Published on: June 28, 2023

ಕೆಂಪೇಗೌಡರ ಜಯಂತಿ

ಕೆಂಪೇಗೌಡರ ಜಯಂತಿ

ಸುದ್ದಿಯಲ್ಲಿ ಏಕಿದೆ? ಕರ್ನಾಟಕದಲ್ಲಿ ಜೂ.27ರಂದು ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ 514ನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ.

ಮುಖ್ಯಾಂಶಗಳು

  • 2017 ರಿಂದ, ಕರ್ನಾಟಕ ಸರ್ಕಾರವು ಕೆಂಪೇಗೌಡರ ಜನ್ಮ ವಾರ್ಷಿಕೋತ್ಸವ ಅಥವಾ ಕೆಂಪೇಗೌಡ ಜಯಂತಿಯನ್ನು ಆಚರಿಸುತ್ತಿದೆ.
  • 27 ಜೂನ್ 2020 ರಂದು, ಕೆಂಪೇಗೌಡರ 511 ನೇ ಜನ್ಮದಿನದ ಸ್ಮರಣಾರ್ಥವಾಗಿ, 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ಮತ್ತು ಪ್ರತಿಮೆಯ ಸುತ್ತಲೂ 23 ಎಕರೆ ಕೇಂದ್ರ ಉದ್ಯಾನವನದ ಕೆಲಸವು ಔಪಚಾರಿಕವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಉದ್ಘಾಟನೆಯೊಂದಿಗೆ ಪ್ರಾರಂಭವಾಯಿತು, ನವೆಂಬರ್ 2022 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಇದನ್ನು ಸಮೃದ್ಧಿಯ ಪ್ರತಿಮೆ ಎಂದು ಕರೆಯಲಾಗುತ್ತದೆ

ಕೆಂಪೇಗೌಡರು

  • ಜನನ : 1510ರಲ್ಲಿ, ಯಲಹಂಕದಲ್ಲಿ(ವಿಜಯನಗರ ಸಾಮ್ರಾಜ್ಯ)ಜನಿಸಿದರು
  • ತಂದೆ ತಾಯಿ : ಕೆಂಪನಂಜೇಗೌಡ, ಲಿಂಗಮ್ಮ
  • ಪಟ್ಟಾಭಿಷೇಕ: 1528ರಲ್ಲಿ
  • ನಿಧನ: 1569 ರಲ್ಲಿ

ಕೆಂಪೇಗೌಡರ ಕೊಡುಗೆ

  • ಕರ್ನಾಟಕಕ್ಕೆ ಅದರಲ್ಲೂ ಮುಖ್ಯವಾಗಿ ಬೆಂಗಳೂರಿಗೆ ಕೆಂಪೇಗೌಡರ ಕೊಡುಗೆ ಅಪಾರ. ಬೆಂಗಳೂರು ನಿರ್ಮಾತೃ ಎಂಬ ಹೆಗ್ಗಳಿಕೆಯು ಇವರಿಗಿದೆ. ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಊಳಿಗಮಾನ್ಯ ಆಡಳಿತಗಾರರಾಗಿದ್ದರು. ವಿಜಯನಗರ ಸಾಮ್ರಾಜ್ಯದ ವೈಭವ ನೋಡಿದ್ದರಿಂದ ಅಂತದ್ದೇ ಒಂದು ನಗರವನ್ನು ಸ್ಥಾಪಿಸಬೇಕು ಎಂಬ ಕನಸು ಕಂಡಿದ್ದ ಇವರು ಬೆಂಗಳೂರು ಎಂಬ ಪಟ್ಟಣವನ್ನು ಕಟ್ಟಿ ಬೆಳೆಸುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದರು. ಅದಕ್ಕಾಗಿ ಉತ್ತಮ ಸ್ಥಳ ಗುರುತಿಸಿ ಜನರಿಂದ ಹಣ ಸಂಗ್ರಹಿಸಿ ಬೆಂಗಳೂರು ಪಟ್ಟಣ ನಿರ್ಮಿಸಿದರು.
  • ಭವಿಷ್ಯದಲ್ಲಿ ಬೆಂಗಳೂರಿಗರು ಆರ್ಥಿಕವಾಗಿ ಕುಗ್ಗಬಾರದು ಜೊತೆಗೆ ಜನರ ಅಗತ್ಯತೆಗೆ ಅನುಗುಣವಾಗಿ ನಾಲ್ಕು ದಿಕ್ಕಿಗೆ ನಾಲ್ಕು ಗೋಪುರ, ಪ್ರತಿ ಬಡಾವಣೆಗೆ ಒಂದು ಕೆರೆ, ನೂರಾರು ಜನರ ವೃತ್ತಿಗೆ ಅನುಗುಣವಾಗಿ ಬೀದಿ ರೂಪಿಸಿದ್ದರು. ನಗರದಲ್ಲಿ ಕುಡಿಯುವ ಮತ್ತು ಕೃಷಿ ಅಗತ್ಯಗಳನ್ನು ಪೂರೈಸಲು ಸುಮಾರು 1,000 ಕೆರೆಗಳನ್ನು ಅಭಿವೃದ್ಧಿಪಡಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ.

ಹೆಗ್ಗುರುತುಗಳು:

  • ಬೆಂಗಳೂರಿಗೆ ನಾಡಪ್ರಭು ನೀಡಿರುವ ಕೊಡುಗೆಯನ್ನು ಸದಾ ಸ್ಮರಿಸಲು ರಾಜ್ಯ ಸರ್ಕಾರಗಳು ಪ್ರಮುಖ ಹೆಗ್ಗುರುತುಗಳನ್ನು ಅವರಿಗಾಗಿ ಅರ್ಪಿಸಿವೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೆಂಪೇಗೌಡ ಬಸ್ ನಿಲ್ದಾಣ ಮತ್ತು ನಾಡಪ್ರಭು ಕೆಂಪೇಗೌಡ ಮೆಟ್ರೋ ಸ್ಟೇಷನ್ ಬೆಂಗಳೂರಿನಲ್ಲಿ ಕಾಣಬಹುದು. ಇತ್ತೀಚೆಗಷ್ಟೇ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಬ್ಬಾಗಲಿನಲ್ಲೇ ಪ್ರಧಾನಿ ಅನಾವರಣಗೊಳಿಸಿದ್ದರು.