Published on: October 10, 2022

ಸುದ್ಧಿ ಸಮಾಚಾರ – 10 ಅಕ್ಟೋಬರ್ 2022

ಸುದ್ಧಿ ಸಮಾಚಾರ – 10 ಅಕ್ಟೋಬರ್ 2022

  • ‘2021ರಲ್ಲಿ ‘ಮಾತಾಡ್ ಮಾತಾಡ್ ಕನ್ನಡ’ ಘೋಷ ವಾಕ್ಯದೊಂದಿಗೆ ಏರ್ಪಡಿಸಿದ್ದ ‘ಲಕ್ಷ ಕಂಠ’ ಗಾಯನ ಯಶಸ್ವಿಯಾಗಿದ್ದ ಹಿನ್ನೆಲೆಯಲ್ಲಿ ಅಕ್ಟೋಬರ್ 2022ರಲ್ಲಿ ರಾಜ್ಯದಾದ್ಯಂತ ಕನ್ನಡದ ಕವಿಗಳ ಜನಪ್ರಿಯ ಗೀತೆಗಳ ಕೋಟಿ ಕಂಠ ಗಾಯನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದೆ.
  • ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ ಅಪರೂಪದ ಟ್ರ್ಯಾವನ್ಕೋರ್ ಹಾರುವ ಅಳಿಲು ಪತ್ತೆಯಾಗಿದೆ. ಇವು ನಿಶಾಚರಿ ಪ್ರಾಣಿ, ಪಶ್ಚಿಮಘಟ್ಟದಲ್ಲಿರುವ ಟ್ರ್ಯಾವನ್ ಕೋರ್ ಹಾರುವ ಅಳಿಲು ಪ್ರಸ್ತುತ ದಕ್ಷಿಣ ಏಷ್ಯಾದ ಅತ್ಯಂತ ಚಿಕ್ಕ ಹಾರುವ ಅಳಿಲು ಜಾತಿಗಳಲ್ಲಿ ಒಂದಾಗಿದೆ.
  • ಅಕ್ಟೋಬರ ೨ ಗಾಂಧಿ ಜಯಂತಿ ದಿನವನ್ನು ಅಂತರರಾಷ್ಟ್ರೀಯ ಅಹಿಂಸಾ ದಿನವಾಗಿ ಆಚರಿಸಲಾಗುತ್ತದೆ. ಗಾಂಧಿ ಜಯಂತಿ ನಿಮಿತ್ತ ವಿಶ್ವಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಮಹಾತ್ಮಾ ಗಾಂಧಿ ಅವರ ಪೂರ್ಣ ವ್ಯಕ್ತಿಚಿತ್ರವನ್ನು ಹಾಲೊಗ್ರಾಮ್ ಮೂಲಕ ಪ್ರದರ್ಶಿಸಿ, ಶಿಕ್ಷಣ ಕುರಿತ ಅವರ ಚಿಂತನೆಗಳನ್ನು ಪ್ರಸಾರ ಮಾಡಲಾಯಿತು.ಈ ದಿನದ ವಿಷಯ: ‘ಮಾನವನ ಏಳಿಗೆಗಾಗಿ ಶಿಕ್ಷಣ’
  • ಮಂಗಳ ಗ್ರಹದ ಕಕ್ಷೆಯಲ್ಲಿ ಪರಿಭ್ರಮಣ ನಡೆಸಿ ಅಪರೂಪದ ಮಾಹಿತಿಗಳನ್ನು ಸಂಗ್ರಹಿಸಿ ಭೂಮಿಗೆ ಕಳುಹಿಸುತ್ತಿದ್ದ ಇಸ್ರೊದ ‘ಮಂಗಳಯಾನ’ ಕಕ್ಷೆಗಾಮಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ. ‘ಪಿಎಸ್ಎಲ್ವಿ–ಸಿ25’ ರಾಕೆಟ್ ಮೂಲಕ 2014ರ ಸೆ.24 ರಂದು ಯಶಸ್ವಿಯಾಗಿ ಮಂಗಳ ಗ್ರಹದ ಕಕ್ಷೆಯಲ್ಲಿ ಕಕ್ಷೆಗಾಮಿಯನ್ನು ಯಶಸ್ವಿಯಾಗಿ ಸೇರಿಸಲಾಗಿತ್ತು.
  • ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛತಾ ಸರ್ವೇಕ್ಷಣೆಯ ಫಲಿತಾಂಶ ಪ್ರಕಟವಾಗಿದ್ದು, ದೇಶದ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಮಧ್ಯಪ್ರದೇಶ ಇಂದೋರ್ ಸತತ ಆರನೇ ಬಾರಿಗೆ ಪಾತ್ರವಾಗಿದೆ.10ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ 45 ನಗರಗಳಲ್ಲಿ ಬೆಂಗಳೂರು 43ನೇ ಸ್ಥಾನ ಪಡೆದಿದೆ.
  • ಮಾದರಿ ನೀತಿ ಸಂಹಿತೆ ತಿದ್ದುಪಡಿಗೆ:  ಉಚಿತ ಕೊಡುಗೆ’ಗಳ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆಗೆ ತಿದ್ದುಪಡಿ ತರಲು ನಿರ್ಧರಿಸಿದೆ. ಒಂದೊಮ್ಮೆ ಆಯೋಗವು ಉದ್ದೇಶಿತ ತಿದ್ದುಪಡಿಯನ್ನು ಕೈಗೊಂಡರೆ, ರಾಜಕೀಯ ಪಕ್ಷಗಳು ಚುನಾವಣೆ ವೇಳೆ ತಾವು ನೀಡುವ ಭರವಸೆಗಳನ್ನು ಈಡೇರಿಸಲು ಬೇಕಿರುವ ಹಣಕಾಸಿನ ಕಾರ್ಯಸಾಧ್ಯತೆ ಕುರಿತ ಅಧಿಕೃತ ಮಾಹಿತಿಯನ್ನು ಮತದಾರರಿಗೆ ಒದಗಿಸಬೇಕಾಗುತ್ತದೆ. ರಾಜಕೀಯ ಪಕ್ಷಗಳ ಆದಾಯ ಕ್ರೋಡೀಕರಣದ ಮಾರ್ಗಗಳು, ಯೋಜಿತ ವೆಚ್ಚ, ಬದ್ಧ ಹೊಣೆಗಾರಿಕೆಯ ಪರಿಣಾಮಗಳು ಹಾಗೂ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್‌ ನಿರ್ವಹಣೆ ಕಾಯ್ದೆಯ (ಎಫ್‌ಆರ್‌ಬಿಎಂ) ಮಿತಿಗಳ ಮೇಲೆ ಉಂಟಾಗುವ ಪರಿಣಾಮಗಳ ಕುರಿತ ಸಮಗ್ರ ಮಾಹಿತಿಯನ್ನು ಪ್ರಮಾಣಿತ ನಮೂನೆ ಒಳಗೊಂಡಿರುತ್ತದೆ’ ಎಂದು ತಿಳಿಸಲಾಗಿದೆ.
  • ಏಕಕಾಲದಲ್ಲಿ ಎರಡು ಪದವಿ: ಯುಜಿಸಿ ಅಧಿಸೂಚನೆ
  • ಏಕಕಾಲದಲ್ಲಿ ಎರಡು ಪದವಿ ಪಡೆಯಲು ಅನುವಾಗುವಂತೆ ನಿಯಮಗಳಿಗೆ ಶಾಸನಬದ್ಧ ಬದಲಾವಣೆ ಮಾಡಬೇಕು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಎಲ್ಲ ವಿಶ್ವವಿದ್ಯಾಲಯಗಳಿಗೆ ಸೂಚಿಸಿದೆ. ಯುಜಿಸಿ ಕಳೆದ ಏಪ್ರಿಲ್‌ ತಿಂಗಳಲ್ಲಿ ವಿದ್ಯಾರ್ಥಿಗಳು ಏಕಕಾಲದಲ್ಲಿ ಪೂರ್ಣಪ್ರಮಾಣದಲ್ಲಿ ಎರಡು ಪದವಿ ಕೋರ್ಸ್ ಅಧ್ಯಯನ ನಡೆಸಲು ಅವಕಾಶ ಕಲ್ಪಿಸುವ ಅನುಮೋದನೆ ನೀಡಿತ್ತು.
  • 2026ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಶೂಟಿಂಗ್‌ ಸೇರ್ಪಡೆ
  • ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ನಡೆಯಲಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಕುಸ್ತಿ ಮತ್ತು ಆರ್ಚರಿ ಕ್ರೀಡೆಗಳನ್ನು ಕೈಬಿಡಲಾಗಿದ್ದು, ಶೂಟಿಂಗ್‌ ಅನ್ನು ಮರುಸೇರ್ಪಡೆ ಮಾಡಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕೂಟದಲ್ಲಿ ಶೂಟಿಂಗ್‌ ಕೈಬಿಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು.
  • ವಿಶ್ವ ಹಾಗೂ ಭಾರತದ ಮಹಿಳಾ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಜೂಲನ್‌ ಗೋಸ್ವಾಮಿ ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದ ನಂತರ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದರು. ಅದು ಅವರ ಅಂತಿಮ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.