Published on: October 19, 2022

ಒಂದು ದೇಶ ಒಂದು ರಸಗೊಬ್ಬರ (ಒಎನ್‌ಒಎಫ್‌)ಯೋಜನೆ

ಒಂದು ದೇಶ ಒಂದು ರಸಗೊಬ್ಬರ (ಒಎನ್‌ಒಎಫ್‌)ಯೋಜನೆ

ಸುದ್ದಿಯಲ್ಲಿ ಏಕಿದೆ?

ಪ್ರಧಾನಿ ನರೇಂದ್ರ ಮೋದಿಯವರು ಒಂದು ದೇಶ ಒಂದು ಗೊಬ್ಬರ ಹೆಸರಿನಲ್ಲಿ ರಸಗೊಬ್ಬರವನ್ನ ಲೋಕಾರ್ಪಣೆ ಮಾಡಿದರು. ಮತ್ತು ಇದೆ ಸಮಯದಲ್ಲಿ ಪಿಎಂ ಕಿಸಾ ನ್ ಸಮ್ಮಾನ್ ಸಮ್ಮೇಳನಕ್ಕೆ ಚಾಲನೆ ನೀಡಿದರು. ಈ ಮೂಲಕ ದೇಶದ ಅನ್ನದಾತರಿಗೆ ಭಾರತ್‌ಬ್ರ್ಯಾಂಡ್‌ನಡಿ ಸಬ್ಸಿಡಿ ದರದ ಯೂರಿಯಾ ದೊರೆಯಲಿದೆ.

ಮುಖ್ಯಾಂಶಗಳು

  • ಈ ವೇಳೆ ಭಾರತ್ ಯೂರಿಯಾ , ಭಾರತ್ ಡಿಎಪಿ, ಭಾರತ್ ಎಂಓಪಿ, ಭಾರತ್ ಎನ್ಪಿಕೆ ರಸಗೊಬ್ಬರವನ್ನು ಲೋಕಾರ್ಪಣೆ ಮಾಡಿದರು .
  • ಈ ಬೆಳವಣಿಗೆ ಕೃಷಿ ಉತ್ಪನ್ನಗಳ ಉತ್ಪಾದನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪೂರಕವಾಗುತ್ತದೆ. ಜತೆಗೆ ಎಲ್ಲಾ ಕೃಷಿ ಬೆಳೆ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ. ಶೀಘ್ರದಲ್ಲಿ ಭಾರತ ಜಾಗತಿಕವಾಗಿ ಕೃಷಿ ಉತ್ಪನ್ನಗಳ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ.

ಉದ್ದೇಶ

  • ಭಾರತ್‌ ಬ್ರ್ಯಾಂಡ್‌ನಡಿ ಸಬ್ಸಿಡಿ ದರದಲ್ಲಿ ರಸಗೊಬ್ಬರ ಮಾರಾಟ ಮಾಡುವ ಕಡ್ಡಾಯ ನಿಯಮ ಜಾರಿ ಹಾಗೂ ಕಿಸಾನ್‌ ಸಮೃದ್ದಿ ಕೇಂದ್ರಗಳ ಸ್ಥಾಪನೆಯಿಂದ ರಸಗೊಬ್ಬರ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯಾಗಲಿದೆ.
  • ರೈತರಿಗೆ ಗುಣಮಟ್ಟದ ಸಬ್ಸಿಡಿಯುಕ್ತ ರಸಗೊಬ್ಬರಗಳು ದೊರೆಯಲು ಅನುಕೂಲವಾಗಲಿದೆ.

ಏನಿದು ಯೋಜನೆ?

  • ಒಂದು ಭಾರತ, ಒಂದು ರಸಗೊಬ್ಬರ ಯೋಜನೆಯಡಿ ಎಲ್ಲಾ ರಸಗೊಬ್ಬರ ಉತ್ಪಾದಕ ಕಂಪನಿಗಳು ಇನ್ನು ಮುಂದೆ ಬ್ರ್ಯಾಂಡ್‌ನಡಿಯೇ ಮಾರಾಟ ಮಾಡುವುದು ಕಡ್ಡಾಯವಾಗಲಿದೆ.
  • ಡಿಎಪಿ (ಡಿ ಅಮೋನಿಯಂ ಫಾಸ್ಪೇಟ್‌), ಮ್ಯುರಿಯೇಟ್‌ ಆಫ್‌ ಪೊಟಾಶ್‌ (ಎಂಒಪಿ), ನೈಟ್ರೊಜನ್‌ ಫಾಸ್ಪರಸ್‌ ಪೊಟ್ಯಾಶಿಯಂ (ಎನ್‌ಪಿಕೆ), ಯುರಿಯಾ ರಸಗೊಬ್ಬರಗಳನ್ನು ಉತ್ಪಾದಿಸುವ ಕಂಪನಿಗಳ ಇನ್ನು ಬ್ಯಾಗ್‌ನ ಮೂರನೇ ಒಂದರಷ್ಟು ಜಾಗದಲ್ಲಿಕಂಪನಿಯ ಹೆಸರು, ಲೋಗೊ, ಉತ್ಪನ್ನ ಕುರಿತ ಮಾಹಿತಿ ನಮೂದಿಸಬೇಕು. ಮೂರನೇ ಎರಡಷ್ಟು ಜಾಗದಲ್ಲಿಭಾರತ್‌ ಬ್ರ್ಯಾಂಡ್‌ ಹಾಗೂ ಪ್ರಧಾನಮಂತ್ರಿ ಭಾರತೀಯ ಜನ ಉರ್ವಾರಕ್‌ ಪರಿಯೋಜನಾದ ಲೋಗೊ ಮುದ್ರಿಸುವುದು ಕಡ್ಡಾಯವಾಗಲಿದೆ.

ರೈತರಿಗೇನು ಲಾಭ?

  • ಸಾಮಾನ್ಯವಾಗಿ ಅನೇಕ ರೀತಿಯ ಬ್ರ್ಯಾಂಡ್‌ನ ರಸಗೊಬ್ಬರಗಳು ಮಾರುಕಟ್ಟೆಯಲ್ಲಿ ಲಭ್ಯ ಇದ್ದ ಕಾರಣ ರೈತರು ಪೋಷಕಾಂಶಗಳ ವಿಚಾರದಲ್ಲಿ ಗೊಂದಲಕ್ಕೆ ಒಳಗಾಗುತ್ತಿದ್ದರು.
  • ಹೆಚ್ಚಿನ ಕಮಿಷನ್‌ ಆಸೆಯಿಂದ ಚಿಲ್ಲರೆ ಮಾರಾಟಗಾರರು ಒಂದೇ ಬ್ರ್ಯಾಂಡ್‌ನ ಉತ್ಪನ್ನವನ್ನೇ ಹೆಚ್ಚು ಉತ್ತೇಜಿಸುತ್ತಿದ್ದರಿಂದ ರೈತರಿಗೆ ಉತ್ತಮ ಪೋಷಕಾಂಶಗಳಿರುವ ರಸಗೊಬ್ಬರ ದೊರೆಯುತ್ತಿರಲಿಲ್ಲ. ಈಗ ಒಂದೇ ಬ್ರ್ಯಾಂಡ್‌ನಡಿ ಮಾರಾಟವಾಗಲಿರುವ ಕಾರಣ ರೈತರಿಗೆ ಅನುಕೂಲವಾಗಲಿದೆ.