Published on: April 7, 2023

ರಾಣಿ ಕುಪ್ಪಮ್ಮ ಶಾಸನ

ರಾಣಿ ಕುಪ್ಪಮ್ಮ ಶಾಸನ

ಸುದ್ಧಿಯಲ್ಲಿ ಏಕಿದೆ? 15ನೇ ಶತಮಾನದಲ್ಲಿ ವಿಜಯಪುರದ ಆದಿಲ್ ಶಾಹಿಗಳ ದಾಳಿಯಿಂದ ವಿಜಯನಗರ ಪತನದ ನಂತರ ಬ್ರಿಟಿಷ್ ಆಗಮನದ ವರೆಗೂ ಅಸ್ತಿತ್ವದಲ್ಲಿ ಆನೆಗೊಂದಿ ಸಂಸ್ಥಾನದ ಕುರಿತು ಮಾಹಿತಿಯುಳ್ಳ ಶಿಲಾಶಾಸನಯೊಂದು ಗಂಗಾವತಿ ತಾಲೂಕಿನ ಸಾಣಾಪೂರ ಗ್ರಾಮದಲ್ಲಿ ಪತ್ತೆಯಾಗಿದೆ.

ಮುಖ್ಯಾಂಶಗಳು

  • ಸಣಾಪುರ ಗ್ರಾಮದಲ್ಲಿ ಆನೆಗೊಂದಿಯ ನರಪತಿ ಸಂಸ್ಥಾನದ ಆಳ್ವಿಕೆ ಮಾಡುತ್ತಿದ್ದ ರಾಣಿ ಕುಪ್ಪಮ್ಮಳಿಗೆ ಸೇರಿದ ಶಾಸನವನ್ನು ಗಂಗಾವತಿಯ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಕೆ.ಬಿ ಗೌಡಪ್ಪನವರ್ ತಂಡ ಶಾಸನವನ್ನು ಪತ್ತೆ ಹಚ್ಚಿದ್ದಾರೆ.

ಶಾಸನದಲ್ಲಿ ಏನಿದೆ?

  • ಶಿಲಾಶಾಸನದ ಮೇಲೆ 12 ಸಾಲುಗಳಲ್ಲಿ ಬರಹಗಳನ್ನು ಕೆತ್ತಲಾಗಿದೆ. ಶಾಸನವು ರಾಣಿ ಕುಪ್ಪಮ್ಮನವರ ಅಭಿಪ್ರಾಯದಂತೆ ಶ್ರೀರಂಗ ದೇವರಾಯ ಮಹಾರಾಯರ ಅಪ್ಪಣೆ ಪ್ರಕಾರ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ನಂದ್ಯಾಲ್ ನಾರಾಯಣ ರಾಜರು ಶಾಸನವಿರುವ ದೇವಾಲಯವನ್ನು ಕಟ್ಟಿಸಿದ ವಿಷಯವನ್ನು ತಿಳಿಸುತ್ತದೆ.
  • ಆನೆಗೊಂದಿ ನರಪತಿ ಸಂಸ್ಥಾನದ ಧೀಮಂತ ರಾಣಿಯಾಗಿದ್ದ ರಾಣಿ ಕುಪ್ಪಮ್ಮ ತನ್ನ ಗಂಡ ಕೃಷ್ಣದೇವರಾಯನ ಅಕಾಲಿಕ ಮರಣಾದ ನಂತರ ಬ್ರಿಟಿಷರ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಧಿಕ್ಕರಿಸಿ ಸಂಸ್ಥಾನವನ್ನು ಉಳಿಸಿಕೊಳ್ಳಲು ತನ್ನ ತಮ್ಮ ಪಂಪಾಪತಿರಾಜುವನ್ನು ದತ್ತು ಪಡೆದು ಶ್ರೀರಂಗದೇವರಾಯನೆಂದು ನಾಮಕರಣ ಮಾಡಿ ಪಟ್ಟಕ್ಕೆ ಕೂಡಿಸಿದಳು. ಅಲ್ಪವಯಸ್ಕ ನಾಗಿದ್ದ ಮಗನ ಪರವಾಗಿ ತಾನೇ ಆಡಳಿತ ನಡೆಸಿದಳು. ಜನಾನುರಾಗಿದ್ದ ಈಕೆ ಹಲವು ದಾನ ಧರ್ಮಗಳನ್ನು ಮಾಡಿದ್ದಾಳೆ.ಈಗಾಗಲೇ ರಾಣಿಯ ಹಲವು ಶಾಸನಗಳು ದೊರೆತಿದ್ದು ಅವು ವಾಲ್ಮೀಕಿ ಜನಾಂಗದ ಗುರುತ್ವ ಧಾರಣೆಯನ್ನು  ರಾಣಿ ವಹಿಸಿಕೊಂಡ ಬಗ್ಗೆ, ಕಂಪ್ಲಿ ಕಲ್ಮಠಕ್ಕೆ ಹಂಪಿಯಲ್ಲಿ ದಾಸೋಹಕ್ಕಾಗಿ ಮಂಟಪವೊಂದನ್ನು ದಾನ ನೀಡಿದ ಬಗ್ಗೆ ತಿಳಿಸುತ್ತವೆ.
  • ಈ ಶಾಸನದಲ್ಲಿ 1309ರ ಫಸಲಿ ಸನ್ (ವರ್ಷ) ಎಂದು ಉಲ್ಲೇ ಖಿಸಲಾಗಿದ್ದು, ಅದನ್ನು ಈಗಿನ ಆಂಗ್ಲ ಕ್ಯಾಲೆಂಡರ್ಗೆ ಹೋಲಿಸಿದರೆ ಕ್ರಿ.ಶ. 1899ಕ್ಕೆ ಸರಿ ಹೊಂದುತ್ತದೆ ಎಂದು ಇತಿಹಾಸಕಾರ ಶರಣಬಸಪ್ಪ ಕೋಲ್ಕಾರ ತಿಳಿಸಿದ್ದಾರೆ.