Published on: January 8, 2022

‘ಮೇಕೆದಾಟು ಯೋಜನೆ’

‘ಮೇಕೆದಾಟು ಯೋಜನೆ’

ಸುದ್ಧಿಯಲ್ಲಿ ಏಕಿದೆ ? ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ.

ಮೇಕೆದಾಟು ಎಲ್ಲಿದೆ? ಯಾಕಾಗಿ ಈ ಹೆಸರು?

  • ಬೆಂಗಳೂರು ನಗರಕ್ಕಿಂತ ಸುಮಾರು 90 ಕಿಲೋ ಮೀಟರ್ ದೂರದಲ್ಲಿರುವ ರಾಮನಗರದ ಜಿಲ್ಲೆಯ ಹನೂರು ಅರಣ್ಯ ವಲಯದ ಗುಡ್ಡೆಯ ನಡುವೆ ಒಂಟಿಗುಂಡು ಸ್ಥಳದಲ್ಲಿ ಹರಿಯುವ ಕಾವೇರಿ ನದಿ ಪ್ರದೇಶಕ್ಕೆ ಮೇಕೆ ದಾಟು ಎಂಬ ಹೆಸರು. ಕಾವೇರಿ ನದಿಯು ಅತ್ಯಂತ ರಭಸದಿಂದ ಹರಿದು ಬಂಡೆಗಳನ್ನು ಕೊರೆದು ವಿಚಿತ್ರ ಆಕೃತಿಗಳನ್ನು ಮೂಡಿಸಿದೆ. ಈ ಸ್ಥಳದಲ್ಲಿ ಆಹಾರ ತಿನ್ನಲು ಬರುವ ಮೇಕೆಗಳು ದಾಟುವ ಕಾರಣಕ್ಕಾಗಿ ಈ ಪ್ರದೇಶ ಹೆಸರು ಮೇಕೆದಾಟು ಎಂದು ಕರೆಯಲಾಗುತ್ತಿದೆ.

ಏನಿದು ಮೇಕೆದಾಟು ಯೋಜನೆ?

  • ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಮೇಕೆದಾಟು ಪರಿಸರದಲ್ಲಿ ಜಲಾಶಯ ನಿರ್ಮಾಣ ಮಾಡಿ, ಮಳೆಗಾಲದ ಸಂದರ್ಭದಲ್ಲಿ ಸಮುದ್ರ ಪಾಲಾಗುವ ಅಂದಾಜು 65-66 ಟಿಎಂಸಿ ಹೆಚ್ಚುವರಿ ನೀರನ್ನು ಸಂಗ್ರಹಿಸಬೇಕು ಎಂಬುದು ರಾಜ್ಯದ ಉದ್ದೇಶ.
  • ಅಷ್ಟೇ ಅಲ್ಲದೆ ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್‌ ಉತ್ಪಾದನೆಗೂಈ ಯೋಜನೆಯಿಂದ ಅನುಕೂಲವಾಗಲಿದೆ.
  • ಈ ಮೂಲಕ ಕುಡಿಯುವ ನೀರಿನ ಪೂರೈಕೆ ಹಾಗೂ ವಿದ್ಯುತ್ ಉತ್ಪಾದನೆ ಈ ಯೋಜನೆಯ ಗುರಿಯಾಗಿದೆ. ಒಟ್ಟು 5252.40 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗುವ ಯೋಜನೆಗೆ 3181.9 ಹೆಕ್ಟೇರ್ ಕಾವೇರಿ ವನ್ಯಜೀವಿ ಅಭಯಾರಣ್ಯದ ಪ್ರದೇಶ ಬೇಕಾಗಿದೆ. ಅಷ್ಟೇ ಅಲ್ಲದೆ 1869.5 ಹೆಕ್ಟೇರ್ ಅರಣ್ಯ ಭೂಮಿ ಸ್ವಾಧೀನಪಡಿಸಬೇಕಾಗಿದೆ. 201 ಹೆಕ್ಟೇರ್ ಜಮೀನು ಕಂದಾಯ ಹಾಗೂ ಖಾಸಗಿ ಭೂಮಿಯಾಗಿದೆ. ಒಟ್ಟು 5 ಹಳ್ಳಿಗಳಾದ ಮಡವಾಳ, ಕೊಂಗೆದೊಡ್ಡಿ, ಸಂಗಮ, ಮುಥತ್ತಿ, ಬೊಮ್ಮಸಂದ್ರ ಈ ಯೋಜನೆಯಿಂದ ಮುಳುಗಡೆಯಾಗಲಿವೆ.

ಯಾಕಾಗಿ ಹುಟ್ಟಿಕೊಂಡಿದೆ ವಿವಾದ?

  • 16 ಟಿಎಂಸಿ ಸಂಗ್ರಹ ಸಾಮರ್ಥ್ಯದ ಅಣೆಕಟ್ಟನ್ನು ಮೇಕೆದಾಟಿನಲ್ಲಿ ನಿರ್ಮಿಸುವ ಕರ್ನಾಕಟ ಸರ್ಕಾರದ ನಿಲುವಿಗೆ ತಮಿಳುನಾಡು ವಿರೋಧ ವ್ಯಕ್ತಪಡಿಸಿದೆ. ಡ್ಯಾಂ ನಿರ್ಮಾಣದಿಂದ ತಮಿಳುನಾಡಿನ ರೈತರಿಗೆ ನೀರಿನ ಕೊರತೆ ಉಂಟಾಗುತ್ತದೆ ಅನ್ನೋದು ಸ್ಟಾಲಿನ್ ಸರ್ಕಾರದ ವಾದವಾಗಿದೆ. ಅಷ್ಟೇ ಅಲ್ಲ, ಮೇಕೆದಾಟಿನಲ್ಲಿ ಅಣೆಕಟ್ಟೆ ನಿರ್ಮಾಣವಾಗುತ್ತಿರುವ ಪ್ರದೇಶ ಬೆಂಗಳೂರು ನಗರಕ್ಕಿಂತ ಸಾಕಷ್ಟು ದೂರದಲ್ಲಿದೆ. ಹೀಗಾಗಿ, ಈ ಯೋಜನೆಯ ಉದ್ದೇಶ ಕುಡಿಯುವ ನೀರನ್ನು ಬೆಂಗಳೂರು ನಗರಕ್ಕೆ ಪೂರೈಕೆ ಮಾಡುವುದು ಅಲ್ಲ, ಕರ್ನಾಟಕ ಕೊಡುತ್ತಿರುವ ಕಾರಣ ಒಪ್ಪಲು ಸಾಧ್ಯವಿಲ್ಲ ಎಂಬುವುದು ತಮಿಳುನಾಡಿನ ವಾದ.

ತಮಿಳುನಾಡಿನ ವಾದ ಏನು? ಕರ್ನಾಟಕದ ಸಮರ್ಥನೆ ಏನು?

  • ಕರ್ನಾಟಕದಲ್ಲಿ ಹುಟ್ಟಿ ಹರಿಯವ ಕಾವೇರಿ ನದಿ ನೀರು ಕೆಆರ್‌ಎಸ್‌ ಜಲಾಶಯ ದಾಟಿದ ಬಳಿಕ ಅನಿಯಂತ್ರಿತವಾಗಿ ತಮಿಳುನಾಡಿನತ್ತ ಸಾಗುತ್ತದೆ. ಕಬಿನಿ, ಶಿಂಷಾ, ಅರ್ಕಾವತಿ, ಸುವರ್ಣಾವತಿ ಸೇರಿದಂತೆ ಹಲವು ಜಲಮೂಲಗಳು ಇದಕ್ಕೆ ಸೇರ್ಪಡೆಯಾಗುತ್ತದೆ. ಒಂದು ವೇಳೆ ಮೇಕೆದಾಟು ಯೋಜನೆ ಜಾರಿಯಾದಲ್ಲಿ ಈ ಅನಿಯಂತ್ರಿತ ನೀರಿನ ಹರಿವಿಗೆ ತಡೆ ಒಡ್ಡಿದಂತಾಗುತ್ತದೆ. ಜೊತೆಗೆ 67.16 ಟಿಎಂಸಿ ನೀರಿನ ಸಂಗ್ರಹ ಪ್ರಸ್ತಾಪವು ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಸ್ಪಷ್ಟ ಉಲ್ಲಂಘನೆ ಎಂಬುವುದು ತಮಿಳುನಾಡು ಸರ್ಕಾರ ವಾದವಾಗಿದೆ.
  • ಆದರೆ ಕರ್ನಾಟಕ ಇದನ್ನು ನಿರಾಕರಿಸಿದೆ. ಮೇಕೆದಾಟು ಯೋಜನೆ ನಮ್ಮ ರಾಜ್ಯ ಹಕ್ಕು ಎಂದು ಕರ್ನಾಟಕ ಪ್ರತಿಪಾದಿಸಿದೆ. ಸಾಮಾನ್ಯ ಸಂದರ್ಭಗಳಲ್ಲಿ ಕರ್ನಾಟಕವು ತಮಿಳುನಾಡಿಗೆ ಎಷ್ಟು ಟಿಎಂಸಿ ನೀರು ಬಿಡಬೇಕು ಎಂಬುವುದನ್ನು ಕಾವೇರಿ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದ್ದು, ಸಂಕಷ್ಟದ ವರ್ಷದಲ್ಲಿ ಸಂಗ್ರಹವಾದ ನೀರನ್ನು ನಾವು ಬಳಸಬಹುದಾಗಿದೆ ಎಂದಿದೆ. ಮೇಕೆದಾಟು ಯೋಜನೆಯಿಂದ ಅಣೆಕಟ್ಟೆಯಲ್ಲಿ ಸಂಗ್ರಹಿಸಲಾಗುವ ನೀರಿನಲ್ಲಿ 400 ಮಗಾವ್ಯಾಟ್ ವಿದ್ಯುಚ್ಚಕ್ತಿ ಉತ್ಪಾದನೆ ಮಾಡಿದ ಬಳಿಕ ತಮಿಳುನಾಡಿಗೆ ನೀರು ಹರಿದು ಹೋಗುತ್ತದೆ.
  • ಪ್ರವಾಹ ಮತ್ತು ಸಂಕಷ್ಟದ ವರ್ಷಗಳಲ್ಲಿ ನೀರು ಬಳಕೆಗೆ ಇದು ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೆ ಅನುಕೂಲವಾಗಲಿದೆ ಎಂಬುವುದು ಕರ್ನಾಟಕದ ವಾದವಾಗಿದೆ.

ಯೋಜನೆ ಜಾರಿಗೆ ಅಡ್ಡಿ ಏನು?

  • ಮೇಕೆದಾಟು ಯೋಜನೆಗೆ ಕಾನೂನು ಸಮ್ಮತಿ ಸಿಕ್ಕರೂ, ಕೇಂದ್ರ ಪರಿಸರ ಇಲಾಖೆ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ. ಕಾರಣ, ಮೇಕೆದಾಟು ಯೋಜನೆಯಿಂದ 3181.9 ಹೆಕ್ಟೇರ್ ಕಾವೇರಿ ವನ್ಯಜೀವಿ ಅಭಯಾರಣ್ಯದ ಪ್ರದೇಶ ಹಾಗೂ 1869.5 ಹೆಕ್ಟೇರ್ ಅರಣ್ಯ ಭೂಮಿ ಹಾನಿಗೊಳಗಾಗುವ ಸಾಧ್ಯತೆ ಇದೆ.
  • ಯೋಜನೆ ಜಾರಿಯಾಗಿ ಭಾರೀ ಪ್ರಮಾಣದಲ್ಲಿ ಅರಣ್ಯ ಪ್ರದೇಶ ಮುಳುಗಡೆಯಾದಲ್ಲಿ, ಹುಲಿ, ಆನೆ ಸೇರಿ ಇನ್ನಿತರ ವನ್ಯ ಸಂಕುಲ ನೆಲೆ ಕಳೆದುಕೊಳ್ಳಲಿವೆ ಎಂಬ ಆತಂಕವೂ ಪರಿಸರವಾದಿಗಳಲ್ಲಿ ಇದೆ. ಸಂಗಮ ಅರಣ್ಯ ಪ್ರದೇಶದಲ್ಲಿನ ಆನೆ ಕಾರಿಡಾರ್‌ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಸಂಪರ್ಕ ಕಲ್ಪಿಸುತ್ತದೆ. ಈ ಅರಣ್ಯ ಪ್ರದೇಶದಲ್ಲಿ ಆನೆಗಳು ಹೆಚ್ಚಾಗಿದ್ದು, ಆನೆ ಕಾರಿಡಾರ್‌ಗೂ ಧಕ್ಕೆಯಾಗುವ ಆತಂಕ ವ್ಯಕ್ತವಾಗಿದೆ.ಪರಿಣಾಮ ಕೇಂದ್ರ ಅರಣ್ಯ ಇಲಾಖೆ ಯೋಜನೆಗೆ ಗ್ರೀನ್‌ ಸಿಗ್ನಲ್‌ ನೀಡಿಲ್ಲ.