Published on: October 23, 2021

ರೈತರಿಗೆ ಗೋದಾಮು ವಿನಾಯಿತಿ

ರೈತರಿಗೆ ಗೋದಾಮು ವಿನಾಯಿತಿ

ಸುದ್ಧಿಯಲ್ಲಿ ಏಕಿದೆ? ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಸಂಗ್ರಹಿಸಿಟ್ಟು, ದರ ಏರಿಕೆಯಾದಾಗ ಮಾರಲು ಅನುಕೂಲವಾಗುವಂತೆ ರೈತರಿಗೆ ಉಗ್ರಾಣಗಳನ್ನು ರಿಯಾಯಿತಿ ದರದಲ್ಲಿ ನೀಡಲು ರಾಜ್ಯ ಸರಕಾರ ಮುಂದಾಗಿದೆ.

  • ಕರ್ನಾಟಕ ರಾಜ್ಯ ಉಗ್ರಾಣ ನಿಗಮ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಇತರೆ ಸಹಕಾರ ಸಂಸ್ಥೆಗಳು ಹೊಂದಿರುವ ಗೋದಾಮುಗಳಲ್ಲಿ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿಡಲು ರೈತರು ಪಾವತಿಸುವ ಶುಲ್ಕದಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ.25 ಹಾಗೂ ಪರಿಶಿಷ್ಟ ಜಾತಿ-ಪಂಗಡದ ರೈತರಿಗೆ ಶೇ.50 ರಿಯಾಯಿತಿ ಸಿಗಲಿದೆ. ಈ ಉದ್ದೇಶಕ್ಕಾಗಿ ರಾಜ್ಯ ಸರಕಾರ 25 ಕೋಟಿ ರೂ. ಅನುದಾನ ನಿಗದಿಪಡಿಸಿದೆ.

ಏನು ದಾಖಲೆ ಕೊಡಬೇಕು?

  • ಐದು ಎಕರೆ ವ್ಯಾಪ್ತಿಗೊಳಗಿರುವ ರೈತರಿಗೆ ಈ ಸೌಲಭ್ಯ ಸಿಗಲಿದೆ. ಈ ಸವಲತ್ತು ಪಡೆಯಲು ಆಧಾರ್‌, ಪಹಣಿ ಬೇಕು. ಪಹಣಿಯಲ್ಲಿ ಬೆಳೆ ನಮೂದಾಗಿಲ್ಲದೆ ಇದ್ದಲ್ಲಿ ಬೆಳೆ ದೃಢೀಕರಣ ಪತ್ರವನ್ನು ಸಲ್ಲಿಸಬೇಕು.

ಯಾವ ಉತ್ಪನ್ನಗಳಿಗೆ ಅನ್ವಯ?

  • ಆಹಾರ ಧಾನ್ಯಗಳು (ರಾಗಿ, ಭತ್ತ, ಜೋಳ, ಗೋಧಿ, ತೊಗರಿ ಇತ್ಯಾದಿ) ಎಣ್ಣೆ ಕಾಳುಗಳು, ದ್ವಿದಳ ಧಾನ್ಯ, ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ರೈತರು ತಾವು ಬೆಳೆದ ಉತ್ಪನ್ನ ಸಂಗ್ರಹಿಸಿಟ್ಟು, ಉತ್ತಮ ದರ ಬಂದಾಗ ಮಾರಬಹುದು. ಜತೆಗೆ ಕಡಿಮೆ ಬಡ್ಡಿ ದರದಲ್ಲಿ ಅಡಮಾನ ಸಾಲವೂ ಸಿಗಲಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇದರಿಂದ ಪ್ರಯೋಜನವಾಗಲಿದೆ.

9 ತಿಂಗಳ ಅವಧಿ

  • ಕೃಷಿ ಉತ್ಪನ್ನ ಸಂಗ್ರಹಿಸಿದ ದಾಸ್ತಾನಿಗೆ ಗರಿಷ್ಠ 9 ತಿಂಗಳ ಅವಧಿಗೆ ಅಥವಾ ರೈತರು ಕೃಷಿ ಉತ್ಪನ್ನಗಳನ್ನು ಗೋದಾಮುಗಳಿಂದ ಬಿಡಿಸಿಕೊಳ್ಳುವ ಅವಧಿ ಇದರಲ್ಲಿ ಯಾವುದು ಮೊದಲೋ ಆ ಅವಧಿಗೆ ರೈತರು ಪಾವತಿಸಬೇಕಾದ ಸಂಗ್ರಹ ಶುಲ್ಕದಲ್ಲಿನ ವಿನಾಯಿತಿ ಮೊತ್ತವನ್ನು ಸರಕಾರ ಭರಿಸಲಿದೆ.

ರಾಜ್ಯದಲ್ಲಿ 700 ಉಗ್ರಾಣ

  • ರಾಜ್ಯ ಉಗ್ರಾಣ ನಿಗಮ ವ್ಯಾಪ್ತಿಯಲ್ಲಿ 700ಕ್ಕೂ ಹೆಚ್ಚು ಉಗ್ರಾಣಗಳಿವೆ. ಒಟ್ಟಾರೆ 18.5 ಲಕ್ಷ ಮೆಟ್ರಿಕ್‌ ಟನ್‌ ಉತ್ಪನ್ನಗಳನ್ನು ಸಂಗ್ರಹಿಸುವ ಸಾಮರ್ಥ್ಯವಿದೆ. ಈ ಪೈಕಿ ಸುಮಾರು 10 ಲಕ್ಷ ಮೆಟ್ರಿಕ್‌ ಟನ್‌ನಷ್ಟು ಮಾತ್ರ ಕೃಷಿ ಉತ್ಪನ್ನ ಸಂಗ್ರಹಗೊಳ್ಳುತ್ತಿದೆ. ಉಳಿದಂತೆ ಉಗ್ರಾಣ/ಗೋದಾಮುಗಳು ಖಾಲಿಯಿರುತ್ತವೆ. ಹೀಗಾಗಿ ಖಾಲಿಯಿರುವ ವೇಳೆ ಕೃಷಿಯೇತರ ವಸ್ತುಗಳನ್ನು ಸಂಗ್ರಹಿಸಿಡಲು ಸರಕಾರ ಈ ಬಾರಿ ವಿಶೇಷವಾಗಿ ಅನುಮತಿ ನೀಡಿದೆ.
  • ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಉಗ್ರಾಣಗಳಿವೆ. ಕರಾವಳಿ, ಮಲೆನಾಡು ಭಾಗಗಳಲ್ಲಿ ಕಡಿಮೆ ಇವೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಉಗ್ರಾಣಗಳಿವೆ.

ಕೃಷಿಯೇತರ ವಸ್ತುಗಳಿಗೆ ಅವಕಾಶ

  • ಸಾವಯವ ಮತ್ತು ಸಾವಯವಲ್ಲದ ರಾಸಾಯನಿಕ, ಸಿಂಥೆಟಿಕ್‌ ವಸ್ತು, ಪೇಂಟ್‌, ವಾರ್ನಿಶ್‌, ಮ್ಯಾನ್‌ ಮೇಡ್‌ ಫೈಬರ್‌, ಕೋಲ್‌, ಬಟ್ಟೆ, ಸೋಪ್‌, ಸ್ಟೀಲ್‌ ಮತ್ತು ಕಬ್ಬಿಣದ ಪೈಪ್‌, ಎಕ್ಸ್‌ರೇ ಉಪಕರಣ, ಗ್ಲೂ, ಟೈಲ್ಸ್‌, ಸ್ಯಾನಿಟರಿ ಹೀಗೆ 86ಕ್ಕೂ ಹೆಚ್ಚು ಉತ್ಪಾದನೆ ವಸ್ತುಗಳ ಸಂಗ್ರಹಕ್ಕೆ ಉಗ್ರಾಣ ಬಳಸಿಕೊಳ್ಳಲು ಅವಕಾಶ ನೀಡಿ ಸಹಕಾರ ಆದೇಶ ಹೊರಡಿಸಿದೆ.