Published on: October 28, 2022

ಗೃಹ ಸಚಿವರ ಸಮ್ಮೇಳನ

ಗೃಹ ಸಚಿವರ ಸಮ್ಮೇಳನ

ಸುದ್ದಿಯಲ್ಲಿ ಏಕಿದೆ?

ಹರಿಯಾಣದ ಸೂರಜ್‍ಕುಂಡ್‍ನಲ್ಲಿ ಅಕ್ಟೋಬರ್ 27 -28ರಂದು ಅಖಿಲ ಭಾರತ ಗೃಹ ಸಚಿವರ ಸಮ್ಮೇಳನನಡೆಯಲಿದ್ದು, ಅಪರಾಧ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿಸುವ ಕುರಿತಂತೆ ಗಂಭೀರ ಚರ್ಚೆ ನಡೆಯಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಮುಖ್ಯಾಂಶಗಳು

  • ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಆಂತರಿಕ ಭದ್ರತೆ, ಸೈಬರ್ ಅಪರಾಧಗಳು ಮತ್ತು ನಿಯಂತ್ರಣ, ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಹಾಗೂ ಇನ್ನಿತರ ವಿಷಯಗಳ ಬಗ್ಗೆ ವಿಶೇಷ ಚರ್ಚೆ ನಡೆಯಲಿದ್ದು, ರಾಜ್ಯದಲ್ಲಿ ಅಪರಾಧಗಳನ್ನು ಪತ್ತೆ ಹಚ್ಚಲು ಕೈಗೊಂಡಿರುವ ವೈಜ್ಞಾನಿಕ ಕ್ರಮಗಳು, ತನಿಖೆ ಕಾರ್ಯದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ, ಬಗ್ಗೆ ಸಮ್ಮೇಳನದಲ್ಲಿ  ರಾಜ್ಯದಿಂದ ವಿಷಯ ಮಂಡನೆ ಮಾಡಲಾಗುವುದು.
  • ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ, ಅಪರಾಧ ಚಟುವಟಿಕೆಗಳ ನಿಯಂತ್ರಣ, ಅಪರಾಧ ಪತ್ತೆ, ಸೈಬರ್ ಕ್ರೈಂ ಮುಂತಾದ ವಿಷಯಗಳ ಬಗ್ಗೆ ತೆಗೆದುಕೊಂಡ ಕ್ರಮಗಳನ್ನು, ಸಭೆಯಲ್ಲಿ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.
  • ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಪರಾಧಿಗಳು ಕಾನೂನಿನ ಕುಣಿಕೆಯಿಂದ ನುಣುಚಿಕೊಳ್ಳದಂತೆ ಕ್ರಮ ಕೈಗೊಳ್ಳುವುದೂ ಸೇರಿದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ವಿಶೇಷ ಕ್ರಮಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಅಪರಾಧ ಸ್ಥಳ ಪರಿವೀಕ್ಷಣಾ ಅಧಿಕಾರಿಗಳ ನೇಮಕ:

  • ದೇಶದಲ್ಲಿಯೇ ಪ್ರಥಮ ಬಾರಿಗೆ, ಕರ್ನಾಟಕ ಸರಕಾರ ಅಪರಾಧ ಸ್ಥಳ ಪರಿವೀಕ್ಷಣಾ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿದ್ದು, ವೈಜ್ಞಾನಿಕವಾಗಿ ಸಾಕ್ಷ್ಯ ಸಂಗ್ರಹ, ಸಾಕ್ಷ್ಯ ಸಂರಕ್ಷಣೆ ಹಾಗೂ ನ್ಯಾಯಾಲಯಕ್ಕೆ ಸಲ್ಲಿಕೆ ಪ್ರಕ್ರಿಯೆಗಳನ್ನು ನಡೆಸಲು, ವಿಶೇಷ ತರಭೇತಿ ನೀಡಲಾಗಿದೆ.
  • ಮಾದಕ ವಸ್ತುಗಳ ವಿರುದ್ಧ ರಾಜ್ಯದಲ್ಲಿ ಅಭಿಯಾನದ ರೂಪದಲ್ಲಿ ಕಠಿಣ ಕ್ರಮ ಕೈಗೊಂಡಿದ್ದು, ಯುವ ಪೀಳಿಗೆ, ಮಾದಕ ವಸ್ತುಗಳ ಜಾಲಕ್ಕೆ ಬೀಳದಂತೆ ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು.