Published on: June 14, 2022

ಡಿಜಿಟಲ್ ಆರೋಗ್ಯ ಸೇವೆ

ಡಿಜಿಟಲ್ ಆರೋಗ್ಯ ಸೇವೆ

ಸುದ್ದಿಯಲ್ಲಿ ಏಕಿದೆ? 

ಆಯುಷ್ಮಾನ್‌ ಭಾರತ ಡಿಜಿಟಲ್ ಮಿಷನ್‌ನ (ಎಬಿಡಿಎಂ) ತಂತ್ರಜ್ಞಾನ ಕೇಂದ್ರವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲಾಗುವುದು’ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (ಎನ್‌ಎಚ್‌ಒ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ಎಸ್. ಶರ್ಮಾ ತಿಳಿಸಿದರು. 

ಮುಖ್ಯಾಂಶಗಳು

  • ಇದು ಆರೋಗ್ಯ ಕ್ಷೇತ್ರದಲ್ಲಿರುವ ಕಂದಕಗಳನ್ನು ಮುಚ್ಚಿ, ಸುಸ್ಥಿರ ಮಾದರಿ ಆರೋಗ್ಯ ವ್ಯವಸ್ಥೆಯನ್ನು ಸೃಷ್ಟಿಸಲಿದೆ.
  • ನಾಸ್ಕಾಂ ಏರ್ಪಡಿಸಿದ್ದ `ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್’ ಸಮಾವೇಶದಲ್ಲಿ `ಬೆಂಗಳೂರೊಂದರಲ್ಲೇ ಆರೋಗ್ಯ ಕ್ಷೇತ್ರಕ್ಕೆ ಸಂಬಂಧೀಸಿದ 7,500 ನವೋದ್ಯಮಗಳಿವೆ. ತಂತ್ರಜ್ಞಾನ ಬಳಕೆಯಲ್ಲಿ ಕರ್ನಾಟಕ ಮುಂಚೂಣಿ ರಾಜ್ಯವಾಗಿದೆ’.
  • ಆರೋಗ್ಯ ಕ್ಷೇತ್ರದ ಎಲ್ಲ ವೈದ್ಯಕೀಯ ಸೇವೆಗಳನ್ನು ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್ ಅಡಿ ತರಲಾಗುತ್ತಿದೆ. ಸದ್ಯ ಕ್ಷಯಕ್ಕೆ ನಿಕ್ಷಯ್, ಲಸಿಕೆಗೆ ಕೋವಿನ್, ತಾಯಿ–ಮಗುವಿಗೆ ಆರ್ಸಿಎಚ್ ಪೋರ್ಟಲ್ ಸೇರಿದಂತೆ ವಿವಿಧ ಮೊಬೈಲ್ ಆ್ಯಪ್ ಹಾಗೂ ಪೋರ್ಟಲ್ಗಳಿವೆ. ಅವುಗಳನ್ನು ಒಂದೇ ವೇದಿಕೆಯಲ್ಲಿ ತರಲಾಗುತ್ತದೆ. ನೂತನ ವ್ಯವಸ್ಥೆಯಡಿ ಎಲ್ಲ ಆಸ್ಪತ್ರೆಗಳು ಹಾಗೂ ವೈದ್ಯರು ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ’.
  • ಕೋವಿನ್ ಪೋರ್ಟಲ್ ಮೂಲಕ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಹೀಗಾಗಿ, ಸಮಗ್ರ ಆರೋಗ್ಯ ಕ್ಷೇತ್ರವನ್ನು ಡಿಜಿಟಲೀಕರಣ ಮಾಡಲಾಗುವುದು’

ಸರ್ಕಾರದ ಕ್ರಮಗಳು

  • ರಾಜ್ಯದ ಆರೋಗ್ಯ ಸೇವೆಗಳ ಮಾಹಿತಿ, ಮಾನವ ಸಂಪನ್ಮೂಲ ವ್ಯವಸ್ಥೆ ಸಹಿತ ಆರೋಗ್ಯ ವಲಯದ ಸಮಗ್ರ ಮಾಹಿತಿಗಳನ್ನು ಕ್ರೋಡೀಕರಿಸಲಾಗುತ್ತಿದೆ. ಆ ಮೂಲಕ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯವಿದೆ. ಇದಕ್ಕೆ ಪೂರಕವಾಗಿ ಆಂಬುಲೆನ್ಸ್ ಸೇವೆಯನ್ನು ಇನ್ನೊಂದು ತಿಂಗಳಲ್ಲಿ ಸಮಗ್ರವಾಗಿ ಬದಲಾಯಿಸಲಾಗುತ್ತಿದೆ.
  • ರೋಗಿಗಳನ್ನು ಯಾವ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂಬ ಮಾಹಿತಿಯನ್ನು ಆಂಬುಲೆನ್ಸ್ ಚಾಲಕರಿಗೆ ಟೆಲಿಕಾಲ್ ಮೂಲಕ ಒದಗಿಸಲಾಗುವುದು. ಇದರಿಂದ ವಿಂಳಂಬವಿಲ್ಲದೆ ಅಗತ್ಯವಿರುವ ಚಿಕಿತ್ಸೆ ದೊರಕಿಸಲು ಸಾಧ್ಯ’.
  • ಕೊರೋನಾ ನಂತರ, ಆರೋಗ್ಯ ಕ್ಷೇತ್ರದ ಚಹರೆಗಳೇ ಬದಲಾಗಿವೆ. ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಇ-ಮಾನಸ್ ವ್ಯವಸ್ಥೆಯ ಮೂಲಕ 25 ಲಕ್ಷಕ್ಕೂ ಹೆಚ್ಚು ಜನರಿಗೆ ಕೌನ್ಸೆಲಿಂಗ್ ನೆರವು ಒದಗಿಸಲಾಗಿದೆ. ಇದನ್ನು ಕೇಂದ್ರ ಸರಕಾರ ಕೂಡ ಶ್ಲಾಘಿಸಿ, ಇತರೆ ರಾಜ್ಯಗಳಿಗೂ ಯೋಜನೆ ವಿಸ್ತರಿಸುವ ನಿರ್ಣಯವನ್ನು ಕೈಗೊಂಡಿದೆ.
  • ಹಾಗೆಯೇ ಟೆಲಿ ಐಸಿಯು, ಟೆಲಿ ಮೆಡಿಸನ್ ನಂತಹ ಕ್ರಮಗಳ ಮೂಲಕ ರಾಜ್ಯದ ಎಲ್ಲಾ ಭಾಗಗಳ ರೋಗಿಗಳಿಗೆ ಏಕರೂಪದ ಗುಣಮಟ್ಟದ ಚಿಕಿತ್ಸೆ ನೀಡಲಾಯಿತು.
  • ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಖಾಸಗಿ ಆಸ್ಪತ್ರೆಗಳ ಪಾತ್ರವೂ ಮಹತ್ವದ್ದಾಗಿದೆ. ದೇಶದಲ್ಲಿ ಶೇಕಡ 50ಕ್ಕಿಂತಲೂ ಹೆಚ್ಚಿನ ಜನರು ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ. ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಎಲ್ಲ ಮಾಹಿತಿಗಳನ್ನೂ ತೆಗೆದುಕೊಳ್ಳುತ್ತವೆ. ಆ ಮಾಹಿತಿಯನ್ನು ಸರಕಾರಗಳೊಂದಿಗೆ ಹಂಚಿಕೊಳ್ಳುತ್ತಿಲ್ಲ.
  • ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿನ ರೋಗಿಗಳ ಮಾಹಿತಿ ಹಂಚಿಕೊಂಡರೆ, ಸುಗಮ ಆರೋಗ್ಯ ಸೇವೆ ಒದಗಿಸಲು ಬೇಕಾಗಿರುವ ಸೂಕ್ತ ವ್ಯವಸ್ಥೆಯನ್ನು ರೂಪಿಸಬಹುದು. ಈ ನಿಟ್ಟಿನಲ್ಲಿ, ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಕಾರ್ಯಕ್ರಮದ ಭಾಗವಾಗಿ ಖಾಸಗಿ ಆಸ್ಪತ್ರೆಗಳ ಜತೆ ಒಡಂಬಡಿಕೆ ಮಾಡಿಕೊಳ್ಳುವುದು ಅವಶ್ಯವಾಗಿದೆ.
  • ಎಸ್ಟೋನಿಯಾ ಮತ್ತು ಇಸ್ರೇಲಿನಂತಹ ಸಣ್ಣಪುಟ್ಟ ದೇಶಗಳು ಕೂಡ ಡಿಜಿಟಲ್ ಆರೋಗ್ಯ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿವೆ. ಅಪಾರ ಜನಸಂಖ್ಯೆ ಹೊಂದಿರುವ ಭಾರತದಲ್ಲೂ ಇಂತಹ ಕ್ರಮ ಬರಬೇಕಾಗಿದೆ. ಪ್ರಧಾನಿ ಮೋದಿಯವರು ಜಾರಿಗೆ ತಂದಿರುವ ಎಬಿಎಆರ್ ಕೆ ಯೋಜನೆ ಮೂಲಕ 50 ಕೋಟಿ ಜನರಿಗೆ ತಲಾ 5 ಲಕ್ಷ ರೂ.ವರೆಗೂ ವೈದ್ಯಕೀಯ ವೆಚ್ಚವನ್ನು ಭರಿಸಲಾಗುತ್ತಿದೆ. ಆರೋಗ್ಯವಲಯದ ಸುಧಾರಣೆ ನಿಟ್ಟಿನಲ್ಲಿ ಇಂತಹ ಕ್ರಮಗಳು ಮುಖ್ಯ.

ಉದ್ದೇಶ

  • ದೇಶದ ಕಟ್ಟಕಡೆಯ ವ್ಯಕ್ತಿಗೂ ಸಮರ್ಪಕ ಆರೋಗ್ಯ ಸೇವೆ ನೀಡುವ ಗುರಿಯುಳ್ಳ `ಆಯುಷ್ಮಾನ್ ಭಾರತ ಡಿಜಿಟಲ್ ಮಿಶನ್’ (ಎಬಿಡಿಎಂ) ಕಾರ್ಯಕ್ರಮ ಜಾಗತಿಕ ಮಟ್ಟದ ಅತ್ಯಂತ ದೊಡ್ಡ ಉಪಕ್ರಮವಾಗಿದೆ. ಚಿಕಿತ್ಸೆ ಮತ್ತು ಔಷಧೋಪಚಾರ ಎಲ್ಲದ್ದಕ್ಕೂ ವೈದ್ಯರನ್ನು ಖುದ್ದು ಕಾಣುವ ಅನಿವಾರ್ಯತೆ ಕಡಿಮೆ ಮಾಡುವ ಉದ್ದೇಶದಿಂದ ಈ ಡಿಜಿಟಲ್‌ ವ್ಯವಸ್ಥೆ ಸೃಷ್ಟಿಸಲಾಗಿದೆ.

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಯೋಜನೆ

  • ಯುನಿವರ್ಸಲ್ ಹೆಲ್ತ್ ಕವರೇಜ್ (UHC) ನ ದೃಷ್ಟಿಯನ್ನು ಸಾಧಿಸಲು ರಾಷ್ಟ್ರೀಯ ಆರೋಗ್ಯ ನೀತಿ 2017 ರ ಶಿಫಾರಸಿನಂತೆ ಪ್ರಾರಂಭಿಸಲಾದ ಭಾರತದ ಪ್ರಮುಖ ಯೋಜನೆಯಾಗಿದೆ.
  • ಈ ಯೋಜನೆಯಡಿ ನಾಗರಿಕರು ತಮ್ಮದೇ ಅದ ಪ್ರತ್ಯೇಕ ಡಿಜಿಟಲ್‌ ಆರೋಗ್ಯ ಖಾತೆ (ಒಂದು ಗುರುತಿನ ಸಂಖ್ಯೆ) ತೆರೆಯಬಹುದಾಗಿದೆ. ಇದರಿಂದ ವಿಮಾ ಸಂಸ್ಥೆಗಳು ಮತ್ತು ನಾಗರಿಕರು ಅಗತ್ಯವಿದ್ದಾಗ ವಿದ್ಯುನ್ಮಾನವಾಗಿ ಆರೋಗ್ಯ ದಾಖಲೆಗಳನ್ನು ಪ್ರವೇಶಿಸಲು ಸಹಾಯವಾಗುತ್ತದೆ.
  • ಇರುವ ಡಿಜಿಟಲ್‌ ಆರೋಗ್ಯ ದಾಖಲೆಗಳನ್ನು ಈ ಖಾತೆಗೆ ಲಿಂಕ್‌ ಮಾಡಬಹುದಾಗಿದ್ದು, ಪ್ರತಿ ವ್ಯಕ್ತಿಯ ಸಂಪೂರ್ಣ ಆರೋಗ್ಯ ಕೈಪಿಡಿ ಸಿದ್ಧಗೊಳ್ಳಲಿದೆ. ಇದರಿಂದ ವೈದ್ಯಕೀಯ ಚಿಕಿತ್ಸೆಗೆ ದೊಡ್ಡ ಮಟ್ಟದಲ್ಲಿಅನುಕೂಲ ಸೃಷ್ಟಿಯಾಗಲಿದೆ. ಆಸ್ಪತ್ರೆಗಳು, ಸರ್ಜನ್ ಮಟ್ಟದ ಪರಿಣತ ವೈದ್ಯರಿಂದ ಹಿಡಿದು ಸಾಮಾನ್ಯ ವೈದ್ಯರವರೆಗೂ ಸಮಗ್ರ ದತ್ತಾಂಶ ಸಂಗ್ರಹಿಸಲಾಗುವುದು. ಈ ಮೂಲಕ, ಆರೋಗ್ಯ ಕ್ಷೇತ್ರವನ್ನು ಕಾಡುತ್ತಿರುವ ನಕಲಿ ವೈದ್ಯರ ಸಮಸ್ಯೆಗೂ ತೆರೆ ಬೀಳಲಿದೆ.
  • ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ) ಯೋಜನೆಯ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳಲಿದೆ.
  • ಯುನಿವರ್ಸಲ್ ಹೆಲ್ತ್ ಕವರೇಜ್ (UHC) ನ ದೃಷ್ಟಿಯನ್ನು ಸಾಧಿಸಲು ರಾಷ್ಟ್ರೀಯ ಆರೋಗ್ಯ ನೀತಿ 2017 ರ ಶಿಫಾರಸಿನಂತೆ ಪ್ರಾರಂಭಿಸಲಾದ ಭಾರತದ ಪ್ರಮುಖ ಯೋಜನೆಯಾಗಿದೆ.
  • ಆರೋಗ್ಯ ಐಡಿ ಉಚಿತವಾಗಿದೆ, ಸ್ವಯಂಪ್ರೇರಿತವಾಗಿದೆ. ಇದು ಆರೋಗ್ಯ ದತ್ತಾಂಶದ ವಿಶ್ಲೇಷಣೆಯನ್ನು ಮಾಡಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯ ಕಾರ್ಯಕ್ರಮಗಳಿಗೆ ಉತ್ತಮ ಯೋಜನೆ, ಬಜೆಟ್ ಮತ್ತು ಅನುಷ್ಠಾನಕ್ಕೆ ಕಾರಣವಾಗುತ್ತದೆ.