Published on: April 23, 2024

ರಾಷ್ಟ್ರೀಯ ಮಿದುಳು ಆರೋಗ್ಯ ಕಾರ್ಯಪಡೆ

ರಾಷ್ಟ್ರೀಯ ಮಿದುಳು ಆರೋಗ್ಯ ಕಾರ್ಯಪಡೆ

ಸುದ್ದಿಯಲ್ಲಿ ಏಕಿದೆ? ಕೇಂದ್ರ ಸರಕಾರದ ಆರೋಗ್ಯ ಸಚಿವಾಲಯವು ‘ರಾಷ್ಟ್ರೀಯ ಮಿದುಳು ಆರೋಗ್ಯ ಕಾರ್ಯಪಡೆ‘ಯನ್ನು ರಚಿಸಿದೆ.

ಮುಖ್ಯಾಂಶಗಳು

  • ಮಿದುಳು ಹಾಗೂ ನರವ್ಯೂಹಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುವವರಿಗೆ ಉತ್ತಮ ಚಿಕಿತ್ಸೆ, ಪುನರ್ವ ಸತಿಗಾಗಿ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳು ಕುರಿತು ಕಾರ್ಯ ಪಡೆಯು ಜುಲೈ 15ರ ಒಳಗಾಗಿ ವರದಿ ಸಲ್ಲಿಸಲಿದೆ.
  • ಜಾಗತಿಕವಾಗಿ, ಸಾವುಗಳಿಗೆ ಮಿದುಳಿನ ತೊಂದರೆಯೇ ಎರಡನೇ ಪ್ರಮುಖ ಕಾರಣವಾಗಿದ್ದು, ಪ್ರತಿ ವರ್ಷ 90 ಲಕ್ಷದಷ್ಟು ಜನರು ಈ ಸಮಸ್ಯೆಯಿಂದ ಸಾವಿಗೀಡಾಗುತ್ತಿದ್ದಾರೆ.
  • ಭಾರತದಲ್ಲಿ ಕಳೆದಮೂರು ದಶಕಗಳಲ್ಲಿ ಕೈಗೊಂಡ ಅಧ್ಯಯನಗಳ ಪ್ರಕಾರ, ಪಾರ್ಶ್ವವಾಯು, ಅಪಸ್ಮಾರ, ತಲೆನೋವು, ಪಾರ್ಕಿನ್ಸನ್ಸ್ ಕಾಯಿಲೆ, ಬುದ್ಧಿಮಾಂದ್ಯದಂತಹ ತೊಂದರೆಗಳು ನಗರ ಪ್ರದೇಶದಲ್ಲಿ ವಾಸಿಸುತ್ತಿರುವವರಲ್ಲಿಯೇ ಹೆಚ್ಚಾಗಿ ಕಂಡುಬಂದಿವೆ.
  • ಸಾಮಾಜಿಕ–ಆರ್ಥಿಕ ಸ್ಥಿತಿ, ವಯೋಮಾನ, ಭೌಗೋಳಿಕತೆ ಹಾಗೂ ಲಿಂಗತ್ವದಂತಹ ಕಾರಣಗಳಿಂದಾಗಿ ಆರೋಗ್ಯ ಸೇವೆಗೆ ಸಂಬಂಧಿಸಿದ ರಾಷ್ಟ್ರೀಯ ಕಾರ್ಯಕ್ರಮದ ಲಾಭ ಎಲ್ಲರಿಗೂ ಸಿಗುತ್ತಿಲ್ಲ ಎಂದೂ ಸಚಿವಾಲಯ ತಿಳಿಸಿದೆ.
  • ಕಾರ್ಯಪಡೆಯ ನೇತೃತ್ವ: ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮನ್ ಬಿಹೇವಿಯರ್ ಅಂಡ್ ಅಲೈಡ್ ಸೈನ್ಸಸ್‌ನ ನಿರ್ದೇಶಕ ಡಾ.ರಾಜಿಂದರ್ ಕೆ ಧಮಿಜಾ

ಉದ್ದೇಶ

ಮಿದುಳಿಗೆ ಸಂಬಂಧಿಸಿದ ತೊಂದರೆಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಿಡಿದು ಎಲ್ಲ ಹಂತದವರೆಗೆ ಲಭ್ಯವಿರುವ ಚಿಕಿತ್ಸೆಯ ಗುಣಮಟ್ಟ ಹೆಚ್ಚಿಸುವ ಉದ್ದೇಶ, ಸಂಭಾವ್ಯ ತೊಂದರೆಯನ್ನು ತಡೆಗಟ್ಟುವುದು, ಲಭ್ಯವಿರುವ ಚಿಕಿತ್ಸೆ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಪ್ರಚಾರ ನಡೆಸುವುದು ಹಾಗೂ ಮಿದುಳಿನ ತೊಂದರೆಯಿಂದ ಗುಣಮುಖರಾದವರ ಪುನರ್ವಸತಿಗೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಈ ಕಾರ್ಯಪಡೆ ರಚಿಸಲಾಗಿದೆ.