Published on: January 10, 2022

ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶ

ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶ

ಸುದ್ಧಿಯಲ್ಲಿ ಏಕಿದೆ ? ಗ್ರಾಮೀಣ ಕಾಮಗಾರಿಗಳ ಭೌತಿಕ ಮತ್ತು ಆರ್ಥಿಕ ಪ್ರಗತಿ ನಿಖರತೆಗಾಗಿ ‘ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶ’ ಉನ್ನತೀಕರಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ‘ಗಾಂಧಿ ಸಾಕ್ಷಿ ಕಾಯಕ 2.0’ ತಂತ್ರಾಂಶವನ್ನು ವಿಧಾನಸೌಧದಲ್ಲಿ ಬಿಡುಗಡೆಗೊಳಿಸಿತು.

ಏನಿದು ತಂತ್ರಾಂಶ?

  • ಗ್ರಾಮೀಣ ಪ್ರದೇಶದಲ್ಲಿ ಕೈಗೊಳ್ಳಲಿರುವ ರಾಜ್ಯ ಸರಕಾರದ ಯಾವುದೇ ಸಿವಿಲ್‌ ಕಾಮಗಾರಿಗಳ ಪ್ರಸ್ತಾವನೆಯಿಂದ ಟೆಂಡರ್‌, ಗುತ್ತಿಗೆದಾರರ ಮಾಹಿತಿ, ಭೌತಿಕ ಪ್ರಗತಿ ಮತ್ತು ಆನ್‌ಲೈನ್‌ ಪಾವತಿವರೆಗೂ ಹಂತ-ಹಂತದ ಮಾಹಿತಿಯನ್ನು ಅಳವಡಿಸುವ ತಂತ್ರಾಂಶ ಇದಾಗಿದೆ. ಕಾಮಗಾರಿ ಆರಂಭಿಸುವ ಮುನ್ನವೇ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಪ್ರದೇಶದ ಭೌಗೋಳಿಕ ಚಿತ್ರವನ್ನು ಗುರುತಿಸುವ ವಿಧಾನವನ್ನು ಈ ತಂತ್ರಾಂಶ ಹೊಂದಿದೆ.

ನಕಲು ತಡೆ

  • ಈ ತಂತ್ರಾಂಶದಿಂದ ಕಾಮಗಾರಿಗಳ ನಕಲು(ಡುಪ್ಲಿಕೇಷನ್‌) ತಡೆಯಬಹುದು ಹಾಗೂ ಭೌತಿಕ ಪ್ರಗತಿಯನ್ನು ಹಂತ-ಹಂತವಾಗಿ ತಂತ್ರಾಂಶದಲ್ಲಿ ಅಳವಡಿಸಬಹುದು. ಆನ್‌ಲೈನ್‌ನಲ್ಲೇ ಗುತ್ತಿಗೆದಾರರಿಗೆ ಬಿಲ್‌ ಪಾವತಿ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ.

ಯಾಕೆ ಹೊಸ ತಂತ್ರಾಂಶ?

  • ಮೊದಲಿನ ತಂತ್ರಾಂಶದಲ್ಲಿ ನಾನಾ ನ್ಯೂನತೆಗಳು ಇದ್ದವು. ಹೀಗಾಗಿ, ಹಣ ದುರುಪಯೋಗಪಡಿಸಿಕೊಂಡ ಹಲವು ಪ್ರಕರಣಗಳು ಬೆಳೆಕಿಗೆ ಬಂದಿವೆ. ಗುತ್ತಿಗೆದಾರರಿಗೆ ಕಾಮಗಾರಿಗಳ ಬಿಲ್‌ ಪಾವತಿಸುವ ಸಂದರ್ಭದಲ್ಲೇ ಆಯಾ ಕಾಮಗಾರಿಗಳ ಆರ್ಥಿಕ ಮತ್ತು ಭೌತಿಕ ಪ್ರಗತಿಯನ್ನು ತಂತ್ರಾಂಶದಲ್ಲಿಅಳವಡಿಸಿ ಬಿಲ್‌ ಪಾವತಿ ಮಾಡಲಾಗುತ್ತಿತ್ತು. ಈ ಪ್ರಕ್ರಿಯೆಯಿಂದ ಕಾಮಗಾರಿಗಳ ನಿಖರ ಮಾಹಿತಿ ಸರಕಾರದ ಹಂತದಲ್ಲಿ ದೊರೆಯುತ್ತಿರಲಿಲ್ಲ ಮತ್ತು ಕಾಮಗಾರಿ ಗುಣಮಟ್ಟದ ಬಗ್ಗೆಯೂ ಅನುಮಾನಗಳು ಮೂಡುತ್ತಿದ್ದವು. ಈ ಹಿನ್ನೆಲೆಯಲ್ಲಿ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ.
  • ಒಂದೇ ಸ್ಥಳದಲ್ಲಿ ಎರಡೆರಡು ಕಾಮಗಾರಿಗೆ ಬಿಲ್‌ ಪಡೆಯುವ ಅಕ್ರಮಕ್ಕೆ ತಡೆ ನೀಡಲು ಈ ವ್ಯವಸ್ಥೆ ಜಾರಿಗೆ ತರಲಾಗಿದೆ.
  • ಗ್ರಾಮೀಣ ಪ್ರದೇಶದಲ್ಲಿ ನಿರ್ಮಿತಿ ಕೇಂದ್ರ, ಗ್ರಾಪಂ, ಕೆಆರ್‌ಐಡಿಎಲ್‌ ಸೇರಿ ಹಲವು ಸಂಸ್ಥೆಗಳು ಸಿವಿಲ್‌ ಕಾಮಗಾರಿಗಳನ್ನು ನಡೆಸುತ್ತಿವೆ. ಈ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ತರಲು ಮತ್ತು ಪಾರದರ್ಶಕತೆ ತರಲು ತಂತ್ರಾಂಶ ಅಭಿವೃದ್ಧಿ ಪಡಿಸಲಾಗಿದೆ.