Published on: January 6, 2022

ಬಹು ಆಯಾಮದ ಬಡತನ ಸೂಚ್ಯಂಕ ವರದಿ’.

ಬಹು ಆಯಾಮದ ಬಡತನ ಸೂಚ್ಯಂಕ ವರದಿ’.

ಸುದ್ಧಿಯಲ್ಲಿ ಏಕಿದೆ ? ಹಿಂದಿ ಭಾಷಿಕ ರಾಜ್ಯಗಳಲ್ಲಿ ಶೇ 30ಕ್ಕಿಂತಲೂ ಹೆಚ್ಚು ಜನರು ಬಡವರು ಎನ್ನುತ್ತದೆ ಕೇಂದ್ರ ಸರ್ಕಾರದ ‘ಬಹು ಆಯಾಮದ ಬಡತನ ಸೂಚ್ಯಂಕ ವರದಿ’.

  • ಕೇಂದ್ರ ಸರ್ಕಾರವು ಇದೇ ಮೊದಲ ಬಾರಿಗೆ ಈ ಸೂಚ್ಯಂಕವನ್ನು ಸಿದ್ಧಪಡಿಸಿದೆ. 2015–16ನೇ ಸಾಲಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–4ರ ವರದಿಯ ದತ್ತಾಂಶಗಳನ್ನು ಆಧಾರವಾಗಿಟ್ಟುಕೊಂಡು ಅಧ್ಯಯನ ಮಾಡಲಾಗಿದೆ. ಆ ದತ್ತಾಂಶಗಳನ್ನು 2019–20ನೇ ಸಾಲಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–5ರ ವರದಿಯ ದತ್ತಾಂಶಗಳಿಗೆ ಹೋಲಿಸಿ ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ.

ಸೂಚ್ಯಂಕದ ಮಾನದಂಡಗಳು

  • ಪೌಷ್ಟಿಕ ಆಹಾರ, ಆರೋಗ್ಯ ಸೇವೆ ಲಭ್ಯತೆ, ಮರಣ ಪ್ರಮಾಣ, ಶುದ್ಧ ಕುಡಿಯುವ ನೀರಿನ ಲಭ್ಯತೆ, ಶೌಚಾಲಯ, ವಿದ್ಯುತ್ ಸಂಪರ್ಕ, ಮನೆ ಬಳಕೆ ವಸ್ತುಗಳು, ಶಿಕ್ಷಣ, ವಸತಿಯ ಸ್ವರೂಪ ಮತ್ತು ಬ್ಯಾಂಕ್‌ ಖಾತೆ ಹೊಂದಿರುವುದರ ಆಧಾರದಲ್ಲಿ ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ ಇಲ್ಲಿ ಬಡತನವು, ಇಡೀ ರಾಜ್ಯವೇ ಹಿಂದುಳಿದಿರುವುದನ್ನು ಸೂಚಿಸುತ್ತದೆ.

ವರದಿಯಲ್ಲಿ ಏನಿದೆ ?

  • ದಕ್ಷಿಣ ಮತ್ತು ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ, ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಡವರ ಪ್ರಮಾಣ ಅತ್ಯಂತ ಹೆಚ್ಚು. ಅಂದರಂತೆಯೇ ಈಶಾನ್ಯ ಭಾರತದ ಹಲವು ರಾಜ್ಯಗಳಲ್ಲಿ ಬಡವರ ಪ್ರಮಾಣ ಶೇ 20ರಿಂದ ಶೇ 35ರವರೆಗೂ ಇದೆ.
  • ಸುಧಾರಣೆ: 2015-16ಕ್ಕೆ ಹೋಲಿಸಿದರೆ, 2019–20ರ ಅವಧಿಯಲ್ಲಿ ಶಾಲೆ ವಂಚಿತರ ಪ್ರಮಾಣ ಕಡಿಮೆಯಾಗಿದೆ. ಬಿಹಾರದಲ್ಲಿ ಶೇ 9.8ರಷ್ಟು ಮತ್ತು ನಾಗಾಲ್ಯಾಂಡ್‌ನಲ್ಲಿ ಶೇ 5.40ರಷ್ಟು ಮಂದಿ ಶಾಲೆ ವಂಚಿತರಾಗಿದ್ದಾರೆ. ಬೇರೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಲೆ ವಂಚಿತರ ಪ್ರಮಾಣವು ಶೇ 5ಕ್ಕಿಂತಲೂ ಕಡಿಮೆ ಇದೆ.

ಕರ್ನಾಟಕದ ಸ್ಥಿತಿ

ಉತ್ತರ ಕರ್ನಾಟಕದಲ್ಲಿ ಹೆಚ್ಚು ಬಡವರು

  • ಉತ್ತರ ಕರ್ನಾಟಕದಲ್ಲಿ ಹೆಚ್ಚು ಬಡವರಿದ್ದಾರೆ ಎಂದು ನೀತಿ ಆಯೋಗದ ವರದಿಯ ದತ್ತಾಂಶಗಳು ತಿಳಿಸುತ್ತವೆ. ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಬಡವರ ಪ್ರಮಾಣ ಶೇ 19.42ರಿಂದ ಶೇ 41.67ರಷ್ಟಿದೆ.
  • ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳು, ಕಿತ್ತೂರು ಕರ್ನಾಟಕದ ವಿಜಯಪುರ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ಜನರು ಮೂಲಸೌಕರ್ಯಗಳ ಕೊರತೆಯಿಂದ ಬಡವರೆನಿಸಿಕೊಂಡಿದ್ದಾರೆ. ಈ ವರದಿಯು ಪ್ರಾದೇಶಿಕ ಅಸಮಾನತೆ ಹಾಗೂ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಎದುರಾಗಿರುವ ತಾರತಮ್ಯದತ್ತ ಬೊಟ್ಟು ಮಾಡಿದೆ.
  • ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಪೈಕಿ ಅತ್ಯಂತ ಹೆಚ್ಚು ಬಡವರು ಕಂಡುಬಂದಿರುವುದು ಯಾದಗಿರಿ ಜಿಲ್ಲೆಯಲ್ಲಿ. ಇಲ್ಲಿ ಶೇ 41.67ರಷ್ಟು ಬಡವರಿದ್ದಾರೆ. ಮೂಲ ಸೌಕರ್ಯ ವಂಚಿತ ಜಿಲ್ಲೆಗಳಲ್ಲಿ ಯಾದಗಿರಿ ಮೊದಲ ಸ್ಥಾನದಲ್ಲಿದೆ.
  • ಯಾದಗಿರಿಯ ನಂತರದ ಸ್ಥಾನದಲ್ಲಿರುವುದು ರಾಯಚೂರು ಜಿಲ್ಲೆ. ಜಿಲ್ಲೆಯ ಶೇ 32.19ರಷ್ಟು ಜನರು ಬಡವರು ಎಂದು ವರದಿ ಅಭಿಪ್ರಾಯಪಟ್ಟಿದೆ.
  • ಶೇ 20ರಿಂದ ಶೇ 30ರಷ್ಟು ಬಡವರನ್ನು ಹೊಂದಿರುವ ಆರು ಜಿಲ್ಲೆಗಳಿವೆ. ಕೊಪ್ಪಳ, ಬಳ್ಳಾರಿ, ಕಲಬುರ್ಗಿ, ವಿಜಯಪುರ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳು ಈ ವರ್ಗದಲ್ಲಿವೆ.
  • ರಾಜ್ಯದಲ್ಲಿ ಅತಿ ಕಡಿಮೆ ಬಡವರನ್ನು ಹೊಂದಿರುವ ಜಿಲ್ಲೆಗಳ ಸಾಲಿನಲ್ಲಿ ಬೆಂಗಳೂರು (ಶೇ 2.31) ಮೊದಲ ಸ್ಥಾನದಲ್ಲಿದೆ. ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಮೈಸೂರು, ಬೆಂಗಳೂರು ಗ್ರಾಮಾಂತರ, ಕೊಡಗು, ರಾಮನಗರ ಹಾಗೂ ಧಾರವಾಡ ಜಿಲ್ಲೆಗಲ್ಲಿ ಶೇ 10ಕ್ಕಿಂತ ಕಡಿಮೆ ಬಡವರಿದ್ದಾರೆ.