಿಕ ಸಾಮರ್ಥ್ಯ, ಪರಿಸರ ಅಧ್ಯಯನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

ಕೆಎಎಸ್ ಮುಖ್ಯ ಪರೀಕ್ಷೆ

  • ಗೆಜೆಟೆಡ್ ಪ್ರೊಬೇಷನರಿ ಗ್ರೂಪ್‌ ಎ ಮತ್ತು ಗ್ರೂಪ್‌ ಬಿ ಹುದ್ದೆಗಳಿಗೆ ನಡೆಸಲಾಗುತ್ತಿದ್ದ ಮುಖ್ಯ ಪರೀಕ್ಷೆಯ ಐಚ್ಛಿಕ ವಿಷಯಗಳ ಪತ್ರಿಕೆ 6 ಮತ್ತು ಪತ್ರಿಕೆ 7 ಅನ್ನು ಕೈಬಿಡಲಾಗಿದೆ. ಒಟ್ಟು 1750 ಅಂಕಗಳಿಗೆ ನಡೆಸಲಾಗುತ್ತಿದ್ದ ಮುಖ್ಯ ಪರೀಕ್ಷೆಯನ್ನು ಇನ್ನುಮುಂದೆ 1250 ಅಂಕಗಳಿಗೆ ನಡೆಸಲಾಗುತ್ತದೆ. ಹಾಗೂ 200 ಅಂಕಗಳಿಗೆ ನಡೆಸಲಾಗುತ್ತಿದ್ದ ವ್ಯಕ್ತಿತ್ವ ಪರೀಕ್ಷೆಯನ್ನು (ಸಂದರ್ಶನ) 50 ಅಂಕಗಳಿಗೆ ಇಳಿಸಲಾಗಿದೆ.
  • ಮುಖ್ಯ ಪರೀಕ್ಷೆಯಲ್ಲಿ ಕಡ್ಡಾಯ ಕನ್ನಡ ಮತ್ತು ಕಡ್ಡಾಯ ಇಂಗ್ಲಿಷ್ ಭಾಷಾ ಪರೀಕ್ಷೆಯನ್ನು ಒಳಗೊಂಡಿದ್ದು, ಪ್ರತಿ ಪತ್ರಿಕೆಯು 150 ಅಂಕಗಳನ್ನು ಒಳಗೊಂಡಿರುತ್ತದೆ. ಈ ಪತ್ರಿಕೆಯಲ್ಲಿ ಶೇಕಡ.35 ಅಂಕಗಳನ್ನು ಗಳಿಸಿದರೆ ಸಾಕು.
  • ಈ ಎರಡೂ ಪತ್ರಿಕೆಗಳಲ್ಲಿ ಗಳಿಸಿದ ಅಂಕಗಳನ್ನು ಅಭ್ಯರ್ಥಿಗಳ ಆಯ್ಕೆಯ ಅರ್ಹತೆಯನ್ನು ನಿಗದಿಪಡಿಸುವಲ್ಲಿ ಪರಿಗಣಿಸಲಾಗುವುದಿಲ್ಲ.
  • ಈ ಎರಡೂ ಪತ್ರಿಕೆಗಳಲ್ಲಿ ನಿಗದಿತ ಅಂಕಗಳನ್ನು ಗಳಿಸದ ಅಭ್ಯರ್ಥಿಗಳು ಇತರೆ ಪತ್ರಿಕೆಗಳಲ್ಲಿ ಎಷ್ಟೇ ಹೆಚ್ಚು ಅಂಕಗಳನ್ನು ಗಳಿಸಿದ್ದರೂ ವ್ಯಕ್ತಿತ್ವ ಪರೀಕ್ಷೆಗೆ ಮತ್ತು ಆಯ್ಕೆಗೆ ಅರ್ಹರಾಗುವುದಿಲ್ಲ ಹಾಗೂ ಇಂತಹ ಅಭ್ಯರ್ಥಿಗಳ ಇತರೆ ವಿಷಯಗಳಲ್ಲಿ ಪಡೆದ ಅಂಕಗಳನ್ನು ಪ್ರಕಟಿಸಲಾಗುವುದಿಲ್ಲ.
  • ಮುಖ್ಯ ಪರೀಕ್ಷೆಯ ಕಡ್ಡಾಯ ಕನ್ನಡ ಪತ್ರಿಕೆ ಮತ್ತು ಕಡ್ಡಾಯ ಇಂಗ್ಲಿಷ್ ಪತ್ರಿಕೆ ಎಸ್ ಎಸ್ ಎಲ್ ಸಿ ಯ ಪ್ರಥಮ ಭಾಷೆಯ ಮಟ್ಟದ್ದಾಗಿರುತ್ತದೆ.
  • ಮುಖ್ಯ ಪತ್ರಿಕೆಯ ಇನ್ನಿತರ ವಿಷಯಗಳ ಪತ್ರಿಕೆಗಳು ಪದವಿ ಮಟ್ಟದ್ದಾಗಿರುತ್ತದೆ.

ಕೆಎಎಸ್ ಸಂದರ್ಶನ ಹೇಗಿರುತ್ತದೆ?

  • ಇದನ್ನು ಸಂದರ್ಶನ ಎನ್ನುವುದಕ್ಕಿಂತ ವ್ಯಕ್ತಿತ್ವ ಪರೀಕ್ಷೆ ಎಂದು ಕರೆಯಬೇಕು. ಈ ಸಂದರ್ಭದಲ್ಲಿ ಅಭ್ಯರ್ಥಿಯ ವ್ಯಕ್ತಿತ್ವವು ಸಂದರ್ಶಕರ ಮುಂದೆ ಅನಾವರಣಗೊಳ್ಳುತ್ತದೆ. ಇದು ತುಂಬಾ ಮುಕ್ತವಾದ ವಾತಾವರಣದಲ್ಲಿ ನಡೆಯುತ್ತದೆ. ಒಂದು ವಿಷಯದ ಕುರಿತಾಗಿ ಅಭ್ಯರ್ಥಿಯು ಎಷ್ಟು ಸಕಾರಾತ್ಮಕವಾಗಿ ಚಿಂತನೆ ಮಾಡುತ್ತಾನೆ, ಕಠಿಣ ಸವಾಲುಗಳಿಗೆ ಎಂತಹ ಪರಿಹಾರಗಳನ್ನು ಕಂಡುಕೊಳ್ಳುತ್ತಾನೆ, ಅವನು ಎಷ್ಟೊಂದು ಆತ್ಮವಿಶ್ವಾಸ ಹೊಂದಿದ್ದಾನೆ, ಅವನು ತನ್ನ ಕೌಟುಂಬಿಕ, ಶೈಕ್ಷಣಿಕ, ಪ್ರಾದೇಶಿಕ ಹಿನ್ನೆಲೆ ಮತ್ತು ಪರಿಸರಗಳ ಬಗೆಗೆ ಎಷ್ಟೊಂದು ಪ್ರಜ್ಞೆ ಹೊಂದಿದ್ದಾನೆ ಎಂಬುದನ್ನು ಒರೆಗೆ ಹಚ್ಚಲಾಗುತ್ತದೆ. ಯಾವುದೇ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೆ ಅದನ್ನು ಎಷ್ಟು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾನೆ ಎಂಬುದೂ ಪರೀಕ್ಷೆಗೊಳಪಡುತ್ತದೆ. ಹಾಗೆಯೇ ಸಮಾಜದ ಕುರಿತು ಅವನ ಧೋರಣೆ ಎಂಥದ್ದಿದೆ ಎಂಬುದೂ ಗೊತ್ತಾಗುತ್ತದೆ. ಯಾವುದೇ ಕಾರಣಕ್ಕೆ ಸಂದರ್ಶಕರಿಗೆ ಸುಳ್ಳು ಹೇಳಿ ಬಚಾವಾಗಲು ಸಾಧ್ಯವಿಲ್ಲ ಎಂಬುದನ್ನು ಅಭ್ಯರ್ಥಿಗಳು ಅರಿತಿರಬೇಕು. ತಮ್ಮ ಹವ್ಯಾಸ, ಆಸಕ್ತಿಗಳ ಕುರಿತು ಸಾಕಷ್ಟು ತಿಳಿವಳಿಕೆ ಹೊಂದಿರಬೇಕು.

ಕೆ.ಎ.ಎಸ್. ಪರೀಕ್ಷೆಗೆ ಅಗತ್ಯವಾದ ಅತ್ಯುಪಯುಕ್ತ ಪುಸ್ತಕಗಳ ಪಟ್ಟಿ

  • ಸಮಗ್ರ ಭಾರತದ ಇತಿಹಾಸ – ಡಾ|| ಕೆ.ಸದಾಶಿವ
  • ಸ್ವತಂತ್ರ ಭಾರತ -1942 ರಿಂದ 2010 – ಪಾಲಾಕ್ಷ
  • ಸಮಗ್ರ ಕರ್ನಾಟಕ – ಪಾಲಾಕ್ಷ
  • ಕರ್ನಾಟಕ ಕೈಗನ್ನಡಿ – ಸೂರ್ಯನಾಥ ಕಾಮತ್
  • ಭಾರತ ಸಂವಿಧಾನ- ಕೆ.ಎಂ .ಸುರೇಶ ಅಥವಾ  ಪಿ .ಎಸ್. ಗಂಗಾಧರ್
  • ಭಾರತದ ಪ್ರಾದೇಶಿಕ ಮತ್ತು ಆರ್ಥಿಕ ಭೂಗೋಳಶಾಸ್ತ್ರ – ರಂಗನಾಥ
  • ಕರ್ನಾಟಕ ಭೂಗೋಳ- ರಂಗನಾಥ
  • ಭಾರತ ಆರ್ಥಿಕ ವ್ಯವಸ್ಥೆ – ಎಚ್ .ಆರ್.ಕೆ
  • ವಿಜ್ಞಾನ ತಂತ್ರಜ್ಞಾನ – ಜಿ. ಹರಿಪ್ರಸಾದ್
  • ಪ್ರಚಲಿತ ವಿದ್ಯಮಾನಗಳು – ನಮ್ಮ ಕೆ.ಪಿ.ಎಸ್.ಸಿ ಮಾಸಿಕ ಪತ್ರಿಕೆ ,ಸರ್ಕಾರೀ ಜಾಲತಾಣಗಳು ,ಕರ್ನಾಟಕ ಕೈಪಿಡಿ ಇತ್ಯಾದಿ

ಉತ್ತಮ ಸಿದ್ಧತೆಗಾಗಿ ಈ ಎಲ್ಲ ಅಂಶಗಳು ನೆನಪಿರಲಿ

  • ತಾಳ್ಮೆ ಮತ್ತು ಸತತ ಪ್ರಯತ್ನ ಅಗತ್ಯ.
  • ಸಾಮಾಜಿಕ ಜಾಲತಾಣದ ಬಳಕೆಯಲ್ಲಿ ಮಿತಿ ಇರಲಿ.
  • ಸಿದ್ಧತೆ ಮತ್ತು ಸಾಮರ್ಥ್ಯದ ಮೇಲೆ ನಂಬಿಕೆ ಇರಲಿ.
  • ಅಧ್ಯಯನ ಸಂದರ್ಭದಲ್ಲಿ ಉತ್ತಮ ವಾತಾವರಣ, ಓದುವವರೊಂದಿಗಿನ ಒಡನಾಟ ಎರಡು ಅಗತ್ಯ.
  • ಅನಗತ್ಯ ಮೊಬೈಲ್‌ ಬಳಕೆಯಿಂದ ದೂರವಿರಿ.