Published on: July 27, 2023

ಮಹದಾಯಿ ವನ್ಯಜೀವಿ ಧಾಮ

ಮಹದಾಯಿ ವನ್ಯಜೀವಿ ಧಾಮ

ಸುದ್ದಿಯಲ್ಲಿ ಏಕಿದೆ? ‘ಮಹದಾಯಿ ವನ್ಯಜೀವಿ ಧಾಮ, ಆಸುಪಾಸಿನ ಪ್ರದೇಶಗಳನ್ನು ‘ಹುಲಿ ಸಂರಕ್ಷಣಾ ಮೀಸಲು ಅರಣ್ಯ’ವೆಂದು ಘೋಷಿಸಿ, 3 ತಿಂಗಳಲ್ಲಿ ಅಧಿಸೂಚನೆ ಹೊರಡಿಸಬೇಕು’ ಎಂದು ಬಾಂಬೆ ಹೈಕೋರ್ಟ್ನ ಗೋವಾ ಪೀಠ ಗೋವಾ ಸರ್ಕಾರಕ್ಕೆ ಆದೇಶಿಸಿದೆ.

ನ್ಯಾಯಪೀಠದ ಆದೇಶ

  • ವನ್ಯಜೀವಿ (ಸಂರಕ್ಷಣಾ) ಕಾಯ್ದೆಯ ಅನುಸಾರ ಮಹದಾಯಿ ಹುಲಿ ಮೀಸಲು ಅರಣ್ಯವಾಗಿ ಘೋಷಿಸಲು ಕ್ರಮ ಕೈಗೊಳ್ಳಬೇಕು, ಮೂರು ತಿಂಗಳಲ್ಲಿ ಅಧಿಸೂಚನೆ ಹೊರಡಿಸಿ ಮಾಹಿತಿಯನ್ನು ಎನ್ಟಿಸಿಎಗೆ ಸಲ್ಲಿಸಬೇಕು.  ಮೀಸಲು ಧಾಮದ ಆಯಕಟ್ಟಿನ ಸ್ಥಳಗಳಲ್ಲಿ ಬೇಟೆ ತಡೆ ಕ್ಯಾಂಪ್ಗಳನ್ನು ಆರು ತಿಂಗಳಲ್ಲಿ ಸ್ಥಾಪಿಸಬೇಕು ಹಾಗೂ ಅರಣ್ಯರಕ್ಷಕರು, ಕಾವಲುಗಾರರನ್ನು ನೇಮಿಸಬೇಕು.
  • ಮೀಸಲು ಅರಣ್ಯ ಒತ್ತುವರಿ ತಡೆಗೆ ಕ್ರಮವಹಿಸಬೇಕು ಎಂದು ಅರಣ್ಯ ಇಲಾಖೆಗೆ ನಿರ್ದೇಶಿಸಿದೆ. ಮೀಸಲು ಅರಣ್ಯವಾಗಿ ಘೋಷಿಸಿದಲ್ಲಿ ದೊಡ್ಡ ಪ್ರಮಾಣದಲ್ಲಿ ಜನರ ಒಕ್ಕಲೆಬ್ಬಿಸಬೇಕಾದಿತು, ಹೆಚ್ಚಿನವರ ಹಕ್ಕುಗಳಿಗೆ ಧಕ್ಕೆ ಆಗಲಿದೆ ಎಂಬ ಗ್ರಹಿಕೆ ಇದೆ. ಇದನ್ನು ಸರಿಪಡಿಸಬೇಕು. ಅರಣ್ಯವಾಸಿಗಳ ಹಕ್ಕು ರಕ್ಷಣೆಗೆ ವರ್ಷದಲ್ಲಿ ಕ್ರಮವಹಿಸಬೇಕು.

ಹಿನ್ನೆಲೆ

  • ವನ್ಯಜೀವಿ ಧಾಮ, ಸಮೀಪದ ಅರಣ್ಯ ಭಾಗದಲ್ಲಿ ಜನವಸತಿಗಳಿವೆ ಹಾಗೂ ಹುಲಿ ಗೋವಾದ ಸ್ಥಳೀಯ ವನ್ಯಜೀವಿಯಲ್ಲ ಎಂಬ ಕಾರಣ ನೀಡಿ ಮೀಸಲು ಅರಣ್ಯವಾಗಿ ಘೋಷಿಸಲು ಗೋವಾ ಸರ್ಕಾರ ಈ ಹಿಂದೆ ವಿರೋಧ ವ್ಯಕ್ತಪಡಿಸಿತ್ತು.  ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್ಟಿಸಿಎ) ಮನವಿಯಂತೆ ಹುಲಿ ಮೀಸಲು ಅರಣ್ಯವಾಗಿ ಘೋಷಿಸಲು ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಿ ಸ್ಥಳೀಯ ಎನ್ಜಿಒ ಗೋವಾ ಫೌಂಡೇಷನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು.
  • ಕರ್ನಾಟಕ, ಮಹಾರಾಷ್ಟ್ರ ಹಾಗೂ ಪಶ್ಚಿಮಘಟ್ಟದ ಅರಣ್ಯ ಭಾಗಗಳ ಜೊತೆಗೆ ಭೌಗೋಳಿಕವಾಗಿ ಬೆಸೆದುಕೊಂಡಿರುವ ಮಹದಾಯಿ ವನ್ಯಜೀವಿ ಧಾಮದ ಅರಣ್ಯ ಭಾಗದಲ್ಲಿಕೆಲವು ಹುಲಿಗಳು ಕಾಣಿಸಿಕೊಂಡಿದ್ದವು. ಬಳಿಕ ಹುಲಿ ಮೀಸಲು ಪ್ರದೇಶವಾಗಿ ಘೋಷಿಸಬೇಕು ಎಂಬ ಬೇಡಿಕೆ ಎದ್ದಿತ್ತು. ಕಳೆದ ಮೂರು ವರ್ಷಗಳಲ್ಲಿ ಮಹದಾಯಿ ವನ್ಯಜೀವಿ ವಲಯದಲ್ಲಿ ನಾಲ್ಕು ಹುಲಿಗಳ ಹತ್ಯೆಯಾಗಿತ್ತು. ಹುಲಿಗಳ ಹತ್ಯೆ ಹಿಂದೆಯೇ ವರದಿ ನೀಡಿದ್ದ ಎನ್ಟಿಸಿಎ, ಕರ್ನಾಟಕ ಮತ್ತು ಗೋವಾದಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಪ್ರದೇಶವು ಹುಲಿ ಸಂತತಿ ವೃದ್ಧಿಗೆ ಸೂಕ್ತವಾದ ಪ್ರದೇಶವಾಗಿದೆ. ಇದನ್ನು ಮೀಸಲು ಅರಣ್ಯವಾಗಿ ಘೋಷಿಸಬೇಕು ಎಂದು ಸಲಹೆ ಮಾಡಿತ್ತು.

ಮಹದಾಯಿ ವನ್ಯಜೀವಿ ಧಾಮ

  • ಉತ್ತರ ಗೋವಾದಲ್ಲಿರುವ ಮಹದಾಯಿ ವನ್ಯಜೀವಿ ಧಾಮವು ಕಾಳಿ ಹುಲಿ ಮೀಸಲು ಪ್ರದೇಶ, ಭೀಮಾಘರ್ ವನ್ಯಜೀವಿ ಧಾಮ ಮತ್ತು ಭಗವಾನ್ ಮಹಾವೀರ ರಾಷ್ಟ್ರೀಯ ಉದ್ಯಾನ ಒಳಗೊಂಡಂತೆ ಭೌಗೋಳಿಕವಾಗಿ ಕರ್ನಾಟಕದ ಜೊತೆಗೆ ಬೆಸೆದುಕೊಂಡಿದೆ.