Published on: October 9, 2021

ಅರಣ್ಯ ಕಾನೂನು ಉದಾರೀಕರಣ

ಅರಣ್ಯ ಕಾನೂನು ಉದಾರೀಕರಣ

ಸುದ್ಧಿಯಲ್ಲಿ ಏಕಿದೆ? ಕೇಂದ್ರ ಸರಕಾರವು ಅರಣ್ಯ ಸಂರಕ್ಷಣೆ ಕಾಯಿದೆ 1980ಕ್ಕೆ ತಿದ್ದುಪಡಿ ತಂದು ಅರಣ್ಯ ಕಾನೂನನ್ನು ಉದಾರಗೊಳಿಸಲು ಮುಂದಾಗಿದೆ. ಇದರಿಂದಾಗಿ, ಮಹತ್ವದ ಯೋಜನೆಗಳಿಗೆ ಪೂರ್ವಾನುಮತಿ ಪಡೆಯದೆ ಅರಣ್ಯ ಭೂಮಿ ಬಳಕೆಗೆ ಮುಕ್ತ ಅವಕಾಶ ಸಾಧ್ಯವಾಗಲಿದೆ.

ಪ್ರಸ್ತುತ ಕಾಯ್ದೆಯಲ್ಲಿ ಏನಿದೆ ?

  • ಪ್ರಸ್ತುತ ಅರಣ್ಯ ಸಂರಕ್ಷಣೆ ಕಾಯಿದೆ 1980ರ ಅನ್ವಯ ಯಾವುದೇ ಯೋಜನೆಗಳಿಗೆ ಅರಣ್ಯ ಭೂಮಿ ಬಳಸುವಾಗ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಸಚಿವಾಲಯದ ಪೂರ್ವನುಮತಿ ಇಲ್ಲದೆ ಅರಣ್ಯ ಬಳಕೆ ಮಾಡುವಂತಿರಲಿಲ್ಲ. ಆದರೆ, ಕೇಂದ್ರ ಉದ್ದೇಶಿಸಿರುವ ತಿದ್ದುಪಡಿ ತಂದರೆ ಸಚಿವಾಲಯದ ಅನುಮತಿ ಬೇಕಾಗುವುದಿಲ್ಲ.

ಕಾಯಿದೆ ತಿದ್ದುಪಡಿಯ ಉದ್ದೇಶ

  • ಕಾಯಿದೆಯಲ್ಲಿನ ಕಠಿಣ ಕಾನೂನಿನಿಂದ ದೇಶದ ಭದ್ರತೆ ಹಾಗೂ ರಕ್ಷಣೆ, ಗಡಿಯಲ್ಲಿ ಮೂಲಸೌಕರ್ಯ, ಹೆದ್ದಾರಿ ಯೋಜನೆಗಳು ಸೇರಿದಂತೆ ತುರ್ತಾಗಿ ಕಾರ್ಯರೂಪಕ್ಕೆ ಬರಬೇಕಿರುವ ಮಹತ್ವದ ಯೋಜನೆಗಳು ವಿಳಂಬವಾಗುತ್ತಿದೆ. ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಯೋಜನೆಗೆ ವೇಗ ನೀಡುವುದು ಕಾಯಿದೆ ತಿದ್ದುಪಡಿಯ ಉದ್ದೇಶವಾಗಿದೆ

ಪ್ರಸ್ತಾವನೆಯ ಮುಖ್ಯಾಂಶಗಳೇನು?

  • 1996ರವರೆಗೆ ರಾಜ್ಯ ಸರಕಾರಗಳು ಪಟ್ಟಿ ಮಾಡಿದ ಡೀಮ್ಡ್ ಅರಣ್ಯಗಳು ಅರಣ್ಯ ಭೂಮಿ ಎಂದೇ ಪರಿಗಣನೆ.
  • 1980ಕ್ಕಿಂತ ಮೊದಲು (ಪ್ರಸಕ್ತ ಅರಣ್ಯ ಸಂರಕ್ಷಣೆ ಕಾಯಿದೆ ಜಾರಿಗೆ ಮುನ್ನ) ರೈಲ್ವೆ , ರಸ್ತೆ, ಸಾರಿಗೆ ಸಚಿವಾಲಯ, ಹೆದ್ದಾರಿ ಪ್ರಾಧಿಕಾರಗಳು ಸ್ವಾಧೀನಪಡಿಸಿದ ಭೂಮಿಯನ್ನು ಅರಣ್ಯ ಎಂದು ಪರಿಗಣಿಸಲಾಗುವುದಿಲ್ಲ. ಈ ಭೂಮಿಯಲ್ಲಿಅರಣ್ಯೇತರ ಚಟುವಟಿಕೆಗೆ ಅವಕಾಶ.
  • ತೈಲ ನಿಕ್ಷೇಪ, ನೈಸರ್ಗಿಕ ಅನಿಲ ಗಣಿಗಾರಿಕೆಗೆ ಇಆರ್‌ಡಿ(ಎಕ್ಸ್‌ಟೆಂಡೆಡ್‌ ರೀಚ್‌ ಡ್ರಿಲ್ಲಿಂಗ್‌)ನಂತಹ ತಂತ್ರಜ್ಞಾನ ಬಳಕೆಗೆ ಅವಕಾಶ ಇದೆ. ಇದರಿಂದ ಮಣ್ಣು, ವನ್ಯಜೀವಿ, ಜಲಚರಗಳ ಮೇಲೆ ಪರಿಣಾಮ ಬೀರದೆ ಇರುವುದರಿಂದ ಇವುಗಳನ್ನು ಪರಿಸರಸ್ನೇಹಿ ತಂತ್ರಜ್ಞಾನವೆಂದು ಪರಿಗಣಿಸಿ ಕಾಯಿದೆ ವ್ಯಾಪ್ತಿಯಿಂದ ಹೊರಗಿಡುವುದು.
  • 1996ರ ಸುಪ್ರೀಂಕೋರ್ಟ್‌ ಆದೇಶ, ಖಾಸಗಿ ಅರಣ್ಯ ಕಾಯಿದೆ ಹಾಗೂ ಅರಣ್ಯ ಸಂರಕ್ಷಣೆ ಕಾಯಿದೆ ಪ್ರಕಾರ ಅರಣ್ಯ ಭೂಮಿ ವ್ಯಾಪ್ತಿಯ ಖಾಸಗಿ ಭೂಮಿ ಮಾಲೀಕರಿಗೆ ಸಂಬಂಧಿಸಿದಂತೆ ನಿಯಮಗಳಲ್ಲಿಸಡಿಲತೆ ತರುವುದು. ಅದರಂತೆ ವಸತಿ ಘಟಕಗಳು ಸೇರಿದಂತೆ 250 ಚ.ಮೀ ವ್ಯಾಪ್ತಿಯಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ನೀಡುವುದು.
  • ಸರಕಾರಿ, ಅರಣ್ಯ ತರಬೇತಿ ಕೇಂದ್ರಗಳು, ಪ್ರಾಣಿ ಸಂಗ್ರಹಾಲಯಗಳಂತಹ ಯೋಜನೆಗಳು ಹಾಗೂ ಅವುಗಳ ಮೂಲ ಸೌಕರ್ಯ ಯೋಜನೆಗಳನ್ನು ಅರಣ್ಯ ಚಟುವಟಿಕೆಗಳೆಂದು ಪರಿಗಣಿಸುವುದು ಹಾಗೂ ಅವುಗಳ ಅಭಿವೃದ್ಧಿ, ಮೂಲಸೌಕರ್ಯ ಕಾಮಗಾರಿಗಳನ್ನು ಅರಣ್ಯ ಕಾಯಿದೆಯಿಂದ ಹೊರಗಿಡುವುದು

ಅನುಕೂಲವೇನು?

  • ಪ್ರಗತಿಪರ, ಜನೋಪಯೋಗಿ ಕೆಲಸಗಳಿಗೆ ಅಡೆತಡೆ ಇಲ್ಲ.
  • ಯೋಜನೆಗೆ ಅನುಮತಿ ಕುರಿತ ಗೊಂದಲ ನಿವಾರಣೆ

ಅನಾನುಕೂಲವೇನು?

  • ಅಭಿವೃದ್ಧಿಯ ಹೆಸರಿನಲ್ಲಿಅವ್ಯಾಹತವಾಗಿ ಅರಣ್ಯ ನಾಶ ಆಗಬಹುದು.
  • ಕಾಯಿದೆ ಸಡಿಲಿಕೆಯಿಂದಾಗಿ ಖಾಸಗಿ ಕಂಪನಿಗಳಿಂದ ಅಮೂಲ್ಯ ಅರಣ್ಯ ಉತ್ಪನ್ನ ದುರ್ಬಳಕೆ